ಜಿಎಸ್ ಟಿ ಹೊರೆಯಾದರೂ ಇಂದಿರಾ ಕ್ಯಾಂಟೀನ್ ದರ ಬದಲಾಗಲ್ಲ!
ಜಿಎಸ್ ಟಿ ಜಾರಿ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ದರದಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಜ್ಯ ಆಹಾರ ಸಚಿವ ಯುಟಿ ಖಾದರ್ ಸ್ಪಷ್ಟನೆ. ಜಿಎಸ್ ಟಿ ಹೊರೆಯನ್ನು ರಾಜ್ಯ ಸರ್ಕಾರವೇ ಹೊರುತ್ತದೆ ಎಂಬ ಭರವಸೆ ನೀಡಿದ ಸಚಿವರು.
ಬೆಂಗಳೂರು, ಜುಲೈ 3: ಉದ್ದೇಶಿತ ಇಂದಿರಾ ಕ್ಯಾಂಟೀನ್ ನಲ್ಲಿ ದೊರೆಯಲಿರುವ ಉಪಾಹಾರ ಹಾಗೂ ಊಟದ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಖಾತೆ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ, ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ನಲ್ಲಿ ದೊರೆಯುವ ತಿಂಡಿ, ಊಟಗಳ ಬೆಲೆಗಳನ್ನು ಪ್ರಕಟಿಸಿತ್ತು. ಅದರಂತೆ, ಬೆಳಗಿನ ಉಪಾಹಾರಕ್ಕೆ 5 ರು., ಮಧ್ಯಾಹ್ನ ಹಾಗೂ ರಾತ್ರಿ ಭೋಜನಕ್ಕೆ 10 ರು. ನಿಗದಿಪಡಿಸಲಾಗಿತ್ತು.
3 ದಿನಗಳಲ್ಲೇ ಇಂದಿರಾ ಕ್ಯಾಂಟೀನ್ ನಿರ್ಮಾಣ!
ಇದೀಗ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಂಡಿರುವುದರಿಂದ ಇಂದಿರಾ ಕ್ಯಾಂಟೀನ್ ನಲ್ಲಿನ ತಿನಿಸುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಅವರು, '' ಜಿಎಸ್ ಟಿ ಹೊರೆಯನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಅದನ್ನು ಜನರ ಮೇಲೆ ಹಾಕುವುದಿಲ್ಲ. ಹಾಗಾಗಿ, ಇಂದಿರಾ ಕ್ಯಾಂಟೀನ್ ನಲ್ಲಿನ ತಿನಿಸುಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ'' ಎಂದು ತಿಳಿಸಿದ್ದಾರೆ.
ಹಸಿವು ಮುಕ್ತ ರಾಜ್ಯಕ್ಕಾಗಿ ಇಂದಿರಾ ಕ್ಯಾಂಟೀನ್, ಏನಿದರ ವಿಶೇಷ?
ಈಗಾಗಲೇ ಪ್ರಕಟಿಸಿರುವಂತೆ, ಇದೇ ವರ್ಷ ಆಗಸ್ಟ್ 15ರಿಂದ ಇಂದಿರಾ ಕ್ಯಾಂಟೀನ್ ಗಳು ಆರಂಭಗೊಳ್ಳಲಿವೆ.