Bengaluru Rain: ಬೆಂಗಳೂರಲ್ಲಿ ಬೆಳಿಗ್ಗೆಯೇ ಶುರುವಾಯ್ತು ಜಿಟಿಜಿಟಿ ಮಳೆ- ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಏನಾಗಲಿದೆ ತಿಳಿಯಿರಿ
ಬೆಂಗಳೂರು, ಆಗಸ್ಟ್ 19: ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆ ಶುರುವಾಗಿದೆ. ಮೋಡ ಕವಿದ ವಾತಾವರಣವಿದ್ದು, ತಂಪು ಗಾಳಿ ಬೀಸುತ್ತಿದೆ. ಶುಕ್ರವಾರ ಸಂಜೆ ಅಲ್ಪ ಪ್ರಮಾಣದ ಮಳೆಯಾಗಿದ್ದು, ಉಷ್ಣತೆ ಸ್ವಲ್ಪ ಕಡಿಮೆಯಾಗಿದೆ. ಈ ಮಳೆಗಾಲದಲ್ಲಿ ನಗರದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ನಿನ್ನೆ ನಗರದಲ್ಲಿ 29.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸರಾಸರಿಗಿಂತ ಒಂದು ಡಿಗ್ರಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಹವಾಮಾನ ಪರಿಸ್ಥಿತಿಗಳ ಕುರಿತು 'ಬೆಂಗಳೂರು ಮಿರರ್'ಗೆ ಮಾತನಾಡಿರುವ ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಎ ಪ್ರಸಾದ್, 'ನಾವು ಮೂರರಿಂದ ನಾಲ್ಕು ದಿನಗಳ ಅವಧಿಗೆ ಗಣನೀಯ ಪ್ರಮಾಣದ ಮಳೆಯನ್ನು ನಿರೀಕ್ಷಿಸಬಹುದು' ಎಂದು ಹೇಳಿದ್ದಾರೆ.

'ಈ ತಿಂಗಳು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿಗಳಷ್ಟು ಹೆಚ್ಚಾಗಿದೆ. ಆಗಸ್ಟ್ನಲ್ಲಿ ಸರಾಸರಿ ಹಗಲಿನ ತಾಪಮಾನವು ಸುಮಾರು 28.1 ಡಿಗ್ರಿ ಸೆಲ್ಸಿಯಸ್ ಆಗಿರಬೇಕು. ಆದರೆ, ಈಗ ಮೂವತ್ತು ಡಿಗ್ರಿ ಸೆಲ್ಸಿಯಸ್ವರೆಗೂ ದಾಖಲಾಗಿದೆ' ಎಂದು ಹೇಳಿದ್ದಾರೆ.
ಪ್ರಸ್ತುತ ತಾಪಮಾನವು 30 ರಿಂದ 31 ಡಿಗ್ರಿ ಸೆಲ್ಸಿಯಸ್ ನಡುವೆ ದಾಖಲಾಗುತ್ತಿದೆ. ಈ ಉಷ್ಣತೆಯು ಮಳೆಯ ಕೊರತೆಗೆ ಕಾರಣವಾಗಿದೆ. ಈ ಬಾರಿ ತಡವಾಗಿ ಬಂದ ಮಾನ್ಸೂನ್ ಈ ಪರಿಸ್ಥಿತಿಗೆ ಕಾರಣವೆಂದು ಪ್ರಸಾದ್ ಹೇಳಿದ್ದಾರೆ.

ಹಿಂದಿನ ಆಗಸ್ಟ್ಗಳಲ್ಲಿ ಸ್ವಲ್ಪ ಕಡಿಮೆ ತಾಪಮಾನ ದಾಖಲಾಗಿದೆ. 2022 ರಲ್ಲಿ ದಾಖಲಾದ ಗರಿಷ್ಠ ತಾಪಮಾನವು 30.5 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, 2021 ರಲ್ಲಿ 30.7 ಡಿಗ್ರಿ ಸೆಲ್ಸಿಯಸ್ ಇತ್ತು. 2012ರ ರಲ್ಲಿ 32.4 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಪ್ರಸ್ತುತ ಉಷ್ಣತೆಯ ಹೊರತಾಗಿಯೂ, ಮುಂಬರುವ ದಿನಗಳಲ್ಲಿ ತಾಪಮಾನದಲ್ಲಿ ಇಳಿಕೆ ಕಾಣಲಿದೆ ಎಂದು ತಜ್ಞರು ಹೇಳಿದ್ದಾರೆ.
ಬೆಂಗಳೂರಿನ ವಾತಾವರಣದ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಹವಾಮಾನ ಇಲಾಖೆ, 'ನಿರೀಕ್ಷಿಸಿದಂತೆ ಬೆಂಗಳೂರಿನಲ್ಲಿ ಹಗಲಿನ ತಾಪಮಾನ ಕಡಿಮೆಯಾಗಿದೆ. ಗರಿಷ್ಠ ತಾಪಮಾನವು 29.5 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾಮಾನ್ಯ ವ್ಯಾಪ್ತಿಯಿಂದ ಕೇವಲ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ದಕ್ಷಿಣ ಮತ್ತು ಪೂರ್ವ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಲಘು ಮಳೆಯಾಗಿದೆ. ಪಶ್ಚಿಮ ಮಾರುತಗಳ ಉಲ್ಬಣದಿಂದಾಗಿ ಹಗಲಿನ ತಾಪಮಾನವು ಮುಂದಿನ 48 ಗಂಟೆಗಳ ಕಾಲ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ ಎಂಬುದಾಗಿ ಅಂದಾಜಿಸಲಾಗಿದೆ' ಎಂದು ತಿಳಿಸಿದೆ.

'ನೈಋತ್ಯ ಮಾನ್ಸೂನ್ ರಾಜ್ಯದಲ್ಲಿ ಕಡಿಮೆ ಮಳೆಯನ್ನು ತಂದಿದೆ. ಕರಾವಳಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಮತ್ತು ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯನ್ನು ನಿರೀಕ್ಷಿಸಲಾಗಿದೆ. ಚನ್ನಪಟ್ಟಣ ( ರಾಮನಗರ ಜಿಲ್ಲೆ ), ಮುಂಡಗೋಡು, ಶಿರಾಲಿ, ಕದ್ರಾಗಳಲ್ಲಿ ( ಉತ್ತರ ಕನ್ನಡ ಜಿಲ್ಲೆ ) 2 ಮಿಮೀ ಮತ್ತು ವಿವಿಧ ಸ್ಥಳಗಳಲ್ಲಿ 5 ಮಿಮೀ ಮಳೆಯಾಗಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮುಂದಿನ 48 ಗಂಟೆಗಳಲ್ಲಿ, ರಾಜ್ಯದ ವಿವಿಧ ಭಾಗಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯನ್ನು ನೀಡಿದೆ. ಕೆಲವು ಪ್ರದೇಶಗಳಲ್ಲಿ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹೇಳಿದೆ.












Click it and Unblock the Notifications