ಬೆಂಗಳೂರು-ಚೆನ್ನೈ: ಈ ರಸ್ತೆ 6 ಪಥವಾಗಿ ವಿಸ್ತರಣೆ
ಬೆಂಗಳೂರು, ಫೆಬ್ರವರಿ 29; ಹಳೆ ಮದ್ರಾಸ್ ರಸ್ತೆಯಲ್ಲಿ ನಿಧಾನಗತಿಯ ಸಂಚಾರ, ಸಂಚಾರ ದಟ್ಟಣೆ ಮುಂತಾದವುಗಳಿಗೆ ಸಿಲುಕಿ ಪರದಾಡುವ ವಾಹನ ಸವಾರರಿಗೆ ಸಿಹಿಸುದ್ದಿ. ಬೆಂಗಳೂರು-ಚೆನ್ನೈ ಸಂಪರ್ಕಿಸುವ ಈ ರಸ್ತೆ ವಿಸ್ತರಣೆ ಮಾಡುವ ಪ್ರಸ್ತಾಪ ಬಂದಿದೆ.
ಬೆಂಗಳೂರು ನಗರ ಮತ್ತು ಚೆನ್ನೈ ಸಂಪರ್ಕಿಸುವ 4 ಪಥದ ಹಳೆ ಮದ್ರಾಸ್ ರಸ್ತೆಯನ್ನು 6 ಪಥವಾಗಿ ವಿಸ್ತರಣೆ ಮಾಡುವ ಮೂಲಕ ಉಭಯ ನಗರಗಳ ನಡುವಿನ ಪ್ರಯಾಣವನ್ನು ಇನ್ನಷ್ಟು ಸುಲಭವಾಗಿಸಲು ಚಿಂತನೆ ನಡೆದಿದೆ.

ಹಳೆ ಮದ್ರಾಸ್ ರಸ್ತೆ ಸದ್ಯ ಚಿತ್ತೂರು ತನಕ 4 ಪಥವಿದೆ. ಆದರೆ ಚಿತ್ತೂರು ಮತ್ತು ವಾಲಜಪೇಟೆ ನಡುವಿನ ರಸ್ತೆ 2 ಪಥವಾಗಿದೆ. ಬೆಂಗಳೂರು-ಚೆನ್ನೈ ನಡುವೆ ಸಂಚಾರ ವ್ಯವಸ್ಥೆ ಸುಗಮಗೊಳಿಸಲು 6 ಪಥದ ರಸ್ತೆಯನ್ನು ನಿರ್ಮಾಣ ಮಾಡುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ.
ನಿತಿನ್ ಗಡ್ಕರಿ ಮಾತು: ರಾಜ್ಯಸಭೆ ಕಲಾಪದಲ್ಲಿ ಕೆಲವು ದಿನಗಳ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಈ ಕುರಿತು ಪ್ರಸ್ತಾಪಿಸಿದ್ದಾರೆ. "ಪ್ರಸ್ತುವ ಇರುವ 10 ಕಿ. ಮೀ. 2 ಪಥದ ರಸ್ತೆ ವಾಲಜಪೇಟೆ-ರೇಣಿಗುಂಟ ನಡುವೆ ಉತ್ತಮವಾಗಿದೆ" ಎಂದು ಹೇಳಿದ್ದಾರೆ.
"ವಾಲಜಪೇಟೆಯಿಂದ ತಮಿಳುನಾಡು/ ಆಂಧ್ರ ಪ್ರದೇಶ ಗಡಿಯ ತನಕ ರಾಷ್ಟ್ರೀಯ ಹೆದ್ದಾರಿ ಕಿ. ಮೀ. 106 ರಿಂದ 134 ಕಿ. ಮೀ. 6 ಪಥದ ರಸ್ತೆ ಮಾಡಲು ಡಿಪಿಆರ್ ಪೂರ್ಣಗೊಂಡಿದೆ. 28 ಕಿ. ಮೀ. ಚಿತ್ತೂರು ಬೈಪಾಸ್ ಸಹ ಆರು ಪಥ ಮಾಡುವ ಪ್ರಸ್ತಾವನೆ ಇದೆ" ಎಂದು ತಿಳಿಸಿದ್ದಾರೆ.
ಒಂದು ವೇಳೆ ಸಂಪೂರ್ಣ ರಸ್ತೆಯನ್ನು ಆರು ಪಥದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಮುಂದಾದರೆ ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯೂ ಸಹ 4 ರಿಂದ 6 ಪಥವಾಗಲಿದೆ. ಆಗ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ಹೊಸೂರು ರಸ್ತೆ ಮೇಲೆ ಒತ್ತಡ: ಕರ್ನಾಟಕ, ತಮಿಳುನಾಡು ನಡುವೆ ಸಂಚಾರ ನಡೆಸುವ ವಾಹನ ಸವಾರರು ಹೊಸೂರು ರಸ್ತೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದು 4 ರಿಂದ 6 ಪಥವಾಗಿದ್ದು, ಸಂಚಾರಕ್ಕೆ ಅನುಕೂಲವಾಗಿದೆ. ಆದರೆ ಹೆಚ್ಚು ವಾಹನಗಳ ಸಂಚಾರದಿಂದ ರಸ್ತೆ ಮೇಲೆ ಒತ್ತಡ ಹೆಚ್ಚಿದೆ.
ಹೊಸೂರು ರಸ್ತೆ ಎರಡು ರಾಜ್ಯಗಳ ನಡುವೆ ಮಾತ್ರವಿದೆ. ಆದರೆ ಹಳೆ ಮದ್ರಾಸ್ ರಸ್ತೆ ಚಿತ್ತೂರು ಮೂಲಕ ಸಾಗುತ್ತದೆ. ಆದ್ದರಿಂದ ಲಾರಿಗಳ ಚಾಲಕರು, ಖಾಸಗಿ ವಾಹನಗಳ ಮಾಲೀಕರು ಹೊಸೂರು ರಸ್ತೆಯಲ್ಲಿಯೇ ಹೆಚ್ಚು ಸಂಚಾರ ನಡೆಸುತ್ತಾರೆ.
ಎರಡೂ ರಾಜ್ಯಗಳ ನಡುವೆ ಸಂಚಾರ ನಡೆಸಲು ಮೂರು ಪ್ರಮುಖ ರಸ್ತೆ ಇದೆ. ಹಳೆ ಮದ್ರಾಸ್ ರಸ್ತೆ ಮೂಲಕ ಚೆನ್ನೈ 333 ಕಿ. ಮೀ. ಆಗುತ್ತದೆ. ಹೊಸೂರು-ಚೆನ್ನೈ ರಸ್ತೆ 346 ಕಿ. ಮೀ. ಇದೆ. ಇನ್ನೋಂದು ರಸ್ತೆ 372 ಕಿ. ಮೀ. ಆಗುತ್ತದೆ.
ಆದರೆ ಹಳೆ ಮದ್ರಾಸ್ ರಸ್ತೆ ವಿಸ್ತರಣೆ ಮಾಡುವ ಬದಲು ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ (ಬಿಇಸಿ) ಬೇಗ ಪೂರ್ಣಗೊಳಿಸಿ ಎಂಬ ಒತ್ತಾಯವೂ ಇದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುವ ಇದು ಎಕ್ಸ್ಪ್ರೆಸ್ ವೇ ಆಗಿದೆ. ಎನ್ಹೆಚ್ಎಐ ಈ ಕಾಮಗಾರಿ ಕೈಗೊಂಡಿದ್ದು ಇದರ ಉದ್ದ 258 ಕಿ. ಮೀ. ಅಷ್ಟೇ.
ಈ ರಸ್ತೆ ಕರ್ನಾಟಕದಲ್ಲಿ ಹೊಸಕೋಟೆಯಿಂದ ಆರಂಭವಾಗಲಿದೆ. ಮೂರು ರಾಜ್ಯಗಳ 7 ಜಿಲ್ಲೆಗಳ ಮೂಲಕ ಹಾದು ಹೋಗುವ ಈ ರಸ್ತೆ ಕರ್ನಾಟಕದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳ ಮೂಲಕ ಸಾಗುತ್ತದೆ.
ರಾಜ್ಯದಲ್ಲಿ ಈ ಎಕ್ಸ್ಪ್ರೆಸ್ ವೇ 71 ಕಿ. ಮೀ. ಇರಲಿದ್ದು, 5,465 ಕೋಟಿ ರೂ. ವೆಚ್ಚದಲ್ಲಿ ಇದನ್ನು ಭಾರತ್ ಮಾಲಾ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿದೆ. ಶೇ 87ರಷ್ಟು ಕಾಮಗಾರಿ ನಮ್ಮ ರಾಜ್ಯದಲ್ಲಿ ಪೂರ್ಣಗೊಂಡಿದೆ. ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಕಾಮಗಾರಿ ಬಾಕಿ ಇದೆ.












Click it and Unblock the Notifications