ಅ. 13ಕ್ಕೆ ರಾಹುಲ್ ಬೆಂಗಳೂರಿಗೆ, ಎಚ್ಎಎಲ್ ಸಿಬ್ಬಂದಿ ಜೊತೆ ಸಂವಾದ
ಬೆಂಗಳೂರು, ಅಕ್ಟೋಬರ್ 11: ಉಪಚುನಾವಣೆಗೆ ಮುಂಚೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ಈ ಭೇಟಿ ಚುನಾವಣೆಗಿಂತಲೂ ಬೇರೆಯದೇ ಕಾರಣಕ್ಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಅಕ್ಟೋಬರ್ 13 ರಂದು ನಗರಕ್ಕೆ ಬರುತ್ತಿರುವ ರಾಹುಲ್ ಗಾಂಧಿ ಅವರು ಎಚ್ಎಎಲ್ ಸಿಬ್ಬಂದಿ ಜೊತೆ ವಿಶೇಷ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ರಫೆಲ್ ಡೀಲ್ ವಿರುದ್ಧ ಸಮರ ಸಾರಿರುವ ರಾಹುಲ್ ಗಾಂಧಿ ಅವರು ಎಚ್ಎಎಲ್ ಸಿಬ್ಬಂದಿ ಜೊತೆ ಏನು ಮಾತನಾಡಲಿದ್ದಾರೆ ಎಂದು ದೇಶವೇ ಕಿವಿಗೊಟ್ಟು ಕೇಳಲಿದೆ.
ರಾಹುಲ್ ಗಾಂಧಿ ಅವರ ಎಚ್ಎಎಲ್ ಜೊತೆ ಸಂವಾದವನ್ನು ಎಚ್ಎಎಲ್ ಆವರಣದಲ್ಲೇ ಆಯೋಜಿಸಲು ಚಿಂತನೆ ನಡೆದಿತ್ತು. ಆದರೆ ಇದೀಗ ಈ ರೀತಿಯ ಕಾರ್ಯಕ್ರಮಕ್ಕೆ ಎಚ್ಎಎಲ್ ಸ್ಥಳಾವಕಾಶ ನೀಡುವುದಿಲ್ಲ ಎಂದಿದೆ ಹಾಗಾಗಿ ನಗರದ ಬೇರೆ ಸ್ಥಳದಲ್ಲಿ ಸಂವಾದ ಆಯೋಜಿಸಲಾಗುತ್ತಿದೆ.

ಯುಪಿಎ ಸರ್ಕಾರವು ರಫೆಲ್ ಒಪ್ಪಂದ ಮಾಡಿಕೊಂಡಿದ್ದಾಗ ವಿಮಾನಗಳ ತಯಾರಿ ಜವಾಬ್ದಾರಿಯನ್ನು ಎಚ್ಎಎಲ್ಗೆ ನೀಡಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ಆ ಒಪ್ಪಂದವನ್ನು ರದ್ದು ಪಡಿಸಿ ಎಚ್ಎಎಲ್ ಬದಲಿಗೆ ರಿಲಯನ್ಸ್ ಗೆ ಒಪ್ಪಂದ ಹಸ್ತಾಂತರಿಸಲಾಗುತ್ತು.
ರಾಹುಲ್ ಅವರು ಅಕ್ಟೋಬರ್ 13 ರಂದು ಬೆಂಗಳೂರಿನಲ್ಲಿ ಎಚ್ಎಎಲ್ ಸಿಬ್ಬಂದಿ ಜೊತೆ ಸಂವಾದ ನಡೆಸುತ್ತಿದ್ದು ಅಂದು ರಫೆಲ್ ವಿವಾದದ ಬಗ್ಗೆ ಮಾತನಾಡುತ್ತಾರಾ, ಅಥವಾ ನೌಕರರ ಅಭಿವೃದ್ಧಿ ಮತ್ತಿತರೆ ವಿಷಯಗಳನ್ನು ಮಾತ್ರವೇ ಚರ್ಚಿಸುತ್ತಾರಾ ಎಂಬುದು ಗಮನಿಸುವ ಅಂಶವಾಗಿದೆ.
ರಾಹುಲ್ ಗಾಂಧಿ ಅಂದು ಕಾಂಗ್ರೆಸ್ ಮುಖಂಡರ ಜೊತೆ ಉಪಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರನ್ನೂ ಭೇಟಿ ಆಗುವ ಸಾಧ್ಯತೆ ಇದೆ.












Click it and Unblock the Notifications