Namma Metro: ಮೆಟ್ರೋ ಹಳಿಯಲ್ಲಿ ಬಿರುಕು, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ
ಮೆಟ್ರೋ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು, ಫೆಬ್ರವರಿ. 07: ಇತ್ತೀಚೆಗಷ್ಟೇ ಇಬ್ಬರನ್ನು ಬಲಿ ಪಡೆದಿರುವ ನಮ್ಮ ಮೆಟ್ರೋ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿಲ್ಲ. ಬಿರುಕು ಬಿಟ್ಟ ಹಳಿ ಬಗ್ಗೆ ಮಾಹಿತಿ ನೀಡದೆ ದುರಸ್ತಿ ಕಾರ್ಯ ಕೂಡ ಮಾಡಿ ಮುಗಿಸಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.
ಹೌದು, ಸಿಲಿಕಾನ್ ಸಿಟಿ ಜನರ ಜೀವನಾಡಿಯಂತಿರುವ ನಮ್ಮ ಮೆಟ್ರೋ ಪದೇ ಪದೇ ಬೇಡದ ವಿಷಯಗಳಿಗೆ ಸುದ್ದಿಯಾಗುತ್ತಿದೆ. ಮೆಟ್ರೋದ ನೇರಳೆ ಮಾರ್ಗದ ಮೆಟ್ರೋ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ.
ಮೆಜೆಸ್ಟಿಕ್ನಿಂದ ಕೆಂಗೇರಿ ಕಡೆಗೆ ಸಾಗುವ ನೇರಳೆ ಮಾರ್ಗದ ಮೈಸೂರು ರಸ್ತೆಯಲ್ಲಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ನಾಯಂಡಹಳ್ಳಿಯಿಂದ ಕೆಂಗೇರಿಗೆ ಹೋಗುವ ಮಾರ್ಗದ ಪಟ್ಟಣಗೆರೆ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ರೈಲು ಮಾರ್ಗಕ್ಕೆ ಹಳಿ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಶಂಕೆಗೆ ಕಾರಣವಾಗಿದೆ. ಮೆಟ್ರೋ ರೈಲು ಪ್ರಯಾಣದ ವೇಳೆಯಲ್ಲಿ ಕೇಳಿಬರುವ ಶಬ್ಧದಲ್ಲಿ ವ್ಯತ್ಯಾಸವಾಗಿರುವುದನ್ನು ಗಮನಿಸಿ ಲೋಕೋ ಪೈಲಟ್ ಮತ್ತು ಸಿಬ್ಬಂದಿ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸಾರ್ವಜನಿಕರ ಗಮನಕ್ಕೂ ತರದೇ, ತಾಂತ್ರಿಕ ತೊಂದರೆ ಎಂಬ ನೆಪವೊಡ್ಡಿ ಅಧಿಕಾರಿಗಳು ದುರಸ್ತಿ ಕಾರ್ಯ ಮಾಡಿದ್ದಾರೆ. ಇದೇ ಹಳಿಯ್ಲಲಿ ಮೆಟ್ರೋ ಓಡಾಡಿದ್ದರೇ ದೊಡ್ಡ ಅನಾಹುತವೇ ನಡೆದಿರುತ್ತಿತ್ತು. ಇದರಿಂದಾಗಿ ಇಡೀ ದಿನ ಮತ್ತೊಂದು ಟ್ರ್ಯಾಕ್ನಲ್ಲಿ ಮೆಟ್ರೋ ಓಡಾಟ ನಡೆಸಿದೆ. ಬಿರುಕು ಬಿಟ್ಟಿದ್ದ ಹಳಿ ಸರಿಪಡಿಸಿದ ನಂತರ ಎರಡು ಹಳಿಗಳಲ್ಲಿ ಎಂದಿನಂತೆ ಮೆಟ್ರೋ ಓಡಾಟ ಶುರುವಾಗಿದೆ.
ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಮೂರೇ ವರ್ಷದಲ್ಲಿ ಹಳಿಗಳಲ್ಲಿ ಬಿರುಕು ಬರುತ್ತದೆ ಎಂದರೇ ಇದು ಕಳಪೆ ಕಾಮಗಾರಿಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಹೊರ ವರ್ತುಲ ರಸ್ತೆಯ ಹೆಬ್ಬಾಳ ಮತ್ತು ಕೆಆರ್ ಪುರಂ ನಡುವಿನ ನಮ್ಮ ಮೆಟ್ರೋ ಕಾಮಗಾರಿ ವೇಳೆ ಪಿಲ್ಲರ್ಗೆ ಹಾಕಲಾಗಿದ್ದ ಕಬ್ಬಿಣದ ಸರಣುಗಳು ಬಿದ್ದು ಎರಡು ಜೀವಗಳು ಬಲಿಯಾಗಿದ್ದವು. ಜನವರಿ 10 ರಂದು ಎಚ್ಬಿಆರ್ ಲೇಔಟ್ನಲ್ಲಿ 18 ಮೀಟರ್ ಎತ್ತರದ ಮೆಟ್ರೋ ಪಿಲ್ಲರ್ ನಿರ್ಮಾಣಕ್ಕಾಗಿ ಹಾಕಿದ್ದ ಕಬ್ಬಿಣದ ರಾಡ್ಗಳು ಬಿದ್ದು ತಾಯಿ ಮತ್ತು ಮಗು ಸಾವನ್ನಪ್ಪಿದ್ದರು.
ಇಂತಹ ದುರಂತ ಘಟನೆಗಳಾದ ಮೇಲೆಯಾದರೂ ಬಿಎಂಆರ್ಸಿಎಲ್ ಎಚ್ಚೆತ್ತುಕೊಳ್ಳದೇ ಮತ್ತೆ ಮತ್ತೆ ಅನಾಹುತಗಳಿಗೆ ಆಹ್ವಾನ ನೀಡುತ್ತಿದೆಯಾ ಎಂಬ ಪ್ರಶ್ನೆ ಸಾರ್ವಜನಿಕರದ್ದು.












Click it and Unblock the Notifications