ಬೆಂಗಳೂರಿನ ಈ ಕಾರಿಡಾರ್ ಒಂದು ವಾರದಲ್ಲಿ ಮುಕ್ತ?
ಬೆಂಗಳೂರು, ಫೆಬ್ರವರಿ 15: ಬೆಂಗಳೂರು ನಗರದ ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಪ್ರದೇಶದ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ ಒಂದು ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಕುಂಟುತ್ತಲೇ ಸಾಗಿತ್ತು.
ಓಕಳಿಪುರ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಮಾಗಡಿ ರಸ್ತೆ, ರಾಜಾಜಿನಗರ ಹೀಗೆ ಬೆಂಗಳೂರು ನಗರಕ್ಕೆ ಹೊರ ಜಿಲ್ಲೆಗಳಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಪ್ರದೇಶವಿದು. ಇಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಷ್ಟಪಥ ಕಾರಿಡಾರ್ ಯೋಜನೆ 2015ರಲ್ಲಿ ಆರಂಭವಾಗಿತ್ತು.

ಈ ಸಿಗ್ನಲ್ ಮುಕ್ತ ಕಾರಿಡಾರ್ನ ಎರಡು ಲೂಪ್ ಮಾರ್ಗ ಪೂರ್ಣಗೊಂಡಿವೆ. ಒಂದು ವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಯೋಜನೆಯನ್ನು ಕೈಗೊಂಡಿದ್ದು, 5 ವರ್ಷಕ್ಕೂ ಹೆಚ್ಚು ಕಾಲದಿಂದ ಕಾಮಗಾರಿ ನಡೆಯುತ್ತಿದೆ.
ಯಾವ ಮಾರ್ಗ ಸಂಚಾರಕ್ಕೆ ಮುಕ್ತ?: ಓಕಳಿಪುರ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆಯ ಮಲ್ಲೇಶ್ವರ ರೈಲು ನಿಲ್ದಾಣ ಮತ್ತು ರಾಜಾಜಿನಗರದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡು ಮಾರ್ಗಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗ ಪೂರ್ಣಗೊಂಡರೆ ಎಲ್ಲಾ 8 ಮಾರ್ಗಗಳು ಸಂಚಾರಕ್ಕೆ ಮುಕ್ತವಾದಂತೆ ಆಗುತ್ತದೆ.
ಓಕಳಿಪುರ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ ಒಟ್ಟು 8 ಮಾರ್ಗಗಳನ್ನು ಒಳಗೊಂಡಿದೆ. ವಿವಿಧ ಹಂತಗಳಲ್ಲಿ 6 ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಿ ನಗರದ ಕೇಂದ್ರ ಪ್ರದೇಶಕ್ಕೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉಳಿದ ಎರಡು ಮಾರ್ಗ ಈಗ ಪೂರ್ಣಗೊಂಡಿದೆ.
ಮೆಜೆಸ್ಟಿಕ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಳಿಯೇ ಓಕಳಿಪುರ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ ಕೈಗೊಳ್ಳಲಾಗಿದೆ. ರೈಲ್ವೆ ಇಲಾಖೆ ಮತ್ತು ಬಿಬಿಎಂಪಿ ನಡುವಿನ ಭೂ ಹಸ್ತಾಂತರ ಪ್ರಕ್ರಿಯೆ ವಿಳಂಬವಾದ ಕಾರಣ ಎರಡು ಮಾರ್ಗಗಳ ನಿರ್ಮಾಣ ತಡವಾಗಿತ್ತು. ಈಗ ಅವರುಗಳ ಕಾಮಗಾರಿ ಮುಕ್ತಾಯಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2013-14ರಲ್ಲಿ ಓಕಳಿಪುರ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆಯ ಕಾಮಗಾರಿಯನ್ನು ಆರಂಭಿಸಲಾಗಿತ್ತು. ರೈಲ್ವೆ ಇಲಾಖೆ ಭೂಮಿ ಹಸ್ತಾಂತರ ಸೇರಿದಂತೆ ಸುಮಾರು 337 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದೆ. 2024ರಲ್ಲಿ ಎಲ್ಲಾ ಮಾರ್ಗಗಳು ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗುತ್ತಿವೆ.
ಇನ್ನೂ ರೈಲ್ವೆ ಇಲಾಖೆ ತುಮಕೂರು ಮಾರ್ಗದಡಿ ಪ್ರೀಕಾಸ್ಟ್ ಅಳವಡಿಕೆ ಪೂರ್ಣಗೊಂಡಿದೆ. ಚೆನ್ನೈ ರೈಲು ಮಾರ್ಗದಡಿ ಪ್ರೀಕಾಸ್ಟ್ ಬಾಕ್ಸ್ಗಳನ್ನು ಇಲಾಖೆ ಆಳವಡಿಕೆ ಮಾಡಬೇಕಿದೆ. ಇನ್ನೂ ಎರಡು ತಿಂಗಳಿನಲ್ಲಿ ಈ ಕಾಮಗಾರಿ ಪೂರ್ಣಗೊಂಡರೆ ಯೋಜನೆ ಸಂಪೂರ್ಣಗೊಂಡಂತೆ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2015ರ ಜುಲೈನಲ್ಲಿ ಓಕಳಿಪುರ ಅಷ್ಟಪಥ ಕಾರಿಡಾರ್ ಕಾಮಗಾರಿಯನ್ನು ಆರಂಭಿಸಲಾಯಿತು. ಟೆಂಡರ್ನ ನಿಯಮಗಳಂತೆ ಕಾಮಗಾರಿ 18 ತಿಂಗಳಿನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಭೂ ಸ್ವಾಧೀನ, ರೈಲ್ವೆ ಇಲಾಖೆ ಮತ್ತು ಬಿಬಿಎಂಪಿ ನಡುವಿನ ಸಮನ್ವಯತೆ ಕಾರಣ ಕಾಮಗಾರಿ ವಿಳಂಬವಾಯಿತು.
2018ರಲ್ಲಿ ಓಕಳಿಪುರ ಅಷ್ಟಪಥ ಕಾರಿಡಾರ್ನ ಮೂರು ಮಾರ್ಗಗಳು ಸಂಚಾರಕ್ಕೆ ಮುಕ್ತವಾಗಿದ್ದವು. ಕೆಎಸ್ಆರ್ ನಿಲ್ದಾಣದಿಂದ ಮಲ್ಲೇಶ್ವರ ಕಡೆಗೆ ಹೋಗುವ ರಸ್ತೆ, ರೈಲು ನಿಲ್ದಾಣದಿಂದ ರಾಜಾಜಿನಗರ ಕಡೆಗೆ ಸಾಗುವ ಕೆಳ ಸೇತುವೆಯಲ್ಲಿ ವಾಹನ ಸಂಚಾರ ಆರಂಭವಾಗಿತ್ತು.
ಓಕಳಿಪುರ ಅಷ್ಟಪಥ ಕಾರಿಡಾರ್ ಯೋಜನೆಗೆ 2011ರಲ್ಲಿ 115 ಕೋಟಿ ರೂ. ಮೊತ್ತದ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಬಳಿಕ ಮೊತ್ತ ಪರಿಷ್ಕರಣೆ ಮಾಡಿ 102.83 ಕೋಟಿ ರೂ. ನಿಗದಿಗೊಳಿಸಲಾಯಿತು.












Click it and Unblock the Notifications