'ಮಕ್ಕಳ ಸುರಕ್ಷತೆಗೆ ಸಿದ್ರಾಮಯ್ಯ ಸರಕಾರ ಏನು ಮಾಡಿದೆ ರಾಹುಲ್?'
ಬೆಂಗಳೂರು, ಏಪ್ರಿಲ್ 16: ಮಕ್ಕಳ ವಿರುದ್ಧದ ಅಪರಾಧ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಈಗ ಎಚ್ಚರವಾಗಿದೆ. ಅಮಾಯಕಳಾದ ಎಂಟು ವರ್ಷದ ಅಸೀಫಾಳ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ಆರೋಪ ಮಾಡಿದ್ದಾರೆ.
ಅಸೀಫಾಳಿಗೆ ನ್ಯಾಯ ಸಿಗಬೇಕು ಎಂಬುದರಲ್ಲಿ ಯಾವುದೇ ರಾಜೀ ಇಲ್ಲ. ಮಕ್ಕಳ ವಿರುದ್ಧ ಇಂಥ ಪೈಶಾಚಿಕ ಕೃತ್ಯ ಎಸಗುವವರಿಗೆ ಗಂಭೀರವಾದ ಶಿಕ್ಷೆ ಆಗಲೇಬೇಕು. ಮಕ್ಕಳ ವಿರುದ್ಧದ ಅಪರಾಧ ಕೃತ್ಯಗಳಲ್ಲಿ ರಾಜಕೀಯ ಲಾಭ ಪಡೆಯುವ ಅವಕಾಶಗಳಂತೂ ಖಂಡಿತಾ ಅಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಅಪರಾಧ ಬಲಿಪಶುಗಳಾಗಿರುವ ಮಕ್ಕಳಿಗೆ ಇನ್ನೂ ನ್ಯಾಯ ದೊರೆಯಬೇಕಿದೆ. ಸದ್ಯಕ್ಕೆ ನಮ್ಮ ಮಕ್ಕಳ ರಕ್ಷಣೆ ಮಾಡುವ ಕಡೆಗೆ ಗಮನ- ಕಳೆದ ನಾಲ್ಕು ವರ್ಷದಿಂದ ಬೆಂಗಳೂರಿನಲ್ಲಿ ನಾನು ಮಾಡುತ್ತಿರುವುದು ಅದನ್ನೇ. ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಆಗಿದ್ದೇನೆ ಎಂಬ ಬಗ್ಗೆ ಚರ್ಚೆ ಆಗಬೇಕಿದೆ.

2014ರ ಫೆಬ್ರವರಿಯಿಂದ ಮಕ್ಕಳ ಸುರಕ್ಷತೆ ಬಗ್ಗೆ ಕಾಯ್ದೆ ತರುವ ವಿಚಾರವಾಗಿ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡುತ್ತಲೇ ಇದ್ದೇನೆ. ಸುರಕ್ಷತೆಗೆ ಮಾರ್ಗದರ್ಶಿ ಸೂತ್ರಗಳು, ಶಾಲೆಗಳಲ್ಲಿ ನಿಯಮಗಳ ಜಾರಿ, ಮಕ್ಕಳ ಕೋರ್ಟ್ ಗಳ ಸಂಖ್ಯೆಯನ್ನು ಹೆಚ್ಚಿಸುವುದು ಹೀಗೆ ನಾನಾ ವಿಚಾರಗಳ ಜಾರಿಗೆ ಒತ್ತಾಯ ಮಾಡಲಾಗಿತ್ತು ಎಂದಿದ್ದಾರೆ.
2015ರ ಆಗಸ್ಟ್ ನಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಬರೆದಿದ್ದೆ. ಕಾಂಗ್ರೆಸ್ ಸರಕಾರವಾಗಲೀ, ಈ ಇಬ್ಬರಾಗಲೀ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ. ವಿಪರ್ಯಾಸ ಅಂದರೆ, ಮಕ್ಕಳು ಬಲಿಪಶುಗಳಾದವು. ಇದು ಈ ಸರಕಾರವ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದ ಫಲ ಎಂದು ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಚುನಾವಣೆಗೂ ಪೂರ್ವಭಾವಿಯಾಗಿ ಮಾಡುತ್ತಿರುವ ದೇವಸ್ಥಾನ ತಿರುಗಾಟಕ್ಕೂ ಮುನ್ನ, ಕರ್ನಾಟಕದಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ನಾಗರಿಕವಾದ ಒಂದು ಚರ್ಚೆಗೆ ಬರಲಿ, ಸಿದ್ದರಾಮಯ್ಯ ಮಕ್ಕಳ ಸುರಕ್ಷತೆಗಾಗಿ ಏನು ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಸಲು ಅವರಿಗೆ ಆಹ್ವಾನ ನೀಡುತ್ತೇನೆ ಎಂದು ಹೇಳಿದ್ದಾರೆ.
ಅಸೀಫಾಳಿಗೆ ಆದ ಅನಾಹುತದಿಂದ ಪಾಠ ಕಲಿತು, ಕರ್ನಾಟಕದಲ್ಲಿನ ಸಾವಿರಾರು ಅಮಾಯಕ ಮಕ್ಕಳ ಬಗ್ಗೆ ಶಾಶ್ವತವಾದ ಗಮನ ನೀಡಬೇಕು. ಇಲ್ಲದಿದ್ದರೆ ಇಂಥ ಕ್ರೂರವಾದ ಅಪರಾಧ ಹಾಗೂ ಅಂಥ ಕೃತ್ಯ ಎಸಗುವವರು ಯಾವುದೋ ಚಿಲ್ಲರೆ ರಾಜಕಾರಣದಲ್ಲಿ ತಪ್ಪಿಸಿಕೊಂಡು ಬಿಡುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications