ಬೇಸಿಗೆ ಆರಂಭಕ್ಕೆ ಮುನ್ನಾ ಬೆಂಗಳೂರಿಗರಿಗೆ ನೆಮ್ಮದಿಯ ಸುದ್ದಿ ನೀಡಿದ ಜಲಮಂಡಳಿ
ಬೆಂಗಳೂರು, ಜನವರಿ 30: ಬೇಸಿಗೆ ಆರಂಭಕ್ಕೆ ಮುನ್ನಾ ಬೆಂಗಳೂರಿಗೆ ನೆಮ್ಮದಿಯ ಸುದ್ದಿಯನ್ನು ಜಲಮಂಡಳಿ ನೀಡಿದೆ.
'ಬರಲಿರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆ ಆಗದು, ಈಗಾಗಲೇ ಸಾಕಷ್ಟು ನೀರು ಸಂಗ್ರಹ ಇದೆ' ಎಂದು ಜಲಮಂಡಳಿ ಹೇಳಿದೆ.
ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಲಮಂಡಳಿಯ ಎಂಜಿನಿಯರ್, 'ಜೂನ್ ತಿಂಗಳವರೆಗೆ ಪೂರೈಸುವಷ್ಟು ನೀರು ಸಂಗ್ರಹ ಇದೆ' ಎಂದಿದ್ದಾರೆ.

ಫೆಬ್ರವರಿ ಮಧ್ಯದಿಂದಲೇ ಅಗತ್ಯ ಇದ್ದ ಕಡೆಗೆ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಆರಂಭ ಮಾಡಲಾಗುವುದು. ಯಾವುದೇ ಪ್ರದೇಶಗಳಿಗೆ ತಾರತಮ್ಯ ಮಾಡದಂತೆ ನೀರು ಹಂಚಿಕೆ ಮಾಡಿರೆಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಅಂಕಿ-ಅಂಶಗಳನ್ನೂ ನೀಡಿದ ಮಂಡಳಿ. ನಗರದಲ್ಲಿ ಪ್ರತಿನಿತ್ಯ 145 ಕೋಟಿ ಲೀಟರ್ ನೀರು ಪ್ರತಿನಿತ್ಯ ಪೂರೈಕೆ ಆಗುತ್ತಿದೆ. 40 ಕೋಟಿ ಲೀಟರ್ ನೀರು ಕೊಳವೆ ಬಳಕೆ ಮಾಡಲಾಗುತ್ತಿದೆ. 152.3 ಕೋಟಿ ಲೀಟರ್ ಕೊಳಚೆ ನೀರು ಪ್ರತಿನಿತ್ಯ ನಗರದಲ್ಲಿ ಉತ್ಪಾದನೆ ಆಗುತ್ತಿದೆ, ಅದರಲ್ಲಿ 111 ಕೋಟಿ ಲೀಟರ್ ನೀರು ಸಂಸ್ಕರಣೆಗೆ ಒಳಪಡುತ್ತಿದೆ ಎಂದು ಮಾಹಿತಿ ನೀಡಿದರು.
ಕೆರೆ ಮತ್ತು ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಲು ಯೋಜನೆ ಸಿದ್ಧವಿದೆ ಎಂದ ಜಲಮಂಡಳಿ ಎಂಜಿನಿಯರ್, ಕೊಳಚೆ ನೀರು ಕೆರೆ ಸೇರುವ 914 ಸ್ಥಳಗಳನ್ನು ಗುರುತಿಸಿದ್ದೇವೆ. 72 ಕೋಟಿ ವೆಚ್ಚದಲ್ಲಿ ಈ ಸ್ಥಳಗಳಲ್ಲಿ ಕೊಳವೆ ನಿರ್ಮಿಸಲಾಗುವುದು ಎಂದರು.












Click it and Unblock the Notifications