ಆ.30ರಿಂದ ನಂದಿನಿ ಹಾಲು ಸಿಗೋದು ಕಷ್ಟ
ಬೆಂಗಳೂರು, ಆ.28 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಂದಿನಿ ಹಾಲು ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಆ.30ರಿಂದ ಪ್ರತಿಭಟನೆ ಆರಂಭಿಸಲಿದೆ. ನಂದಿನಿ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಸಂಘ ತೀರ್ಮಾನ ಕೈಗೊಂಡಿದೆ.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಆರ್. ರಂಗಸ್ವಾಮಿ ಅವರು, ನಗರದಲ್ಲಿ 1400ಕ್ಕೂ ಹೆಚ್ಚು ಹಾಲು ಮಾರಾಟಗಾರರಿದ್ದು, ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳ ಪರಿಹಾರ ಮಾಡಿ ಎಂದು ಬೆಂಗಳೂರು ಡೈರಿಯ ಅಧಿಕಾರಿಗಳಿಗೆ 2011ರಿಂದಲೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ, ಯಾವುದೇ ಸಮಸ್ಯೆ ಪರಿಹಾರವಾಗಿಲ್ಲ ಎಂದು ಹೇಳಿದರು.

ಆ.30ರಿಂದ ಸಂಘಟದ ಸದಸ್ಯರು ಪ್ರತಿಭಟನೆ ನಡೆಸಲಿದ್ದೇವೆ. ನಂದಿನಿ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿದ್ದೇವೆ ಎಂದು ರಂಗಸ್ವಾಮಿ ಹೇಳಿದರು. ಬೆಂಗಳೂರಿಗೆ ನಿತ್ಯ 20 ಲಕ್ಷ ಲೀಟರ್ ನಂದಿನಿ ಹಾಲು ಪೂರೈಕೆಯಾಗುತ್ತಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ಹಾಲು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದರು. [ದಲಿತರೇತರರ ದನಗಳ ಹಾಲು ಕಪ್ಪಗಿರುತ್ತಾ ಸಿದ್ರಾಮಣ್ಣಾ?]
ನಗರದ ವ್ಯಾಪ್ತಿಯ ಎಲ್ಲಾ ನಂದಿನಿ ಹಾಲಿನ ಬೂತ್ಗಳನ್ನು ಬಂದ್ ಮಾಡಲಾಗುವುದು. ಆ.30ರಂದು ಮಧ್ಯಾಹ್ನ 3 ಗಂಟೆಯಿಂದ ಒಕ್ಕೂಟದ ಕೇಂದ್ರ ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದರು. ನ್ಯಾಯ ದೊರೆಯುವ ತನಕ ಈ ಮುಷ್ಕರವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಘದವರ ಬೇಡಿಕೆಗಳೇನು
* ಕೆಎಂಎಫ್ ಅಡಿಯಲ್ಲಿ ಬರುವ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ನಿರ್ದೇಶಕರ ಸ್ಥಾನಕ್ಕೆ ಹಾಲು ಮಾರಾಟಗಾರರನ್ನು ನೇಮಿಸಬೇಕು.
* ಹಾಲು ಮಾರಾಟದ ಪರವಾನಗಿ ಮತ್ತು ವ್ಯಾಟ್ ಸಂಬಂಧಿ ವೆಚ್ಚವನ್ನು ಒಕ್ಕೂಟವೇ ಭರಿಸಬೇಕು.
* ಮಾರಾಟಗಾರರು ಹಾಲಿಗೆ ಪ್ರತಿದಿನ ಹಣ ಪಾವತಿಸುವುದರಿಂದ 3 ದಿನಗಳ ಠೇವಣಿ ಹಣ ಪಡೆಯುವುದನ್ನು ನಿಲ್ಲಿಸಬೇಕು.
* ಹಾಲು ಮಾರಾಟಗಾರರ ಕುಟುಂಬಕ್ಕೆ ಯಶಸ್ವಿನಿ ಯೋಜನೆ ಸೌಲಭ್ಯ ಕಲ್ಪಿಸಬೇಕು.
* ಲೀಕೇಜ್ ಹಾಲಿಗೆ ಶಾಶ್ವತ ಪರಿಹಾರ ಒದಗಿಸಿ, ಲಾರಿ ಚಾಲಕರಿಂದಾಗುವ ವಂಚನೆ ಮತ್ತು ದೌರ್ಜನ್ಯ ತಪ್ಪಿಸಬೇಕು.
* ಆಡಳಿತ ಮಂಡಳಿ ಕೈಗೊಳ್ಳುವ ನಿರ್ಧಾರಗಳಿಗೆ ಹಾಲು ಮಾರಾಟಗಾರರ ಸಲಹೆ ಹಾಗೂ ಅಭಿಪ್ರಾಯವನ್ನು ಪಡೆಯಬೇಕು ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.












Click it and Unblock the Notifications