ಪ್ರಸಿದ್ಧಿ ಚಿಟ್ ಫಂಡ್ ವಂಚನೆ ಪ್ರಕರಣ ಸಿಐಡಿಗೆ ಹಸ್ತಾಂತರ
ಬೆಂಗಳೂರು, ಅಕ್ಟೋಬರ್ 13 : 'ಪ್ರಸಿದ್ಧಿ ಚಿಟ್ ಫಂಡ್' ಸಂಸ್ಥೆ ವಿರುದ್ಧದ ವಂಚನೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರ ಮಾಡಿದೆ. ನಟಿ ಸಂಜನಾರ 25 ಲಕ್ಷ ಸೇರಿದಂತೆ ಹಲವು ಮಂದಿಗೆ ಸಂಸ್ಥೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದೆ.
ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಆಗಸ್ಟ್ನಲ್ಲಿ ಚಿಟ್ ಫಂಡ್ ಸಂಸ್ಥೆ ವಿರುದ್ಧ ದೂರು ದಾಖಲಾಗಿತ್ತು. ಅಕ್ಟೋಬರ್ 12ರಂದು ಸರ್ಕಾರ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಿದೆ. ಸಂಸ್ಥೆಯ ಮುಖ್ಯಸ್ಥ ಮಹೇಶ್, ವ್ಯವಸ್ಥಾಪಕ ನಿರ್ದೇಶಕಿ ನಿರೂಪಾ ಅವರಿಗೆ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ನೀಡಿದೆ.

100ಕ್ಕೂ ಅಧಿಕ ಜನರಿಂದ ಹಣ ಸಂಗ್ರಹ ಮಾಡಿರುವ ಪ್ರಸಿದ್ಧಿ ಚಿಟ್ ಫಂಡ್, ಗ್ರಾಹಕರಿಗೆ ಹಣವನ್ನು ಮರಳಿಸದೆ ವಂಚನೆ ಮಾಡಿದೆ. ಚಿತ್ರನಟಿ ಸಂಜನಾ ಸೇರಿದಂತೆ ಹಲವು ಜನರು ಸಂಸ್ಥೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ನಟಿ ಸಂಜನಾ ಅವರಿಗೆ 2014ರಲ್ಲಿ ಮಹೇಶ್, ನಿರೂಪಾ ದಂಪತಿ ಪರಿಚಯವಾಗಿತ್ತು. ಸಂಸ್ಥೆಯಲ್ಲಿ ಹಣ ಹೂಡಿ ಲಾಭಗಳಿಸಿ ಎಂದು ನಂಬಿಸಿದ್ದ ದಂಪತಿಗಳು, ಸಂಜನಾ ಅವರಿಂದ 10 ಲಕ್ಷ ಮೊತ್ತದ ಚೀಟಿ ಹಾಕಿಸಿದ್ದರು. 2016ರಲ್ಲಿ ಪುನಃ 10 ಲಕ್ಷ ರೂ. ಮೊತ್ತದ ಚೀಟಿ ಕಟ್ಟಿದ್ದರು.
ಚೀಟಿ ಹಣವನ್ನು ವಾಪಸ್ ಕೊಡದೆ ಸಂಸ್ಥೆ ವಂಚಿಸಿತ್ತು. ನೂರಕ್ಕೂ ಅಧಿಕ ಜನರಿಂದ ಹೀಗೆ ಹಣ ಪಡೆದಿದ್ದ ಸಂಸ್ಥೆ ವಂಚನೆ ಮಾಡಿದೆ. ಈ ಕುರಿತು ಮೊದಲು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2006ರಿಂದ ಮಲ್ಲೇಶ್ವರಂನಲ್ಲಿ ಸಂಸ್ಥೆ ಕಚೇರಿ ಹೊಂದಿದೆ.












Click it and Unblock the Notifications