ಹಣ ಸಾಗಿಸುವ ಬಾರ್ ಮಾಲೀಕರ ಟಾರ್ಗೆಟ್: ದರೋಡೆಕೋರರ ಗ್ಯಾಂಗ್ ಸೆರೆ
ಬೆಂಗಳೂರು, ಜನವರಿ 18: ಬಾರ್ ಮಾಲೀಕರು ಹಾಗೂ ನೌಕರರೇ ಹುಷಾರ್. ಹಣ ಸಾಗಿಸುವ ಬಾರ್ ಮಾಲೀಕರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುವ ಗ್ಯಾಂಗ್ ಬೆಂಗಳೂರು ಹಾಗೂ ಹೊರ ವಲಯದಲ್ಲಿ ಸಕ್ರಿಯವಾಗಿದೆ. ಬಾರ್ ನಲ್ಲಿ ಹಣ ಸಂಗ್ರಹಿಸಿ ಸಾಗಿಸುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಸಣ್ಣ ಅಪಘಾತದ ಹೆಸರಿನಲ್ಲಿ ಜಗಳ ತೆಗೆದು ಮಾರಣಾಂತಿಕ ಹಲ್ಲೆ ನಡೆಸುವ ದರೋಡೆಕೋರರು ಹಣವನ್ನು ದೋಚಿ ಪರಾರಿಯಾಗುತ್ತಾರೆ. ದರೋಡೆಕೋರರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಕಿರಾತಕ ಗ್ಯಾಂಗ್ ನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.

ಟಾರ್ಗೆಟ್ ಬಾರ್: ಸಾಮಾನ್ಯವಾಗಿ ಬೆಳಗಿನಿಂಧ ರಾತ್ರಿ ವರೆಗೂ ಬಾರ್ ಮತ್ತು ವೈನ್ ಅಂಗಡಿಗಳಲ್ಲಿ ವಹಿವಾಟು ನಡೆಯುತ್ತದೆ. ಎಲ್ಲಾ ವಹಿವಾಟು ಮುಗಿದ ಬಳಿಕ ದಿನದ ಕಲೆಕ್ಷನ್ ಹಣವನ್ನು ಮಾಲೀಕರಿಗೆ ಅಥವಾ ಬ್ಯಾಂಕ್ ಗೆ ಪಾವತಿಸುವ ಕಾರ್ಯ ನಿರಂತರ ನಡೆಯುತ್ತದೆ. ಹೀಗೆ ಬಾರ್ ಮತ್ತು ವೈನ್ ಶಾಪ್ ಹಣ ಸಾಗಿಸುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುವ ಗ್ಯಾಂಗ್ ಗಳು ಕೂಡ ಸಕ್ರಿಯವಾಗಿವೆ. ಬೆಂಗಳೂರು ಸೇರಿದಂತೆ ಹನ್ನೆರಡು ಕಡೆ ದರೋಡೆ ಮಾಡಿದ್ದ ಗ್ಯಾಂಗ್ ನ್ನು ರಾಜಾನುಕುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Recommended Video
ಸಿಸಿಟಿವಿಯಲ್ಲಿ ಸೆರೆ : ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಚನಾ ವೈನ್ಸ್ ಇದ್ದು, ಇಲ್ಲಿ ಸಂಗ್ರಹವಾದ ಮೊತ್ತವನ್ನು ಮಾಲೀಕರಿಗೆ ತಲುಪಿಸಲು ಕ್ಯಾಷಿಯರ್ ಬೈಕ್ ನಲ್ಲಿ ಹೋಗುತ್ತಿದ್ದ. ಹಣ ಸಾಗಿಸುವ ಚಲನವಲನ ಗಮನಿಸಿದ್ದ ಆರು ಮಂದಿ ಕಿರಾತಕರು ಬೈಕ್ ಗಳ್ಲಿ ಬಂದು ರಾತ್ರಿ ವೇಳೆ ಕ್ಯಾಷಿಯರ್ ಬೈಕ್ ಗೆ ಗುದ್ದಿದ್ದಾರೆ. ಅಪಘಾತ ನಡೆಸಿದ ನೆಪದಲ್ಲಿ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಬಳಿಕ ರಚನಾ ವೈನ್ಸ್ ಕ್ಯಾಷಿಯರ್ ಬಳಿಯಿದ್ದ ಎರಡೂವರೆ ಲಕ್ಷ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಜಾಡು ಹಡಿದು ದೊಡ್ಡಬಳ್ಳಾಪುರ ವೃತ್ತ ನಿರೀಕ್ಷಕ ನವೀನ್ ಮತ್ತು ತಂಡ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ವಿಚಾರಣೆ ವೇಳೆ ಬೆಂಗಳೂರು ಸುತ್ತಮುತ್ತ ಹನ್ನೆರಡು ಕಡೆ ದರೋಡೆ ಮಾಡಿದ್ದಾಗಿ ತಿಳಿಸಿದ್ದು, ರಾಜಾನುಕುಂಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications