ಕರ್ನಾಟಕದಲ್ಲಿ ಮಾದಕ ದ್ರವ್ಯ ಜಾಲ ಅವ್ಯಾಹತ : ಬೆಚ್ಚಿಬೀಳುವ ಅಂಕಿಅಂಶಗಳು
ಬೆಂಗಳೂರು, ಜುಲೈ 10 : ಕರ್ನಾಟಕದಲ್ಲಿ ಮಾದಕ ದ್ರವ್ಯ ಜಾಲ ಅವ್ಯಾಹತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಎನ್ಡಿಪಿಎಸ್ (The Narcotic Drugs and Psychotropic Substances Act, 1985) ಕಾಯ್ದೆಯಡಿ ಒಟ್ಟು 2,484 ಪ್ರಕರಣಗಳು ದಾಖಲಾಗಿದ್ದು 182 ಪ್ರಕರಣಗಳು ವಿಲೇವಾರಿಯಾಗಿವೆ. 142 ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ 40 ಪ್ರಕರಣಗಳು ಖುಲಾಸೆಗೊಂಡಿವೆ. ಇನ್ನು ಉಳಿದ ಪ್ರಕರಣಗಳು ವಿವಿಧ ಹಂತದಲ್ಲಿ ಬಾಕಿ ಉಳಿದಿವೆ ಎಂದು ಪರಮೇಶ್ವರ ಅವರು ವಿವರ ನೀಡಿದರು.
ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಸದಸ್ಯ ಕೆ. ಪ್ರತಾಪ್ಚಂದ್ರ ಶೆಟ್ಟಿ ಮತ್ತು ಐವಾನ್ ಡಿಸೋಜ ಅವರ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರು, ಮಾದಕ ದ್ರವ್ಯ ಜಾಲ ಕುರಿತು ಸ್ಥಳೀಯ ಬಾತ್ಮೀದಾರರು, ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ಬೀಟ್ ಸಿಬ್ಬಂದಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಉತ್ತರಿಸಿದರು.
ಧೃತಿಗೆಡದಂತೆ ಪೌರ ಕಾರ್ಮಿಕರಿಗೆ ಪರಮೇಶ್ವರ್ ಮನವಿ
ಪ್ರತಿ ಘಟಕಗಳಲ್ಲಿ ಅಪರಾಧ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದ್ದು, ಸದರಿ ಠಾಣೆಗಳು ಮಾದಕದ್ರವ್ಯಗಳ ಅಕ್ರಮ ಸಾಗಾಣಿಕೆ ಬಗ್ಗೆ ವಿಶೇಷವಾಗಿ ಮಾಹಿತಿಯನ್ನು ಸಂಗ್ರಹಿಸಿ, ಕ್ರಮ ಜರುಗಿಸುತ್ತಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾದಕ ದ್ರವ್ಯ ಸಾಗಾಣಿಕೆ ಮತ್ತು ಬಳಕೆ ಕುರಿತು ದಾಖಲಾದ ಪ್ರಕರಣಗಳ ವಿಚಾರಣೆಯನ್ನು ಆಯಾ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಗಳು ನಡೆಸುತ್ತಿವೆ ಎಂದರು.
ಬೆಂಗಳೂರು ನಗರದಲ್ಲಿ ಮಾದಕ ದ್ರವ್ಯ ಸಾಗಾಣೆ ಮತ್ತು ಬಳಕೆ ವಿರುದ್ಧ ದಾಖಲಾದ ಪ್ರಕರಣಗಳ ವಿಚಾರಣೆಯನ್ನು ಸಿಸಿಹೆಚ್ -33 ವಿಶೇಷ ನ್ಯಾಯಾಲಯ ನಡೆಸುತ್ತಿದೆ ಎಂಬ ವಿವರಣೆಯನ್ನು ಪರಮೇಶ್ವರ ನೀಡಿದರು.
ಬೆಂಗಳೂರು ನಗರದ ವಿಶೇಷ ನ್ಯಾಯಾಲಯ ಸೇರಿದಂತೆ ರಾಜ್ಯದಲ್ಲಿ ಒಟ್ಟು 30 ನ್ಯಾಯಾಲಯಗಳಲ್ಲಿ ಮಾದಕ ದ್ರವ್ಯ ಸಾಗಾಣೆ ಮತ್ತು ಬಳಕೆ ವಿರುದ್ಧ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.