ಡೇವಿಡ್ ಕಾರ್ಯಕ್ರಮ ರದ್ದು: ಆಯೋಜಕರ ಹೇಳಿಕೆಗೆ ಐಜಿಪಿ ಅಚ್ಚರಿ
ಬೆಂಗಳೂರು, ಜನವರಿ 12: ಇಂದು ಸಂಜೆ ನಡೆಯಬೇಕಿದ್ದ ಫ್ರೆಂಚ್ ಸಂಗೀತಗಾರ ಡೇವಿಡ್ ಗುಯೆಟ್ಟಾ ಅವರ ಸಂಗೀತ ಕಾರ್ಯಕ್ರಮ ರದ್ದಾಗಿದ್ದು, ಇದಕ್ಕೆ ಕಾರ್ಯಕ್ರಮದ ಆಯೋಜಕರು ನೀಡಿರುವ ಕಾರಣವನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಡಿ. 31ರ ರಾತ್ರಿ ನಡೆದಿದ್ದ ನೂತನ ವರ್ಷಾಚರಣೆ ಸಂದರ್ಭದಲ್ಲಿ ಕೆಲ ಮಹಿಳೆಯರ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯಗಳ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಿಗಡಾಯಿಸಿರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಿರುವುದಾಗಿ ಆಯೋಜಕರು ಪ್ರಕಟಣೆ ನೀಡಿದ್ದರು.[ಡೇವಿಡ್ ಗುಯೆಟ್ಟಾ ಸಂಗೀತ ಸಂಜೆ ಕಾರ್ಯಕ್ರಮ ರದ್ದು]
ಆದರೆ, ಇದರ ಹಿಂದಿನ ಅಸಲಿ ವಿಚಾರವನ್ನು ಸೀಮಂತ್ ಕುಮಾರ್ ಸಿಂಗ್ ಅವರು ಬಿಚ್ಚಿಟ್ಟಿದ್ದಾರೆ. ಕಾರ್ಯಕ್ರಮವನ್ನು ಆಯೋಜಿಸುವ ಹಿಂದಿನ ದಿನ ನಮ್ಮನ್ನು ಭೇಟಿ ಮಾಡಿದ ಕಾರ್ಯಕ್ರಮದ ಆಯೋಜಕರು, ದೊಡ್ಡ ಕಾರ್ಯಕ್ರಮವಾಗಿರುವುದರಿಂದ ಭದ್ರತಾ ವ್ಯವಸ್ಥೆ ಕೊಡಬೇಕೆಂದು ಮನವಿ ಮಾಡಿದರು.
Hardly 1 day was given to organise,APMC elections are on Police is deployed there: Seemant Kumar Singh IGP Bengaluru on David Guetta concert pic.twitter.com/nUdhpLY9Nu
— ANI (@ANI_news) January 12, 2017
ಆದರೆ, ಕಾರ್ಯಕ್ರಮ ನಡೆಯುತ್ತಿರುವ ದಿನವೇ (ಜ.12) ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಯ (ಎಪಿಎಂಸಿ) ಚುನಾವಣೆ ನಡೆಯಬೇಕಿದ್ದರಿಂದಾಗಿ ಪೊಲೀಸರನ್ನು ಹೆಚ್ಚಿನ ಭದ್ರತೆಗೆ ಚುನಾವಣಾ ಕೇಂದ್ರಗಳಿಗೆ ನಿಯೋಜಿಸಲಾಗಿತ್ತು. ಹಾಗಾಗಿ, ಕಾರ್ಯಕ್ರಮಕ್ಕೆ ನೀಡಬೇಕಾದ ಅಗತ್ಯ ಭದ್ರತೆಯನ್ನು ನೀಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೆವು.
ಆದರೆ, ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಕಾರ್ಯಕ್ರಮ ರದ್ದಾಗಿದೆ ಎಂದು ಆಯೋಜಕರು ತಿಳಿಸಿರುವುದು ಸುಳ್ಳು. ಕಾನೂನು ಸುವ್ಯವಸ್ಥೆ ಸರಿಯಲ್ಲ ಎಂದು ಯಾವುದೇ ಭದ್ರತಾ ಸಂಸ್ಥೆ ಅಧಿಕೃತವಾಗಿ ಅವರಿಗೆ ಹೇಳಿಲ್ಲ ಸಿಂಗ್ ವಿವರಿಸಿದ್ದಾರೆ.