ಮೆಟ್ರೋದಲ್ಲಿ ಹಿಂದಿ ಬಳಸಲು ಸಾಧ್ಯವಿಲ್ಲ - ಕೇಂದ್ರಕ್ಕೆ ಸಿಎಂ ಪತ್ರ
ಬೆಂಗಳೂರು, ಜುಲೈ 28: 'ನಮ್ಮ ಮೆಟ್ರೋ'ದಲ್ಲಿ ಹಿಂದಿಯನ್ನು ಬಳಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದಾರೆ. ಈ ಕುರಿತು ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವ ನರೇಂದ್ರ ಸಿಂಗ್ ತೋಮರ್ ಗೆ ಮುಖ್ಯಮಂತ್ರಿ ಎರಡು ಪುಟಗಳ ಪತ್ರ ಬರೆದಿದ್ದಾರೆ.
"ಮೆಟ್ರೋದಲ್ಲಿ ಭಾಷಾ ಬಳಕೆ ಸಂಬಂಧ ಕರ್ನಾಟಕದ ನೀತಿಯಂತೆ ಕನ್ನಡ ಮತ್ತು ಇಂಗ್ಲೀಷ್ ಮಾತ್ರ ಬಳಸಲಾವುದು ಎಂದು ಮುಖ್ಯ ಕಾರ್ಯದರ್ಶಿಗಳು ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ ಕೇಂದ್ರ ನಗರಾಭಿವೃದ್ಧಿ ಇಲಾಖೆ 2016ರಲ್ಲಿ ಕನ್ನಡ, ಹಿಂದಿ, ಮತ್ತು ಇಂಗ್ಲೀಷ್ ಭಾಷೆಯನ್ನು ಬಳಸುವಂತೆ ತಿಳಿಸಿದೆ," ಎಂಬುದನ್ನು ಮುಖ್ಯಮಂತ್ರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ಕೇಂದ್ರ ಸರಕಾರದ ನಿಲುವು ಸರಿ ಇಲ್ಲ' ಎಂದು ಪ್ರಸ್ತಾಪಿಸಿರುವ ಮುಖ್ಯಮಂತ್ರಿಗಳು, "ನಮ್ಮ ಮೆಟ್ರೋಗೆ ರಾಜ್ಯ ಮತ್ತು ಕೇಂದ್ರ ಸಮಪಾಲು ಹಣ ಹೂಡಿರಬಹುದು. ಆದರೆ ಹೆಚ್ಚಿನ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರವೇ ಹೊತ್ತುಕೊಂಡಿದೆ. ಭದ್ರತೆ, ಸಾಲ ಮರುಪಾವತಿ ಸೇರಿದಂತೆ ಬಿಎಂಆರ್'ಸಿಎಲ್ ಮೇಲೆ ನಮಗೆ ಹೆಚ್ಚಿನ ಜವಾಬ್ದಾರಿ ಇದೆ," ಎಂದು ಹೇಳಿರುವ ಸಿದ್ದರಾಮಯ್ಯ, "ಹಾಗಾಗಿ ಇಲ್ಲಿನ ಭಾಷಾನೀತಿಯನ್ನೇ ಅನುಸರಿಸುತ್ತೇವೆ," ಎಂದು ಖಡಕ್ಕಾಗಿ ಹೇಳಿದ್ದಾರೆ.
ಇದಲ್ಲದೆ ಅವರು ಪತ್ರದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗಳು, ಮಸಿ ಚಳವಳಿ, ಸೋಷಿಯಲ್ ಮೀಡಿಯಾ ಕ್ಯಾಂಪೇನ್ ಗಳನ್ನುಉಲ್ಲೇಖಿಸಿದ್ದಾರೆ. ಹೀಗಾಗಿ, "ಇಲ್ಲಿನ ಜನರ ಬೇಡಿಕೆಯಂತೆ ಕನ್ನಡ ಮತ್ತು ಎಲ್ಲರಿಗೂ ಅರ್ಥವಾಗುವ ಇಂಗ್ಲೀಷ್ ಭಾಷೆ ಬಳಸಲಾಗುವುದು. ಹಿಂದಿ ಬಳಸಲು ಸಾಧ್ಯವಿಲ್ಲ. ಇಲ್ಲಿನ ಜನರ ಸಂಸ್ಕೃತಿ, ಭಾವನಾತ್ಮಕತೆಯನ್ನು ಗೌರವಿಸಬೇಕಾಗುತ್ತದೆ ಎಂಬ ನಮ್ಮ ವಾದವನ್ನು ನೀವು ಒಪ್ಪಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ," ಎಂದು ನೇರವಾಗಿ ಪತ್ರ ಬರೆದು ಮುಗಿಸಿದ್ದಾರೆ ಸಿದ್ದರಾಮಯ್ಯ.
ನಮ್ಮ ಮೆಟ್ರೋ ನಾಮಫಲಕಗಳಲ್ಲಿ ಹಿಂದಿ ಕೈಬಿಟ್ಟು ಪುನರ್ ವಿನ್ಯಾಸ ಮಾಡುವಂತೆ ಮೆಟ್ರೋ ನಿಗಮಕ್ಕೆ ಸೂಚಿಸಿರುವುದರ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿ ಪತ್ರ ಬರೆದಿದ್ದೇನೆ pic.twitter.com/Y4M4CcffMC
— CM of Karnataka (@CMofKarnataka) July 28, 2017
ಹೀಗಾಗಿ ನಾವು ಬಿಎಂಆರ್'ಸಿಎಲ್ ಗೆ ಬೋರ್ಡ್ ಗಳನ್ನು ಮತ್ತು ಸೂಚನಾ ಫಲಕಗಳನ್ನು ಮತ್ತೊಮ್ಮೆ ಮರು ವಿನ್ಯಾಸ ಮಾಡಲು ಸೂಚಿಸಲಿದ್ದೇವೆ ಎಂಬುದನ್ನು ಪತ್ರದಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಹಿಂದಿಯನ್ನು ಮಲವೊಲಿಕೆ ಮೂಲಕ ಜಾರಿಗೆ ತರಬಹುದೇ ವಿನಃ ಒತ್ತಡದಲ್ಲಿ ಹೇರಿಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನೂ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ.
ಇದು ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆದ ಹೋರಾಟಕ್ಕೆ ಸಿಕ್ಕ ಜಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣಿಸಲಾಗುತ್ತಿದೆ.












Click it and Unblock the Notifications