Drug law: ಡ್ರಗ್ಸ್ ದಂಧೆ ಕಡಿವಾಣಕ್ಕೆ ಹೊಸ 'ಕಾನೂನು' ಜಾರಿ: ಸರ್ಕಾರ
ಬೆಂಗಳೂರು ಗ್ರಾಮಾಂತರ, ಫೆಬ್ರವರಿ 09: ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿ ತರಲು ಚಿಂತನೆ ನಡೆಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ಪೇಟೆಯ ಕರ್ನಾಟಕ ವೇಸ್ಟೇಜ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಪ್ರದೇಶದಲ್ಲಿ ನಡೆದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ 'ವಶಪಡಿಸಿಕೊಂಡ ಮಾದಕ ವಸ್ತುಗಳ ನಾಶ ಕಾರ್ಯಕ್ರಮ' ನಡೆಯಿತು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಡ್ರಗ್ಸ್ ನಂತಹ ಮಾಧಕವಸ್ತು ದಂಧೆಯಲ್ಲಿ ತೊಡಗುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ದಂಧೆ ಕಡಿವಾಣ ಹಾಕಲು ಚಿಂತನೆ ನಡೆದಿದ್ದು, ಅದಕ್ಕಾಗಿ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹಾಳು ಚಟಕ್ಕೆ ದಾಸರಾಗುತ್ತಿದ್ದಾರೆ
ಪಂಜಾಬ್ನಲ್ಲಿ ಪ್ರತಿಯೊಬ್ಬ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿದ್ದಾರೆ. ಮಾದಕವಸ್ತು ಬೆರೆಸಿದ ಚಾಕೋಲೆಟ್ ಮಾರುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ. ಶಾಲಾ-ಕಾಲೇಜು ಮಕ್ಕಳು ಸಹ ಈ ಹಾಳು ಮಾಧಕ ವ್ಯಸನಲ್ಲಿ ತುತ್ತಾಗುತ್ತಿದ್ದಾರೆ. ನಿರಂತರ ವ್ಯಸನದಿಂದ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೇ ಇಂತಹ ದಂಧೆ ಮಾಡುವವರು ಬೇರೆಯವರನ್ನು ಇದರ ವ್ಯಸನಕ್ಕೆ ಅಂಟಿಸುವ ದುರುದ್ದೇಶ ಹೊಂದಿರಲೂಬಹುದು. ಇದಕ್ಕೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಗೃಹ ಇಲಾಖೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಲು ಕಾನೂನು ಜಾರಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು.
ಉತ್ತಮ ಸಮಾಜ ನಿರ್ಮಾಣದ ಸವಾಲು ಮುಂದಿದೆ
ಇಂದಿನ ಸಮಾಜವು ಮಾಧಕ ವಸ್ತುಗಳಿಂದ ನಾಶವಾಗುತ್ತಿದೆ. ಈ ಡ್ರಗ್ಸ್ ದಂಧೆ ಪ್ರಪಂಚದ ಜನರಲ್ಲಿ ಆತಂಕ ಸೃಷ್ಟಿಸಿದೆ. ದೇಶದ ಭವಿಷ್ಯ ಎನ್ನಲಾಗುವುದ ಯುವಕರೇ ಈ ಮಾದಕ ವಸ್ತುಗಳಿಗೆ ಅಡಿಯಾಳಾಗುತ್ತಿದ್ದಾರೆ. ಇಂತಹ ಬೆಳವಣಿಗೆ ಮಧ್ಯೆ ಒಳ್ಳೆಯ ಸಮಾಜ ನಿರ್ಮಾಣ ಮಾಡುವುದೇ ದೊಡ್ಡದೊಂದು ಸವಾಲು ಎದುರಾಗಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ವಿಶ್ವಕ್ಕೆ ಸವಾಲಾಗಿರುವ ಡ್ರಗ್ಸ್ ದಂಧೆಯನ್ನು ಎದುರಿಸುವಲ್ಲಿ ಕೆಲ ಸಣ್ಣ ರಾಷ್ಟ್ರಗಳು ಸೋತು ಕೈಚೆಲ್ಲಿ ಕುಳಿತಿವೆ. ಹಾಲೆಂಡ್, ಸ್ವಿಟ್ಜರ್ಲೆಂಡ್ ಸೇರಿದಂತೆ ಇನ್ನು ಕೆಲದೇಶಗಳು ಏನಾದರಾಗಲಿ ಎಂಬಂತೆ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವುದನ್ನು ನಿಲ್ಲಿಸಿ, ಸೋಲನ್ನು ಒಪ್ಪಿಕೊಂಡಿವೆ. ಇಂತಹ ದುಸ್ಥಿತಿ ನಮ್ಮ ದೇಶಕ್ಕೆ ಬರಬಾರದು. ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.
ಕರ್ನಾಟಕ ವಿವಿಧೆಡೆ ದಂಧೆಗೆ ನಿಯಂತ್ರಣ
ಅತ್ಯಧಿಕ ಪ್ರಬಲ ದೇಶಗಳೇ ಮಾಧಕ ವಸ್ತುಗಳು ದೇಶದ ಯುವಕರ ಕೈಗೆ ಸಿಗದತೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿವೆ. ಅದೇ ಮಾದರಿಯಲ್ಲಿ ಇಲ್ಲಿಯೂ ಕಡಿವಾಣ ಹಾಕಬೇಕು. ಈಗಾಗಲೇ ಮಂಡ್ಯ, ಮೈಸೂರು, ಗದಗ ಜಿಲ್ಲೆಗಳು ಡ್ರಗ್ಸ್ ದಂಧೆ ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್ಪಿ) ಸವಾಲಾಗಿ ಸ್ವೀಕರಿಸಿ ಜಿಲ್ಲಾ ಮಟ್ಟದಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಮ್ಮ ಸರ್ಕಾರ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಘೋಷಣೆ ಮಾಡಿದೆ. ಡ್ರಗ್ಸ್ ಪರೀಕ್ಷಿಸುವ ಕಿಟ್, ಪೊಲೀಸರಿಗೆ ವಿಶೇಷ ತರಬೇತಿ, ಕಾನೂನು ಭದ್ರಪಡಿಸುವ ಕೆಲಸ ಮಾಡಲಾಗುತ್ತಿದೆ. ಇಲಾಖೆಯ ಕೆಳಹಂತದ ಅಧಿಕಾರಿ, ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅದರ ಸಫಲತೆಯು ಕಳೆದ ಒಂದು ವರ್ಷದ ಅಂಕಿ-ಅಂಶದಿಂದ ಗೊತ್ತಾಗುತ್ತದೆ. ದಂಧೆ ವಿರುದ್ಧ ಕ್ರಮಗಳು ನಿರಂತರವಾಗಬೇಕು ಎಂದು ತಿಳಿಸಿದರು.












Click it and Unblock the Notifications