'ಬಿಜೆಪಿಯವರು ಕಾಲಿಗೆ ಗೆಜ್ಜೆ ಕಟ್ಟಿಕೊಂಡಂತೆ ಓಡಾಡುತ್ತಿದ್ದಾರೆ'
ಬೆಂಗಳೂರು, ಅಕ್ಟೋಬರ್ 13 : 'ಬೆಂಗಳೂರನ್ನು ಗಾರ್ಬೇಜ್ ಸಿಟಿಯಾಗಿ ಮಾಡಿದ ಬಿಜೆಪಿ ನಾಯಕರು ಈಗ ರಸ್ತೆಗುಂಡಿಗಳ ವಿಚಾರದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವಂತೆ ಓಡಾಡುತ್ತಿದ್ದಾರೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಲೇವಡಿ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, 'ಬೆಂಗಳೂರು ನಗರದ ರಸ್ತೆಗಳಿಗೆ ಖರ್ಚು ಮಾಡಿರುವ ಅನುದಾನದ ಬಗ್ಗೆ ಬಿಜೆಪಿ ನಾಯಕರು ಕೊಟ್ಟಿರುವ ಮಾಹಿತಿ ಸುಳ್ಳು. 4 ಸಾವಿರ ಕೋಟಿ ಖರ್ಚು ಮಾಡಿಲ್ಲ. 1750 ಕೋಟಿ ರೂ.ಗಳನ್ನು 2013-17ರ ವರೆಗೆ ಖರ್ಚು ಮಾಡಲಾಗಿದೆ' ಎಂದರು.

'ಬೆಂಗಳೂರು ನಗರದಲ್ಲಿ ಆಗಸ್ಟ್ 14ರಿಂದ ಮಳೆ ಆರಂಭವಾಗಿದೆ. ಒಟ್ಟು 46 ದಿನ ಮಳೆ ಬಿದ್ದಿದೆ. ಇದರಿಂದ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲು ಆಗುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯವನ್ನು ಈಗ ಕೈಗೊಂಡಿದ್ದಾರೆ' ಎಂದು ಹೇಳಿದರು.
'ಯಡಿಯೂರಪ್ಪ, ಆರ್.ಅಶೋಕ್ ಮುಂತಾದ ನಾಯಕರು ರಸ್ತೆಗುಂಡಿಗಳ ವಿಚಾರದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡಂತೆ ಓಡಾಡುತ್ತಿದ್ದಾರೆ. ಬೆಂಗಳೂರಿನ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳಾಗಿದ್ದು ಬಿಜೆಪಿಯವರ ಕಾಲದಲ್ಲೇ. ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯಾಗಿ ಮಾಡಿದ್ದು ಬಿಜೆಪಿಯವರೇ ಎಂದು' ರಾಮಲಿಂಗಾ ರೆಡ್ಡಿ ಆರೋಪಿಸಿದರು.
'ನಗರದ ಪ್ರಮುಖ 11 ಕಟ್ಟಡಗಳನ್ನು ಅಡವಿಟ್ಟಿದ್ದು ಬಿಜೆಪಿಯವರು. 8 ಸಾವಿರ ಕೋಟಿ ರೂ. ಸಾಲವನ್ನು ಬೆಂಗಳೂರಿನ ಮೇಲೆ ಬಿಟ್ಟು ಹೋಗಿದ್ದು ಬಿಜೆಪಿಯವರು. ಬಿಜೆಪಿಯವರು ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲ' ಎಂದು ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದರು.
'ವಾರ್ಡ್ಗಳಿಗೆ ಅನುದಾನ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ. ಸಿ.ವಿ.ರಾಮನ್ ನಗರಕ್ಕೆ 40 ಕೋಟಿ, ಮಲ್ಲೇಶ್ವರಂಗೆ 60 ಕೋಟಿ, ಬಸವನಗುಡಿಗೆ 31 ಕೋಟಿ, ಪದ್ಮನಾಭನಗರಕ್ಕೆ 114 ಕೋಟಿ, ಮಹದೇವಪುರಕ್ಕೆ 147 ಕೋಟಿ ಅನುದಾನ ನೀಡಲಾಗಿದೆ' ಎಂದು ರಾಮಲಿಂಗಾ ರೆಡ್ಡಿ ವಿವರಣೆ ನೀಡಿದರು.












Click it and Unblock the Notifications