ದೀಪಕ್ ಪ್ರಕರಣ ಎನ್ಐಎ ಗೆ ಒಪ್ಪಿಸಲು ಅಭ್ಯಂತರವಿಲ್ಲ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಜನವರಿ 05: ಮಂಗಳೂರಿನಲ್ಲಿ ಅನ್ಯಕೋಮಿನವರಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಲು ನಮ್ಮ ಅಭ್ಯಂತರ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಗೃಹ ಸಚಿವರು 'ನಮಗೆ ಸಿಬಿಐ ಮೆಲೂ ವಿಶ್ವಾಸವಿದೆ, ಎನ್ಐಎ ಮೇಲೂ ವಿಶ್ವಾಸವಿದೆ ನಮ್ಮ ಪೊಲೀಸರ ಮೇಲೂ ನಂಬಿಕೆ ಇದೆ, ದೀಪಕ್ ರಾವ್ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಲು ನಮ್ಮ ಅಭ್ಯಂತರ ಇಲ್ಲ' ಎಂದು ಬರೆದುಕೊಂಡಿದ್ದಾರೆ.
ದೀಪಕ್ ಕೊಲೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ದೀಪಕ್ ರಾವ್ ಕೊಲೆ ಆದಾಗಿನಿಂದಲೂ ಬಿಜೆಪಿ ಮುಖಂಡರು ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಒತ್ತಾಯಿಸಿದ್ದರು, ರಾಮಲಿಂಗಾ ರೆಡ್ಡಿ ಅವರ ಈಗಿನ ಹೇಳಿಕೆ ಗಮನಿಸಿದರೆ ಪ್ರಕರಣವನ್ನು ಎನ್ಐಎ ಗೆ ವಹಿಸುವ ಸಾಧ್ಯತೆ ದಟ್ಟವಾಗಿದೆ.
ಕೇವಲ ಟ್ವಿಟರ್ ನಲ್ಲಿ ಈ ಅಭಿಪ್ರಾಯವನ್ನು ಗೃಹಸಚಿವರು ಹಂಚಿಕೊಂಡಿದ್ದು, ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಕೋಮು ಸಂಘರ್ಷ ಹಾಗೂ ಹತ್ಯೆಯಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವ ಎಲ್ಲ ಸಂಘಟನೆಗಳೂ ನಿಷೇಧವಾಗಲಿ ದೀಪಕ್ರಾವ್ ಹತ್ಯೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲು ನಮಗೇನೂ ಅಭ್ಯಂತರವಿಲ್ಲ. ನಮಗೆ ಸಿಬಿಐ ಮೇಲೂ ವಿಶ್ವಾಸವಿದೆ, ಎನ್ಐಎ ಮೇಲೂ ವಿಶ್ವಾಸವಿದೆ. ನಮ್ಮ ಪೊಲೀಸರ ಮೇಲೂ ವಿಶ್ವಾಸವಿದೆ.
— Ramalinga Reddy (@RLR_BTM) January 5, 2018
- ರಾಮಲಿಂಗಾರೆಡ್ಡಿ, ಗೃಹ ಸಚಿವ#DeepakRao pic.twitter.com/DkQ3wfgRpm
ದೀಪಕ್ ರಾವ್ ಕೊಲೆಯ ನಂತರ ಪಿಎಫ್ಐ, ಎಸ್ಡಿಎಫ್ಐ ಸಂಘಟನೆಗಳ ನಿಷೇಧಕ್ಕೂ ಬಿಜೆಪಿ ಪಟ್ಟು ಹಿಡಿದಿದ್ದು, ಆ ಬಗ್ಗೆಯೂ ರಾಮಲಿಂಗಾ ರೆಡ್ಡಿ ಅವರು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಕೋಮು ದ್ವೇಷ ಹರಡುವ ಎಲ್ಲಾ ಸಂಘಟನೆಗಳೂ ನಿಷೇಧವಾಗಬೇಕು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಪಿಎಫ್ಐ, ಎಸ್ಡಿಎಫ್ಐ ಸಂಘಟನೆಗಳ ಜೊತೆಗೆ ಭಜರಂಗದಳ ಸಂಘಟನೆಯೂ ನಿಷೇಧವಾಗಲಿ ಎಂಬುದನ್ನು ಸೂಚಿಸಿದ್ದಾರೆ.