IMA ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಖಾನ್ ನಾಪತ್ತೆ; 400 ಕೋಟಿ ಕಥೆ ಏನಂತೆ?
ಬೆಂಗಳೂರು, ಜೂನ್ 10: ಹೆಸರಾಂತ ಆಭರಣ ಮಳಿಗೆ ಮಾಲೀಕ ಮೊಹ್ಮದ್ ಮನ್ಸೂರ್ ಖಾನ್ ನಾಪತ್ತೆಯಾಗಿದ್ದು, ಸೋಮವಾರ ಮಳಿಗೆಯ ಎರಡು ಶಾಖೆಗಳಿರುವ ಜಯನಗರ ಮತ್ತು ಶಿವಾಜಿನಗರದಲ್ಲಿ ಹೂಡಿಕೆ ಮಾಡಿರುವವರು ಆತಂಕ ಎದುರಿಸುತ್ತಿದ್ದಾರೆ. ಮನ್ಸೂರ್ ಖಾನ್ ನದು ಎನ್ನಲಾದ ಆಡಿಯೋವೊಂದರಲ್ಲಿ ಆತ ತನ್ನ ಸ್ಥಿತಿಯ ಬಗ್ಗೆ ಮಾತನಾಡಿದ್ದಾನೆ.
ಈ ಆಡಿಯೋ ಕೇಳುವ ಹೊತ್ತಿಗೆ ನಾನು ಈ ಜಗತ್ತಿನಲ್ಲಿ ಇರುವುದಿಲ್ಲ ಎಂದಿರುವ ಖಾನ್, ಶಿವಾಜಿನಗರದ ಸ್ಥಳೀಯ ಶಾಸಕರು ನಾನೂರು ಕೋಟಿ ರುಪಾಯಿ ನನಗೆ ನೀಡಬೇಕು. ಜತೆಗೆ ಮೂವತ್ತಾಮೂರು ಸಾವಿರ ಕ್ಯಾರೆಟ್ ವಜ್ರ, ಚಿನ್ನಾಭರಣ ಇದೆ. ಅವುಗಳನ್ನೆಲ್ಲ ಮಾರಿ, ಹೂಡಿಕೆದಾರರ ಹಣವನ್ನು ಹಿಂತಿರುಗಿಸುವಂತೆ ಹೇಳಿದ್ದಾನೆ.
ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದುದರಿಂದ ಬೆಂಗಳೂರಿನ ಬಳಿಯ ಹಳ್ಳಿಯೊಂದರಲ್ಲಿ ಇರಿಸಬೇಕಾಯಿತು. ನಾನು ಹಣವನ್ನೂ ಕೊಟ್ಟು, ರೌಡಿಗಳಿಂದ ಜೀವ ಬೆದರಿಕೆಯನ್ನೂ ಅನುಭವಿಸಬೇಕಾಯಿತು. ಬಿಡಿಎನ ಕುಮಾರ್ ಎಂಬಾತನಿಗೆ ಐದು ಕೋಟಿ ರುಪಾಯಿ ನೀಡಿದ್ದೇನೆ ಎಂದು ಖಾನ್ ಆಡಿಯೋದಲ್ಲಿ ತಿಳಿಸಿದ್ದಾನೆ.

ಪ್ರಮುಖ ರಾಜಕಾರಣಿಯೊಬ್ಬರ ವಿರುದ್ಧ ಗಂಭೀರವಾದ ಆರೋಪ ಮಾಡಿರುವ ಅವರು, ಹಲವು ರಾಜಕೀಯ ಮುಖಂಡರು, ಸರಕಾರ ಅಧಿಕಾರಿಗಳು ಹೀಗೆ ವಿವಿಧ ಸ್ತರದಲ್ಲಿ ಇರುವವರು ಯಾರೂ ಸರಿಯಿಲ್ಲ ಎಂದು ಹೇಳಿದ್ದಾರೆ. ಇನ್ನು ಹೂಡಿಕೆದಾರರು ದೂರು ನೀಡಿದರೆ ತನಿಖೆ ನಡೆಸುವುದಾಗಿ ಪೂರ್ವವಿಭಾಗದ ಡಿಸಿಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಎರಡು-ಮೂರು ದಿನದಿಂದ ಮನ್ಸೂರ್ ಖಾನ್ ಮೊಬೈಲ್ ಫೋನ್ ಸ್ವಿಚ್ಛ್ ಆಫ್ ಆಗಿದ್ದು, ಆತ ಆಡಿಯೋದಲ್ಲಿ ಹೇಳಿರುವಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ರಾಜ್ಯ- ದೇಶ ಬಿಟ್ಟೇ ಪರಾರಿ ಆಗಿದ್ದಾನೋ ಎಂಬುದು ತಿಳಿದುಬರಬೇಕಿದೆ. ಸದ್ಯಕ್ಕೆ ದೇಶದ ಎಲ್ಲ ಪ್ರಮುಖ ಬಂದರು, ಏರ್ ಪೋರ್ಟ್ ಗಳಲ್ಲಿ ಲುಕ್ ಔಟ್ ನೋಟಿಸ್ ನೀಡಲಾಗಿದೆ.
ಈ ಮಧ್ಯೆ, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಲಂಚ ಕೊಟ್ಟು ಸಾಕಾಗಿದೆ ಎಂದು ಆಡಿಯೋದಲ್ಲಿ ಅಲವತ್ತುಕೊಂಡಿರುವ ಮನ್ಸೂರ್ ಖಾನ್, ನನ್ನ ಆಸ್ತಿ ಮಾರಿ, ಹೂಡಿಕೆದಾರರ ಹಣವನ್ನು ಹಿಂತಿರುಗಿಸುವಂತೆ ಹೇಳಿದ್ದಾನೆ. ಪೊಲೀಸರು ಆತನ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.












Click it and Unblock the Notifications