ನೈಟ್ ಕರ್ಫ್ಯೂ; ನಮ್ಮ ಮೆಟ್ರೋ ಸಂಚಾರದ ಮಾಹಿತಿ
ಬೆಂಗಳೂರು, ಡಿಸೆಂಬರ್ 27; ಕರ್ನಾಟಕ ಸರ್ಕಾರ ನೈಟ್ ಕರ್ಫ್ಯೂ ಘೋಷಣೆ ಮಾಡಿದದೆ. ಡಿಸೆಂಬರ್ 28ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ.
ನೈಟ್ ಕರ್ಫ್ಯೂವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಬಿಬಿಎಂಪಿ, ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಜಾರಿ ಬಗ್ಗೆ ಪರ, ವಿರೋಧ ಚರ್ಚೆ ನಡೆದಿದೆ.
ಮಂಗಳವಾರ ರಾತ್ರಿ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ನಮ್ಮ ಮೆಟ್ರೋ ಸಂಚಾರ ಹೇಗೆ? ಎಂಬ ಪ್ರಶ್ನೆ ಸಹಜ.

ಸೋಮವಾರ ನಮ್ಮ ಮೆಟ್ರೋ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಸರ್ಕಾರ ಸಹ ನೈಟ್ ಕರ್ಫ್ಯೂ ಮಾರ್ಗಸೂಚಿಯಲ್ಲಿ ರೈಲು, ಬಸ್, ವಿಮಾನ, ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶವಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ನಮ್ಮ ಮೆಟ್ರೋ ಸಂಚಾರ; 28/12/2021 ರ ರಾತ್ರಿ 10 ಗಂಟೆಯಿಂದ ಬೆಂಗಳೂರಿನಲ್ಲಿ ಜಾರಿಯಾಗಲಿರುವ ನೈಟ್ ಕರ್ಫ್ಯೂ ಕಾರಣದಿಂದಾಗಿ ಮೆಟ್ರೋ ರೈಲುಗಳ ಆವರ್ತನವನ್ನು ರಾತ್ರಿ 10 ಗಂಟೆಯ ನಂತರ ಕಡಿಮೆಗೊಳಿಸಲಾಗುತ್ತದೆ. ಆದರೆ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮೆಟ್ರೋ ಸಂಚಾರದ ಅವಧಿ; ಡಿಸೆಂಬರ್ 20ರಿಂದ ಜಾರಿಗೆ ಬರುವಂತೆ ನಮ್ಮ ಮೆಟ್ರೋ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ವಾರದ ದಿನಗಳಲ್ಲಿ (ಸೋಮವಾರದಿಂದ ಶನಿವಾರ) ಎಲ್ಲಾ ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯಿಂದ ಮೊದಲ ಮೆಟ್ರೋ ರೈಲು ಬೆಳಗ್ಗೆ 5 ಗಂಟೆಗೆ ಸಂಚಾರ ಆರಂಭಿಸಲಿದೆ. ಭಾನುವಾರ ಮಾತ್ರ ಬೆಳಗ್ಗೆ 7 ಗಂಟೆಗೆ ರೈಲು ಸೇವೆ ಆರಂಭವಾಗುತ್ತದೆ.
ವಾರದ ಎಲ್ಲಾ ದಿನಗಳು ಎಲ್ಲಾ ಟರ್ಮಿನಲ್ಗಳಿಂದ ರಾತ್ರಿ 23.00 (11 ಗಂಟೆ)ಗೆ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ನಿಂದ 23.30 (11.30)ಕ್ಕೆ ಕೊನೆಯ ಮೆಟ್ರೋ ರೈಲು ಹೊರಡಲಿದೆ.
ಡಿಸೆಂಬರ್ 28ರಿಂದ ಜನವರಿ 7ರ ತನಕ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಅವಶ್ಯಕ ಸೇವೆ ಹೊರತು ಪಡಿಸಿ ಉಳಿದಂತೆ ಜನರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಯಾವುದಕ್ಕೆ ಅವಕಾಶ?
* ಬಸ್, ರೈಲು, ಮೆಟ್ರೋ, ವಿಮಾನ ಸೇರಿದಂತೆ ಎಲ್ಲಾ ಬಗೆಯ ಸಾರ್ವಜನಿಕ ಸೇವೆಗೆ ಅವಕಾಶವಿದೆ. ಪ್ರಯಾಣಿಕರು ಟಿಕೆಟ್ ತೋರಿಸಿ ಸಂಚಾರ ನಡೆಸಬಹುದಾಗಿದೆ.
* ತುರ್ತು ಸಂದರ್ಭದಲ್ಲಿ ರೋಗಿಗಳು ಮತ್ತು ಅವರ ಸಹಾಯಕರು ಪ್ರಯಾಣ ಮಾಡಬಹುದಾಗಿದೆ.
* ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಕೈಗಾರಿಕೆಗಳು, ಕಂಪನಿಗಳು ಕಾರ್ಯ ನಿರ್ವಹಣೆ ಮಾಡಬಹುದು. ನೌಕರರು ಸಂಸ್ಥೆಯ ಗುರುತಿನ ಚೀಟಿ ತೋರಿಸಿ ಸಂಚಾರ ನಡೆಸಬಹುದಾಗಿದೆ.
* ಟೆಲಿಕಾಂ ಮತ್ತು ಇಂಟರ್ ನೆಟ್ ಸೇವೆಗೆ ಸಂಬಂಧಿಸಿದ ಸಂಸ್ಥೆಗಳ ನೌಕರರು ಸಂಚಾರ ನಡೆಸಲು ಅವಕಾಶವಿದೆ.
* ವೈದ್ಯಕೀಯ ಸೇವೆ, ತುರ್ತು ಸೇವೆ, ಔಷಧಿ ಕಂಪನಿಗಳು ಕಾರ್ಯ ನಿರ್ವಹಣೆ ಮಾಡಬಹುದು. ಉಳಿದ ಎಲ್ಲಾ ವಾಣಿಜ್ಯ ಸೇವೆಗಳು ಬಂದ್.
ನೈಟ್ ಕರ್ಫ್ಯೂ ವಾಪಸ್ ಇಲ್ಲ; ನೈಟ್ ಕರ್ಫ್ಯೂ ಜಾರಿ ಕುರಿತು ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ, "ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನೈಟ್ ಕರ್ಫ್ಯೂ ನಿರ್ಧಾರವನ್ನು ಹಿಂಪಡೆಯುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ಆರೋಗ್ಯದ ದೃಷ್ಟಿಯಿಂದ ನೈಟ್ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಬೇರೆ ಯಾವುದೇ ಉದ್ದೇಶವಿಲ್ಲ. ವ್ಯಾಪಾರ ವಹಿವಾಟು ನಡೆಯಬೇಕು ಎಂಬುದು ಸರ್ಕಾರದ ಭಾವನೆ ಕೂಡ" ಎಂದರು.












Click it and Unblock the Notifications