ಸಾಲು-ಸಾಲು ರಜೆ, ಬಸ್ ಪ್ರಯಾಣ ದುಬಾರಿ
ಬೆಂಗಳೂರು, ಅ.10 : ಶುಕ್ರವಾರದಿಂದ ಸಾಲು-ಸಾಲು ರಜೆಗಳು ಪ್ರಾರಂಭವಾಗುತ್ತಿವೆ. ಊರಿಗೆ ತೆರಳಲು ಜನರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಖಾಸಗಿ ಮತ್ತು ಕೆಎಸ್ಆರ್ ಟಿಸಿ ರಜೆಯ ಲಾಭ ಪಡೆದು, ಹಣ ಮಾಡಿಕೊಳ್ಳಲು ಟಿಕೆಟ್ ಶುಲ್ಕವನ್ನು ಏರಿಕೆ ಮಾಡಿವೆ. ಇದರಿಂದ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಶೇ 100ರಷ್ಟು ಹೆಚ್ಚಿಸಿದ್ದಾರೆ. ಆದರೆ, ಕೆಎಸ್ಆರ್ ಟಿಸಿ ವಿಶೇಷ ಬಸ್ ಗಳಲ್ಲಿ ಮಾತ್ರ ಶೇ 10ರಷ್ಟು ದರ ಹೆಚ್ಚಿಸಿದೆ. ಶುಕ್ರವಾರ ರಾತ್ರಿಯಿಂದ ಸಂಚರಿಸುವ ಬಸ್ ಗಳಲ್ಲಿ ಈ ದರ ಪಾವತಿ ಮಾಡಬೇಕಾಗುತ್ತದೆ.

ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಗಳ ನಡುವಿನ ಹೋಲಿಕೆಯನ್ನು ಒಮ್ಮೆ ಗಮನಿಸಿದರೆ ನಿಮಗೆ ದರ ಹೆಚ್ಚಳದ ಪರಿಣಾಮ ತಿಳಿಯಬಹುದು. ಖಾಸಗಿ ವೋಲ್ವೋ ಬಸ್ ಗಳಲ್ಲಿ ಬೆಳಗಾವಿಗೆ ಪ್ರಯಾಣಿಸಲು ನೀವು 1,750 ರೂ. ನೀಡಬೇಕಾಗಿದೆ.
ಕೆಎಸ್ಆರ್ ಟಿಸಿಯಲ್ಲಿ ಪ್ರಯಾಣದರ 898 ರೂ. ಮಂಗಳೂರಿಗೆ 1,100ರೂ.ಗಳನ್ನು ಖಾಸಗಿ ಬಸ್ ಗಳಲ್ಲಿ ನೀಡಬೇಕು. ಆದರೆ, ಕೆಎಸ್ಆರ್ ಟಿಸಿಯಲ್ಲಿ 740 ರೂ. ಪ್ರಯಾಣ ದರ ನಿಗದಿಗೊಳಿಸಲಾಗಿದೆ.
ಎರಡನೇ ಶನಿವಾರ, ನವರಾತ್ರಿ, ಬಕ್ರೀದ್, ವಾಲ್ಮೀಕಿ ಜಯಂತಿ ಸೇರಿದಂತೆ ಸಾಲು-ಸಾಲು ರಜೆಗಳು ಎದುರಾಗಿವೆ. ಶುಕ್ರವಾರ ಮತ್ತು ಶನಿವಾರ ಜನರು ತಮ್ಮ ಊರಿಗೆ ಪ್ರಯಾಣ ಬೆಳೆಸುತ್ತಾರೆ. ಇದನ್ನು ಸದುಪಯೋಗ ಮಾಡಿಕೊಳ್ಳಲು ಖಾಸಗಿ ಬಸ್ ಮಾಲೀಕರು ದರ ಹೆಚ್ಚಿಸಿದ್ದಾರೆ. (ಸಾಲು ಸಾಲು ಹಬ್ಬ; ಸಾಲು ಸಾಲು ರಜಾ ಮಜಾ!)
ವಿಶೇಷ ಬಸ್ ಸೌಲಭ್ಯ : ಕೆಎಸ್ಆರ್ ಟಿಸಿ 300 ವಿಶೇಷ ಬಸ್ ಸೌಲಭ್ಯವನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಒದಗಿಸಿದೆ. ಇವುಗಳಿಗೆ ಮುಂಗಡ ಬುಕ್ಕಿಂಗ್ ಮೂಲಕ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಮುಗಂಡ ಬುಕ್ಕಿಂಗ್ ಇಲ್ಲದ 700 ಬಸ್ ಸೌಲಭ್ಯವನ್ನು ಒದಗಿಸಲಾಗಿದೆ.
ದಸರಾ ಉತ್ಸವದ ಸಮಯದಲ್ಲಿ ಮೈಸೂರಿಗೆ ಪ್ರಯಾಣಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಕೆಎಸ್ಆರ್ ಟಿಸಿ ಬೆಂಗಳೂರಿನಿಂದ ಮೈಸೂರಿಗೆ 200 ಹೆಚ್ಚುವರಿ ಬಸ್ ಸೌಲಭ್ಯವನ್ನು ಕಲ್ಪಿಸಿದೆ. ಈ ವಿಶೇಷ ಬಸ್ ಗಳಲ್ಲಿ ಶೇ 10ರಷ್ಟು ಹೆಚ್ಚಿನ ಪ್ರಯಾಣ ದರ ಪಾವತಿ ಮಾಡಬೇಕಾಗುತ್ತದೆ.












Click it and Unblock the Notifications