ಶುಲ್ಕ ಹೆಚ್ಚಳ : ವಿದ್ಯಾನಿಕೇತನ ಶಾಲೆ ವಿರುದ್ಧ ರೊಚ್ಚಿಗೆದ್ದ ಪೋಷಕರು
ಬೆಂಗಳೂರು, ಜೂನ್ 23 : ಜ್ಞಾನಭಾರತಿ ಬಳಿಯಿರುವ ಉಲ್ಲಾಳ ಉಪನಗರದಲ್ಲಿರುವ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ವಿರುದ್ಧ ನೂರಾರು ಪೋಷಕರು ರೊಚ್ಚಿಗೆದ್ದಿದ್ದಾರೆ. ಶನಿವಾರ ಶಾಲೆಯ ಎದಿರು ಜಮಾಯಿಸಿ ಪೋಷಕರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಶಾಲಾ ಶುಲ್ಕವನ್ನು ಅವೈಜ್ಞಾನಿಕವಾಗಿ, ಪೋಷಕರ ಸಲಹೆಯನ್ನೂ ಪಡೆಯದೆ, ಮಕ್ಕಳಿಗೆ ಹಲವಾರು ಸವಲತ್ತು ನೀಡುವ ನೆಪದಲ್ಲಿ ಸಾವಿರಾರು ರುಪಾಯಿ ಹಣವನ್ನು ಪೋಷಕರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂಬುದು ಪೋಷಕರ ಆರೋಪ. ಸರಕಾರ ನಿಗದಿಪಡಿಸಿದ ವಾರ್ಷಿಕ ಶುಲ್ಕ ಜಾರಿಗೆ ತರಬೇಕೆಂದು ಆಗ್ರಹಿಸುತ್ತಿದ್ದಾರೆ.
ಈ ಪ್ರತಿಭಟನೆಗೆ ಬಗ್ಗದ ಪ್ರಾಂಶುಪಾಲರಾದ ವಿಜಯ್ ಕೃಷ್ಣ ಅವರು, ನಾವು ಅನಗತ್ಯವಾಗಿ ಶುಲ್ಕದ ಭಾರವನ್ನು ಹೇರುತ್ತಿಲ್ಲ. ಮಕ್ಕಳ ಬೌದ್ಧಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲ ತರಬೇತಿಗಳನ್ನು ನೀಡಲಾಗುತ್ತಿದೆ, ಹಲವಾರು ಪರಿಣಿತರಿಂದ ತರಬೇತಿ ನೀಡಲಾಗುತ್ತಿದೆ. ಇದಕ್ಕೆಲ್ಲ ಶುಲ್ಕ ತಗುಲೇತಗುಲುತ್ತದೆ ಎಂದು ವಾದಿಸುತ್ತಾರೆ.
ಆಗಿದ್ದೇನೆಂದರೆ, ಕಳೆದ ವರ್ಷದವರೆಗೆ ಶುಲ್ಕದ ಜೊತೆ ಇಸಿದುಕೊಳ್ಳಲಾಗುತ್ತಿದ್ದ ಇತರೆ ಶುಲ್ಕವನ್ನು ರದ್ದುಗೊಳಿಸಿ, ಅದನ್ನು ಕೂಡ ಟ್ಯೂಷನ್ ಶುಲ್ಕದೊಡನೆ ಜೋಡಿಸಲಾಗಿದೆ. ಹಾಗು ಎಂದಿನಂತೆ ಪ್ರತಿವರ್ಷ ಟ್ಯೂಷನ್ ಶುಲ್ಕದಲ್ಲಿಯೂ ಹೆಚ್ಚಿಸಲಾಗಿದೆ. ಇದರಿಂದಾಗಿ ಪೋಷಕರು ಶಾಲಾ ಮಂಡಳಿ ವಿರುದ್ಧ ತಿರುಗಿಬಿದ್ದಿದ್ದಾರೆ.
ಅನಿಲ್ ಕುಂಬ್ಳೆಯ ಟೆನ್ವಿಕ್ ಮತ್ತು ಲೀಪ್ ಸ್ಟಾರ್ಟ್ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಪಿಕ್ ಬ್ರೇನ್ ನಿಂದ ಮಕ್ಕಳಿಗೆ ಜನರಲ್ ನಾಲೇಜ್, ಗಣಿತ ಕಲಿಸಲು ಹೇಮ್ಯಾತ್, ಆರ್ ಓ ವಾಟರ್ ಪೂರೈಕೆ, ಇಂಟಿಗ್ರೇಟೆಡ್ ಕೋಚಿಂಗ್, ಹೆಚ್ಚುವರಿ ಭದ್ರತಾ ಸಿಬ್ಬಂದಿ ಮುಂತಾದ 21 ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಕ್ಕೆಲ್ಲ ಖರ್ಚು ತಗಲುತ್ತದೆ ಎಂದು ವಿಜಯ್ ಕೃಷ್ಣ ಅವರು ಹೇಳುತ್ತಾರೆ.
ಪ್ರತಿಭಟನಾ ನಿರತ ಪೋಷಕರು ನಮಗೆ ಮಾತ್ರವಲ್ಲ, ಎಲ್ಲ ಮಕ್ಕಳಿಗೂ ಈ ಅನಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ಕಡಿತ ಮಾಡಿ ಶುಲ್ಕವನ್ನು ಕಡಿತ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಮಕ್ಕಳಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಪಾಠ ಮಾಡಬೇಕು, ಈ ಎಲ್ಲ ಅತ್ಯಾಧುನಿಕ ಸವಲತ್ತುಗಳು ಬೇಕಾಗೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಪೋಷಕರೂ ಬಗ್ಗುತ್ತಿಲ್ಲ, ಪ್ರಾಂಶುಪಾಲರೂ ಮಣಿಯುತ್ತಿಲ್ಲ.
ಪೋಷಕರು ಮತ್ತು ಶಾಲಾ ಮಂಡಳಿ ನಡುವೆ ಇಲ್ಲಿಯವರೆಗೆ ಯಾವುದೇ ಸಂಧಾನವಾಗಿಲ್ಲ. ಶುಲ್ಕವನ್ನು ಕಡಿಮೆ ಮಾಡದೆ ನಾವು ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಮತ್ತು ಉತ್ತಮ ಶಿಕ್ಷಣದ ದೃಷ್ಟಿಯಿಂದ ತರಬೇತಿಯಲ್ಲಿ ಯಾವುದೇ ಕಾಂಪ್ರೊಮೈಸ್ ಮಾಡಿಕೊಳ್ಳುವುದಿಲ್ಲ ಎಂದು ಪ್ರಾಂಶುಪಾಲರು ನಿರ್ಧಾರ ತೆಗೆದುಕೊಂಡಿದ್ದಾರೆ.