ಸೆ.24, 25ರಂದು ಬೆಂಗಳೂರಿನಲ್ಲಿ ನೀರಿಲ್ಲ

ಈ ಕುರಿತು ಪ್ರಕಟಣೆ ಹೊರಡಿಸಿರುವ ಬೆಂಗಳೂರು ಜಲಮಂಡಳಿ, ಸೆ. 24ರ ಮಂಗಳವಾರ ಕಾವೇರಿ ಎಲ್ಲಾ ಹಂತದ ನೀರು ಪೂರೈಕೆ ಯೋಜನೆಗಳು ಆರು ಗಂಟೆಗಳ ಕಾಲ ಕಾರ್ಯಾಚರಣೆ ಸ್ಥಗಿತಗೊಳಿದೆ. ಆದ್ದರಿಂದ 24ರ ಮಧ್ಯಾಹ್ನ ಹಾಗೂ 25ರಂದು ನಗರದಾದ್ಯಂತ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಕಾವೇರಿ 4ನೇ ಹಂತದ 2ನೇ ಘಟ್ಟದ ಯೋಜನೆಗೆ ಅಗತ್ಯವಾದ ವಿದ್ಯುತ್ ಪೂರೈಸುವ ಸಲುವಾಗಿ ಹಾರೋಹಳ್ಳಿಯ ಬಳಿ 66/11 ಕೆ.ವಿ.ಯ ಎರಡು ಟ್ರಾನ್ಸ್ ಫಾರ್ಮರ್ ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು.
ಇದರಲ್ಲಿ ಒಂದು ಮಾತ್ರ ಅಳವಡಿಕೆಯಾಗಿದೆ. ಎರಡನೇ ಟ್ರಾನ್ಸ್ಫಾರ್ಮರ್ ಅನ್ನು ಸೆ.24ರಂದು ಅಳವಡಿಸಲು ಬೆಂಗಳೂರು ಜಲಮಂಡಳಿ ತೀರ್ಮಾನಿಸಿದೆ. ಆದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ತಾತಗುಣಿಯಲ್ಲಿ ಕಾವೇರಿ 1,2 ಮತ್ತು 3ನೇ ಹಂತದ ಯೋಜನೆಯ ಓವರ್ ಹೆಡ್ ಮಾರ್ಗಗಳನ್ನು 66 ಕೆ. ವಿ, ಯು. ಜಿ ಕೇಬಲ್ ಮಾರ್ಗಕ್ಕೆ ಸಂಪರ್ಕಿಸುವ ಕಾರ್ಯ ನಡೆಯಲಿದೆ. ಎಲ್ಲಾ ಯೋಜನೆಗಳಿಗೂ ಅನ್ವಯವಾಗುವಂತೆ 6 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತ ಮಾಡಲು ಜಲಮಂಡಳಿ ಮುಂದಾಗಿದೆ.
ಆದ್ದರಿಂದ ಸೆ.24 ಮತ್ತು 25 ಬೆಂಗಳೂರಿನ ಎಲ್ಲಾ ಬಡಾವಣೆಗಳಲ್ಲೂ ನೀರಿನ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಹೇಳಿದೆ. ಸಾರ್ವಜನಿಕರು ಎರಡು ದಿನಗಳ ಕಾಲ ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದೆ.











Click it and Unblock the Notifications