ಬೆಂಗಳೂರಿನ ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ, ಮಗು ಸಾವು: ಘಟನೆಯಲ್ಲಿ 11 ಮಂದಿ ವಿರುದ್ಧ ಚಾರ್ಜ್ ಶೀಟ್
ಬೆಂಗಳೂರು, ಜೂನ್. 25: ಎಚ್ಬಿಆರ್ ಲೇಔಟ್ ಬಳಿಯ ಹೊರ ವರ್ತುಲ ರಸ್ತೆಯಲ್ಲಿ ಬಿಎಂಆರ್ಸಿಎಲ್ (ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ)ನ ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಕುಸಿದು ಇಬ್ಬರು ಸಾವನ್ನಪ್ಪಿದ ಐದು ತಿಂಗಳ ನಂತರ, ಗೋವಿಂದಪುರ ಠಾಣೆ ಪೊಲೀಸರು 11 ಮಂದಿ ವಿರುದ್ಧ 1,100 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
11 ಮಂದಿಯಲ್ಲಿ ಐವರು ಬಿಎಂಆರ್ಸಿಎಲ್ ನೌಕರರು ಮತ್ತು ಐವರು ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯ 2ಬಿ ಹಂತದ ಮೆಟ್ರೋ ಯೋಜನೆಯ ಗುತ್ತಿಗೆ ಪಡೆದಿದ್ದಾರೆ. ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿದೆ.

ಹೈದರಾಬಾದ್ ಮೂಲದ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯು ಬಿಎಂಆರ್ಸಿಎಲ್ ನ 2B ಹಂತದ ಮೆಟ್ರೋ ಲೈನ್ನ ಸುಮಾರು 37 ಕಿ.ಮೀ. ಉದ್ದದ ಕಾಮಗಾರಿಯನ್ನು ನಡೆಸುತ್ತಿದೆ. ಇದು ಕೆಆರ್ ಪುರಂನಿಂದ ಹೆಬ್ಬಾಳ, ಹೆಬ್ಬಾಳದಿಂದ ಬಾಗಲೂರು ಕ್ರಾಸ್ ಮತ್ತು ಬಾಗಲೂರು ಕ್ರಾಸ್ನಿಂದ ಕೆಐಎ ಟರ್ಮಿನಲ್ ಮೆಟ್ರೋ ಕಾಮಗಾರಿಗಳನ್ನು ಒಳಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, "ನಾವು ಆರೋಪಪಟ್ಟಿಯನ್ನು ಸಲ್ಲಿಸಿದ್ದೇವೆ. ಅದನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಧಿಕೃತವಾಗಿ ಸಲ್ಲಿಸುತ್ತೇವೆ. ಕಂಪನಿ ಸೇರಿದಂತೆ ಒಟ್ಟು ಹನ್ನೊಂದು ಮಂದಿಯ ವಿರುದ್ಧ ಚಾರ್ಜ್ ಶೀಟ್ ಮಾಡಲಾಗಿದೆ. ಐಐಎಸ್ಸಿ ಬೆಂಗಳೂರು ಮತ್ತು ಐಐಟಿ-ಹೈದರಾಬಾದ್ ನಡೆಸಿದ ತನಿಖೆಗಳನ್ನು ನಾವು ಲಗತ್ತಿಸಿದ್ದೇವೆ, ಅದರ ಆಧಾರದ ಮೇಲೆ ಆರೋಪಗಳನ್ನು ರೂಪಿಸಲಾಗಿದೆ" ಎಂದಿದ್ದಾರೆ.
ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಸೈಟ್ ಇಂಜಿನಿಯರ್ಗಳು, ಮೆಟ್ರೋ ಗುತ್ತಿಗೆದಾರರು, ಸೈಟ್ ಉಸ್ತುವಾರಿ ಅಧಿಕಾರಿಗಳು ಮತ್ತು ಬಿಎಂಆರ್ಸಿಎಲ್ ವಿರುದ್ಧ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ), 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು), ಭಾರತೀಯ ದಂಡ ಸಂಹಿತೆಯ 304 (ಎ) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು), ಮತ್ತು 427 ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ನಮ್ಮ ಮೆಟ್ರೋದ ಪಿಲ್ಲರ್ ಕುಸಿತದ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸಲು ಬಿಎಂಆರ್ಸಿಎಲ್ ನಿಂದ ನಿಯೋಜಿಸಲ್ಪಟ್ಟ ಐಐಎಸ್ಸಿ ಬೆಂಗಳೂರಿನ ಪ್ರೊಫೆಸರ್ ಚಂದ್ರ ಕಿಶನ್, "ಅಸಮರ್ಪಕ ರಚನೆಗಳು" 18 ಮೀಟರ್ ಪಿಲ್ಲರ್ ಕುಸಿತಕ್ಕೆ ಕಾರಣವಾಯಿತು. ಹೀಗಾಗಿ ಹಸುಗೂಸು ಮತ್ತು ಮಗುವಿನ ತಾಯಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದರ ಜೊತೆಗೆ, ಐಐಟಿ ಹೈದರಾಬಾದ್ ಪ್ರಾಧ್ಯಾಪಕರಾದ ಕೆವಿಎಲ್ ಸುಬ್ರಮಣ್ಯಂ ಮತ್ತು ಎಸ್ ಸೂರ್ಯ ಪ್ರಕಾಶ್ ಅವರು ಪಿಲ್ಲರ್ನ "ಪೋಷಕ ರಚನೆಗಳ ಅಸಮರ್ಪಕ ವಿನ್ಯಾಸ" ಕುಸಿತಕ್ಕೆ ಕಾರಣವಾಗಿರಬಹುದು ಎಂದು ವರದಿ ಮಾಡಿದ್ದಾರೆ. IISc ಸಲ್ಲಿಸಿದ ವರದಿಯನ್ನು ಅನುಸರಿಸಿ, ಬಿಎಂಆರ್ಸಿಎಲ್ ಕಾಮಗಾರಿ ಸ್ಥಳದಲ್ಲಿ ಅವಘಡಗಳು ಆಗದಂತೆ ತಡೆಯಲು ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ವಹಿಸಲು ಯೋಜನೆ ಒಪ್ಪಂದದಲ್ಲಿ ಸುರಕ್ಷತೆ, ಆರೋಗ್ಯ ಹಾಗೂ ಪರಿಸರ ಕೈಪಿಡಿ ಜಾರಿ ಮಾಡಿದೆ. ಪ್ರತಿ ಗುತ್ತಿಗೆದಾರರ ಈ ಕೈಪಿಡಿ ಆಧಾರದಲ್ಲೇ ಕೆಲಸ ಮಾಡಬೇಕು ಎಂದು ತಿಳಿಸಿದೆ.
ಇನ್ನು ದುರಂತ ಅಪಘಾತದ ಕುರಿತು ನ್ಯಾಯಾಲಯವು ಸ್ವಯಂಪ್ರೇರಿತ ಪಿಐಎಲ್ಗೆ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬಿಎಂಆರ್ಸಿಎಲ್ಗೆ ಸೂಚಿಸಿದೆ.












Click it and Unblock the Notifications