ಭಾರತದ ಸಂಸ್ಕೃತಿ, ಮೌಲ್ಯಗಳನ್ನು ವಿಶ್ವಕ್ಕೆ ಹಂಚಿ: ರಾಷ್ಟ್ರಪತಿ
ಬೆಂಗಳೂರು, ಜನವರಿ 10: ಪ್ರಗತಿ ಸಾಧಿಸುತ್ತಿರುವ ಭಾರತದ ಯಶಸ್ಸು ಮತ್ತು ಮೌಲ್ಯಗಳನ್ನು ವಿಶ್ವಕ್ಕೆ ಹಂಚಬೇಕಿದೆ ಎಂದು ರಾಷ್ಟ್ರಪತಿ ಪ್ರಣಭ್ ಮುಖರ್ಜಿ ತಿಳಿಸಿದರು.
14ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿರುವ ರಾಷ್ಟ್ರ ಇದು ದೇಶವಾಸಿಗಳ ಭಾಷೆ, ಧರ್ಮಗಳ ವಿವಿಧತೆ ಹೊಂದಿದೆ. ಇಷ್ಟೆಲ್ಲಾ ಇದ್ದರೂ ಏಕತೆಯಿಂದ ಬದುಕುವ ಜನರು ಎಲ್ಲಿಯೂ ದೊರೆಯುವುದಿಲ್ಲ. ಹೀಗಾಗಿ ಭಾರತದ ರಾಯಭಾರಿಗಳಾಗಿ ನೀವು ದೇಶದ ಸಂಸ್ಕೃತಿ, ಮೌಲ್ಯ, ಜ್ಞಾನವನ್ನು ಹರಡಲು ನಿಮಗೆ ಸಿಕ್ಕಿರುವ ಸದವಕಾಶವನ್ನು ಬಳಸಿಕೊಳ್ಳಿ ಎಂದು ಪ್ರವಾಸಿ ಭಾರತಿಯರಿಗೆ ಸಲಹೆ ನೀಡಿದರು.[ಪ್ರವಾಸಿ ಭಾರತೀಯ ದಿವಸ: ಮೋದಿ ಭಾಷಣದ ಮುಖ್ಯಾಂಶ]
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭಾರತ ಮೂಲದ ಮೂವತ್ತು ಮಂದಿಗೆ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿದ ಅವರು, ಕೊಲ್ಲೆ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ದೇಶಿಯರು ತಮ್ಮ ಕುಟುಂಬ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲಿನ ಪೌರತ್ವ ಸಿಗದ ಕಾರಣ ಅವರು ಎಲ್ಲ ಸವಲತ್ತುಗಳನ್ನು ಅವರು ಅನುಭವಿಸಲು ಆಗುತ್ತಿಲ್ಲ, ಸುರಕ್ಷತೆಯೂ ಇಲ್ಲ ಎಂದರು.
ಅನಿವಾಸಿ ಭಾರತೀಯರನ್ನು ವಿವಾಹವಾಗುವ ಹೆಣ್ಣುಮಕ್ಕಳು ನೋವಿನಲ್ಲಿ ನರಳುತ್ತಿದ್ದಾರೆ ಅವರ ಬಗ್ಗೆ ಸ್ಪಂದನೆಯ ಅಗತ್ಯವಿದೆ. ಇದಕ್ಕೆ ಸರ್ಕಾರದೊಂದಿಗೆ ಸಹಕರಿಸಬೇಕಿದೆ. ಅಲ್ಲದೆ ಕೇಂದ್ರದ ಜನಪರ ಕಾರ್ಯಕ್ರಮಗಳಿಗೆ ಕೈಜೋಡಿಸಿದರೆ ಭಾರತೀಯರಿಗೆ ಬಹಳಷ್ಟು ಅವಕಾಶವಿದೆ ಎಂದು ಹೇಳಿದರು.
ಪ್ರವಾಸಿ ಭಾರತೀಯರು ತಾವು ಪಡೆದ ಜ್ಞಾನವನ್ನು ಸ್ವದೇಶಕ್ಕೆ ಬಂದು ಐಐಟಿ, ಐಐಎಂಗಳಂಥ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಂಚಿ ಕೊಳ್ಳುವ ಮೂಲಕ ಸರ್ಕಾರ ಆರಂಭಿಸಿರುವ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು ಎಂದರು.