ಬೆಂಗಳೂರು ನಗರದೊಳಗೆ ಖಾಸಗಿ ಬಸ್ ನಿಷೇಧ?
ಬೆಂಗಳೂರು, ನವೆಂಬರ್ 07 : ಬೆಂಗಳೂರು ನಗರದೊಳಗೆ ಖಾಸಗಿ ಬಸ್ ಪ್ರವೇಶ ನಿಷೇಧಿಸುವ ಪ್ರಸ್ತಾವನೆ ಬಗ್ಗೆ ಪುನಃ ಚರ್ಚೆ ಆರಂಭವಾಗಿದೆ. ಸಾರಿಗೆ ಇಲಾಖೆ ಈ ಕುರಿತು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಶೀಘ್ರದಲ್ಲಿಯೇ ತೀರ್ಮಾನ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು ಸಂಚಾರಿ ಪೊಲೀಸರು ಒಂದು ವರ್ಷದ ಹಿಂದೆ ನಗರದೊಳಕ್ಕೆ ಖಾಸಗಿ ಬಸ್ ಪ್ರವೇಶ ನಿರ್ಬಂಧಿಸುವ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆಗೆ ಸಲ್ಲಿಸಿದ್ದರು. ಸದ್ಯ, ಇಲಾಖೆ ಈ ಪ್ರಸ್ತಾವನೆ ಕುರಿತು ಸರಣಿ ಸಭೆಗಳನ್ನು ನಡೆಸಿದೆ. ಈ ಪ್ರಸ್ತಾವನೆಯನ್ನು ಜಾರಿಗೆ ತರಲು ಇಲಾಖೆ ಚಿಂತನೆ ನಡೆಸಿದೆ.

ಬೆಂಗಳೂರು ನಗರಕ್ಕೆ 8 ಮುಖ್ಯ ರಸ್ತೆಗಳಿಂದ ಪ್ರತಿದಿನ 8000 ಖಾಸಗಿ ಬಸ್ಸುಗಳು ಆಗಮಿಸುತ್ತವೆ. ಹಬ್ಬ, ರಜೆಯ ದಿನಗಳಲ್ಲಿ ಇವುಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಖಾಸಗಿ ಬಸ್ ಚಾಲಕರು ನಗರದಲ್ಲಿ ಬಸ್ ನಿಲುಗಡೆ ಮಾಡುವಾಗ ಯಾವುದೇ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ಸಂಚಾರಿ ಪೊಲೀಸರಿಗೆ ಈ ಕುರಿತು 10 ಸಾವರಕ್ಕೂ ಅಧಿಕ ದೂರುಗಳು ಬಂದಿವೆ.
ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಈ ಪ್ರಸ್ತಾವನೆಯನ್ನು ಜಾರಿಗೆ ತರಲು ಆಸಕ್ತಿ ತೋರಿಸಿದ್ದಾರೆ. ಆದ್ದರಿಂದ, ಈ ಬಗ್ಗೆ ಚರ್ಚೆ ಆರಂಭವಾಗಿದೆ. ಬಸ್ಸುಗಳನ್ನು ನಿಷೇಧಿಸಿದರೆ ಅವುಗಳನ್ನು ಎಲ್ಲಿ ನಿಲುಗಡೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಕೆಂಗೇರಿ, ಬೈಯಪ್ಪನಹಳ್ಳಿ, ಕೆ.ಆರ್.ಪುರಂ ಮುಂತಾದ ಪ್ರದೇಶದಲ್ಲಿ ಬಸ್ಸುಗಳನ್ನು ನಿಲುಗಡೆಗೊಳಿಸುವ ಪ್ರಸ್ತಾವನೆ ಇದೆ. ಈ ಬಗ್ಗೆ ತಜ್ಞರ ಅಭಿಪ್ರಾಯವನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಪಡೆದುಕೊಂಡಿದ್ದಾರೆ.












Click it and Unblock the Notifications