ಭಾವನಾತ್ಮಕ ಭಾಷಣ ಮಾಡಿದ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಮೇ 25: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಮೊದಲ ಭಾಷಣದಲ್ಲಿ ಭಾವನಾತ್ಮಕರಾಗಿ ಮಾತನಾಡಿದರು. ಜೊತೆಗೆ ಎಲ್ಲ ನಾಯಕರಿಗೆ ಸದನದ ಕುರಿತು ಕಿವಿ ಮಾತುಗಳನ್ನೂ ಹೇಳಿದರು.
ಹಲವು ತಮಾಷೆ ಮಾತುಗಳ ಜೊತೆಗೆ ಸದನದಲ್ಲಿ ಎರಡೂ ಪಕ್ಷದ ನಾಯಕರುಗಳು, ಸದಸ್ಯರು ಹೇಗೆ ನಡೆದುಕೊಳ್ಳಬೇಕು ಎಂದು ಅವರು ಕಿವಿಮಾತನ್ನು ಹೇಳಿದರು. ಲಘುವಾಗಿ ಎಚ್ಚರಿಸಿದರು.
ಸದನದ ಚರ್ಚೆ ವೇಳೆ ಮಾತುಗಳ ಬಳಕೆ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ ಅವರು, ಯಾವುದೇ ಕೆಟ್ಟ ಪದಗಳನ್ನು ಬಳಸದೆ ಪರಿಣಾಮಕಾರಿಯಾಗಿ ಟೀಕಿಸಲು ನಮ್ಮ ಸುಂದರ ಭಾಷೆಯಲ್ಲಿ ಪದಗಳು ಸಾಕಷ್ಟಿವೆ ಹಾಗಾಗಿ ಯಾರೇ ಆಗಲಿ ಪದಗಳ ಬಳಕೆ ಬಗ್ಗೆ ಎಚ್ಚರ ಇರಲಿ ಎಂದರು.

ಕೆಲವು ಉದಾಹರಣೆಗಳ ಮೂಲಕ, ಹಾಸ್ಯ ಚಟಾಕಿಗಳ ಮೂಲಕ ಟೀಕೆ ಹೇಗಿರಬೇಕು ಎಂದು ಹೇಳಿದ ರಮೇಶ್ ಕುಮಾರ್ ಅವರು, ತಾವು ಆರಾಧಿಸುವ ಅತ್ಯುತ್ತಮ ನಾಯಕರುಗಳನ್ನು ನೆನೆಸಿಕೊಂಡರು.
ದೇವೇಗೌಡ, ವೈಕುಂಠ ಅವರನ್ನು ನೆನೆಸಿಕೊಂಡ ಅವರು, ದೇವೇಗೌಡ ಅವರು ಸದನದ ನಿಯಮಗಳನ್ನು ಎಂದೂ ಮೀರುತ್ತಿರಲಿಲ್ಲ, ನಾನು ಸಣ್ಣವನಾಗಿದ್ದರೂ ಕೂಡ ದಿನ ಕಲಾಪ ಆರಂಭವಾಗುವ ಮುಂಚೆ ಭೇಟಿ ಆಗಿಯೇ ಹೋಗುತ್ತಿದ್ದರು ಎಂದರು.
ನಾವೆಲ್ಲಾ ಸೇರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿರುವ ಈ ಅತ್ಯಂತ ಅದ್ಭುತವಾದ ಸಂವಿಧಾನವನ್ನು ಉಳಿಸಿಕೊಂಡು ಹೋಗೋಣ, ನಾವೆಲ್ಲಾ ಸೇರಿ ಕರ್ನಾಟಕದ ಜನರು ಕೊಟ್ಟಿರುವ ಆದೇಶವನ್ನು ಪಾಲಿಸೋಣ, ಕಾನೂನು, ಸಂವಿಧಾನ, ನ್ಯಾಯಗಳನ್ನು ಚಾಚೂ ತಪ್ಪದೆ ಪಾಲಿಸಿ ಕರ್ನಾಟಕದ ಪ್ರಗತಿಗೆ ಯೋಗದಾನ ಮಾಡೋಣ ಎಂದರು.












Click it and Unblock the Notifications