Prajwal Revanna: ಮತ್ತೆ ಜರ್ಮನಿಯಿಂದ ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್, ಕ್ಯಾನ್ಸಲ್ ಆಗುತ್ತಾ.. ಇಲ್ಲ ಬರ್ತಾರಾ?
ಬೆಂಗಳೂರು, ಮೇ. 29: ಅಶ್ಲೀಲ ವೀಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ನಿಂದ ಅಮಾನತುಗೊಂಡಿದ್ದಾರೆ. ಒಂದು ತಿಂಗಳಿನಿಂದ ಕಾಣೆಯಾಗಿದ್ದ ಅವರು ಮತ್ತೆ ದೇಶಕ್ಕೆ ವಾಪಸ್ ಬರುವುದಾಗಿ, ಎಸ್ಐಟಿ ತನಿಖೆಗೆ ಸಹಕರಿಸುವುದಾಗಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ತನ್ನ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಜರ್ಮನಿಯ ಮ್ಯೂನಿಚ್ ನಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಏರ್ಲೈನ್ಸ್ನಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿದ್ದು, ಮೇ 31ರಂದು ಜರ್ಮನಿಯ ಮ್ಯೂನಿಚ್ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.

ಮೇ 31ರ ಮಧ್ಯರಾತ್ರಿ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುತ್ತಿದ್ದಂತೆಯೇ ಏರ್ ಪೋರ್ಟ್ನಲ್ಲೇ ಬಂಧನಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಎಸ್ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿಯೇ ಪ್ರಜ್ವಲ್ ಬಂಧನಕ್ಕೆ ಸಜ್ಜಾಗಿದ್ದಾರೆ. ಮಧ್ಯರಾತ್ರಿ ಬಂಧಿಸುವ ಕಾರಣ ಜೂನ್ 1ಕ್ಕೆ ವಿಚಾರಣೆ ನಡೆಯಬಹುದು.
ಟೆಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿಸಿದ್ದ ಪ್ರಜ್ವಲ್ ರೇವಣ್ಣ
ಇನ್ನು, ಈ ಹಿಂದೆ ಕೂಡ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ., ಕೊನೆ ಕ್ಷಣದಲ್ಲಿ ಅದು ರದ್ದಾಗಿತ್ತು. ಟಿಕೆಟ್ ಕ್ಯಾನ್ಸಲ್ ಮಾಡಿಸಿ ನಾಲ್ಕು ದಿನಗಳಾಗಿದ್ದರೂ ಪ್ರಜ್ವಲ್ ಬುಕ್ಕಿಂಗ್ ಮಾಡಿದ ಹಣ ವಾಪಸ್ ಪಡೆದಿರಲ್ಲ. ಮರುಬುಕಿಂಗ್ಗಾಗಿ ಹಣವನ್ನು ಮುಂಗಡವಾಗಿ ಹಾಗೆ ಬಿಟ್ಟಿದ್ದರು. ಆದರೆ, ಅವರು ವಿಮಾನ ನಿಲ್ದಾಣಕ್ಕೆ ಬರುತ್ತಾರೆ ಎಂಬ ಮಾಹಿತಿ ಮೇರೆಗೆ ಎಸ್ಐಟಿ (ವಿಶೇಷ ತನಿಖಾ ತಂಡ) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮುನ್ನೆಚ್ಚರಿಕೆ ವಹಿಸಿತ್ತು.

ಈಗಾಗಲೇ ಬೆಂಗಳೂರಿಗೆ ಬರಲು ಎರಡು ಬಾರಿ ವಿಮಾನ ಟಿಕೆಟ್ ಬುಕ್ ಮಾಡಿ, ಕೊನೆ ಕ್ಷಣದಲ್ಲಿ ಟಿಕೆಟ್ ರದ್ದು ಮಾಡಿ, ಎಸ್ಐಟಿ ಅಧಿಕಾರಿಗಳನ್ನು ಆಟವಾಡಿಸಿದ್ದರು. ಈಗ ತಾವೇ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗುವುದಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ಹೇಳಿದಂತೆಯೇ ಮೇ 31ರಂದು ಬೆಂಗಳೂರಿಗೆ ಬರುತ್ತಾರಾ..? ಇಲ್ಲ ಕಳೆದೆರಡು ಬಾರಿಯಂತೆ ಮತ್ತೆ ಏನಾದರೂ ಆಟವಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವಿಡಿಯೋ ಬಿಡುಗಡೆ ಮಾಡಿದ್ದ ಪ್ರಜ್ವಲ್ ರೇವಣ್ಣ
ಪ್ರಕರಣದ ಬಳಿಕ ಮೊದಲ ಬಾರಿಗೆ ಜನರ ಎದುರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಪ್ರಜ್ವಲ್ ರೇವಣ್ಣ "ಮೊದಲು ನನ್ನ ತಂದೆ ತಾಯಿ, ನನ್ನ ತಾತ, ಕುಮಾರಣ್ಣ, ಕರ್ನಾಟಕದ ಜನತೆ ಮತ್ತು ಎಲ್ಲಾ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತೇನೆ" ಎಂದಿದ್ದರು.
ವಿದೇಶಕ್ಕೆ ಹೋಗುವ ಬಗ್ಗೆ ಮೊದಲೇ ಪ್ಲಾನ್ ಆಗಿತ್ತು. ಆಗ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ನಾನು ವಿದೇಶದಲ್ಲಿದ್ದಾಗ ಯೂಟ್ಯೂಬ್ ನ್ಯೂಸ್ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ಕಂಡುಬಂದಿದೆ. ಇದಾದ ನಂತರ ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಎಸ್ಐಟಿ ನೋಟಿಸ್ ನೀಡಿದ ವಿಚಾರ ಗೊತ್ತಾಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ನನ್ನ ಮೇಲೆ ಪಿತೂರಿ ಮಾಡಿದ್ದಾರೆ.
ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಬಹಿರಂಗ ವೇದಿಕೆಗಳಲ್ಲಿ ಪ್ರಚಾರ ಮಾಡಲು ಪ್ರಾರಂಭಿಸಿದರು ಮತ್ತು ನನ್ನ ವಿರುದ್ಧ ರಾಜಕೀಯವಾಗಿ ಪಿತೂರಿ ನಡೆಸಿದರು. ನಾನು ಖಿನ್ನತೆಗೆ ಜಾರಿದ್ದೆ. ಈ ಖಿನ್ನತೆಯಿಂದ ಹೊರ ಬರಲು ಸಮಯ ಬೇಕಿತ್ತು. ಮೇ 31ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗುತ್ತೇನೆ. ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ನ್ಯಾಯಾಲಯದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನನ್ನ ವಿರುದ್ಧದ ಪ್ರಕರಣಗಳು ಸುಳ್ಳಾಗಿದ್ದು, ಅದರಿಂದ ಹೊರಬರುವ ವಿಶ್ವಾಸವಿದೆ ಎಂದು ಹೇಳಿದ್ದರು.












Click it and Unblock the Notifications