ಕೋರ್ಟ್ ಮೆಟ್ಟಿಲೇರಿದ ಮೆಟ್ರೋ ಭೂ ಸ್ವಾಧೀನ ವಿವಾದ
ಬೆಂಗಳೂರು, ಅ, 30 : ಜಯದೇವ ಆಸ್ಪತ್ರೆ ಬಳಿಯ ನಮ್ಮ ಮೆಟ್ರೋ ಕಾಮಗಾರಿ ವಿವಾದ ಮತ್ತೆ ತಲೆ ಎತ್ತಿದೆ. ಯೋಜನೆಯ ಕಾಮಗಾರಿಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿಗಳು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಕಾಮಗಾರಿಗಾಗಿ ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ಭೂ ಸ್ವಾಧೀನ ಪ್ರಕ್ರಿಯೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಚಾಲನೆ ನೀಡಿದೆ. ಅ.9ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ, 130 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವುದಾಗಿ ಹೇಳಿದೆ. ಆದರೆ, ಈ ಕುರಿತ ವೈಯಕ್ತಿಕ ಮಾಹಿತಿಯನ್ನು ಸ್ಥಳೀಯ ನಿವಾಸಿಗಳಿ ನೀಡಿಲ್ಲ.

ಬಿಟಿಎಂ ಲೇಜೌಟ್ ಮತ್ತು ಜಯನಗರ 9ನೇ ಹಂತದಲ್ಲಿ 22,864 ಚದರ ಮೀ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಾಗಿ ಪ್ರಾಥಮಿಕ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ, ಈ ಕುರಿತು ನಿವಾಸಿಗಳಿಗೆ ಯಾವುದೇ ನೋಟಿಸ್ ಅನ್ನು ಬಿಎಂಆರ್ ಸಿಎಲ್ ಅಥವ ಕೆಐಎಡಿಬಿ ತಲುಪಿಸಿಲ್ಲ. ಆದ್ದರಿಂದ ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿವಾಸಿಗಳು ಸಿದ್ಧತೆ ನಡೆಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟಗೊಂಡ ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆ ಗಮನಿಸಿದ ನಿವಾಸಿಗಳು, ವೈಯಕ್ತಿಕ ನೋಟಿಸ್ ಗಾಗಿ ಕಾದಿದ್ದಾರೆ. ಆದರೆ, ಇದುವರೆಗೂ ಅವರಿಗೆ ಯಾವುದೇ ನೋಟಿಸ್ ತಲುಪಿಲ್ಲ. ಇದರಿಂದ ಆತಂಕಗೊಂಡಿರುವ ಅವರು, ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ.
ಈಗಾಗಲೇ ಜಯದೇವ ಆಸ್ಪತ್ರೆ ಮುಂಭಾಗ ಮೆಟ್ರೋ ಮಾರ್ಗದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಬಿಎಂಆರ್ ಸಿಎಲ್ ಹೇಳಿಕೆ ನೀಡಿದೆ. ಆದರೆ, ಯಾವ ಪ್ರದೇಶದಲ್ಲಿ ಬದಲಾವಣೆ ಮಾಡುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇಂತಹ ಗೊಂದಲಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಆಸ್ತಿದಾರರು ನಿರ್ಧರಿಸಿದ್ದಾರೆ.
ಜಯದೇವ ಆಸ್ಪತ್ರೆ ಬಳಿ ಈಗಿರುವ ಯೋಜನೆಯಂತೆ ಕಾಮಗಾರಿ ನಡೆಸಲು 800 ರಿಂದ 1000 ಕೋಟಿಯನ್ನು ಭೂಸ್ವಾಧೀನಕ್ಕೆ ಪರಿಹಾರ ರೂಪದಲ್ಲಿ ಕೊಡಬೇಕಾಗುತ್ತದೆ. ಹೀಗಾಗಿ ಕಡಿಮೆ ಭೂಸ್ವಾಧೀನದಿಂದ ಯೋಜನೆಯನ್ನು ಮುಗಿಸಲು ಚಿಂತನೆ ನಡೆಸಿರುವ ಸಂಸ್ಥೆ, ಮೆಟ್ರೋ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಿದೆ ಎಂದು ಇತ್ತೀಚೆಗೆ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಹೇಳಿದ್ದರು. (ಜಯದೇವ ಆಸ್ಪತ್ರೆ ಬಳಿ ಮೆಟ್ರೋ ಮಾರ್ಗ ಬದಲು)
ಆದರೆ, ಬದಲಾವಣೆ ಮಾಡುವ ಮಾರ್ಗ ಎಲ್ಲಿ ಹಾದು ಹೋಗುತ್ತದೆ ಎಂದು ಅವರು ಮಾಹಿತಿ ನೀಡಿರಲಿಲ್ಲ. ಸದ್ಯ ಕೆಐಎಡಿಬಿ ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಇದರಿಂದ ಆಸ್ತಿದಾರರು ಆತಂಕಗೊಂಡಿದ್ದಾರೆ. ಸದ್ಯ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಅದು ಪೂರ್ಣಗೊಂ ನಂತರ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ಆರಂಭವಾಗಲಿದೆ












Click it and Unblock the Notifications