ಮಿಂತ್ರಾ ಸಿಇಒ ಅನಂತ್ 'ಮನೆಗಳ್ಳರ' ಪ್ರೇಮ ಕಥೆ
ಬೆಂಗಳೂರು, ಸೆ. 20: ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಕಂಪನಿ ಮಿಂತ್ರಾ.ಕಾಂನ ಸಿಇಒ ಅನಂತ್ ನಾರಾಯಣ್ ಅವರ ಮನೆ ಕಳ್ಳತನ ಪ್ರಕರಣಕ್ಕೆ ಕಬ್ಬನ್ ಪಾರ್ಕ್ ಪೊಲೀಸರು, ಮನೆಕೆಲಸದಾಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈಕೆ ತನ್ನ ಪ್ರೇಮಕಥೆಯನ್ನು ಹೇಳಿಕೊಂಡಿದ್ದಾಳೆ.
ಅನಂತ್ ಅವರ ಮನೆಯಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ವಜ್ರ ಹಾಗೂ ಚಿನ್ನಾಭರಣಗಳು ಕಳ್ಳತನವಾಗಿತ್ತು. ವಿಠಲ್ಮಲ್ಯ ರಸ್ತೆಯಲ್ಲಿ ವಾಸವಾಗಿರುವ ಅನಂತ್ ನಾರಾಯಣ್ ಅವರು ಕಾರ್ಯ ನಿಮಿತ್ತ ವಿದೇಶಕ್ಕೆ ಹೋಗಿದ್ದಾಗ ಮನೆಕೆಲಸದಾಕೆ ಈ ಕೃತ್ಯ ಎಸಗಿದ್ದಳು.

ವಿದೇಶದಿಂದ ಬಂದ ನಂತರ ವಿಷಯ ಗೊತ್ತಾಗಿ, ನಾರಾಯಣ್ ಅವರು ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಏಳು ವಜ್ರದ ನೆಕ್ಲೆಸ್ಗಳು, 24 ಜೊತೆ ಚಿನ್ನದ ಓಲೆಗಳು, 4 ವಜ್ರದ ಬ್ರಾಸ್ಲೈಟ್ಗಳು ಸೇರಿದಂತೆ ಸುಮಾರು ಒಂದು ಕೋಟಿಗೂ ಹೆಚ್ಚು ರೂ. ಕಳ್ಳತನವಾಗಿದೆ. ಆಗಸ್ಟ್ 30ರ ನಂತರ ನಾನು ಬೆಂಗಳೂರಿನಲ್ಲಿರಲಿಲ್ಲ. ಬಂದು ನೋಡಿದರೆ ಈ ಆಭರಣಗಳು ಮನೆಯಲಿಲ್ಲ ಎಂದು ದೂರಿನಲ್ಲಿ ಹೇಳಿದ್ದರು.
ಮನೆಗಳ್ಳರು: ನಿತ್ಯ ಮನೆಕೆಲಸಕ್ಕೆ ಬರುತ್ತಿದ್ದ ಮನೆಯ ಕೆಲಸದಾಕೆ ಭವಾನಿ ಮತ್ತು ಕಾರು ಚಾಲಕನಾಗಿದ್ದ ಸುರೇಶ್ ಅವರು ತಮ್ಮ ಸಹಚರರೊಡನೆ ಕೂಡಿ ಈ ಕಳ್ಳತನ ಮಾಡಿರುವುದು ಪೊಲೀಸರಿಗೆ ಸುಲಭಕ್ಕೆ ಗೊತ್ತಾಯಿತು.
ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡ ಭವಾನಿ, 'ನಾರಾಯಣ್ ಅವರ ಪತ್ನಿ ಪರ್ಸ್ ನಿಂದ ಲಾಕರ್ ಕೀ ಕದ್ದೆ. ನಾನು ಹಾಗೂ ಸುರೇಶ್ ಇಬ್ಬರು ಪ್ರೀತಿಸುತ್ತಿದ್ದೇವೆ. ಚಿನ್ನಾಭರಣ ಕದ್ದು ಮಾರಿ, ಹಣ ಸಂಪಾದಿಸುವ ಉದ್ದೇಶ ಹೊಂದಿದ್ದೆವು. ಮದುವೆಯಾದ ಬಳಿಕ ಐಷಾರಾಮಿ ಜೀವನ ಸಾಗಿಸುವ ಆಲೋಚನೆ ನಮ್ಮದಾಗಿತ್ತು. ಸುರೇಶ್ ಇದೇ ಕಾರಣದಿಂದ ಹೊರಗಡೆ ಹೋಗಿದ್ದಾನೆ' ಎಂದು ಹೇಳಿದ್ದಾಳೆ. ಕಾರು ಚಾಲಕ ಸುರೇಶ್ ಗಾಗಿ ತಮಿಳುನಾಡಿನಲ್ಲಿ ಹುಡುಕಾಟ ಜಾರಿಯಲ್ಲಿದೆ.












Click it and Unblock the Notifications