ಕೆ ಆರ್ ಮಾರುಕಟ್ಟೆ ಸ್ಥಳಾಂತರಕ್ಕೆ ಸಂಸದ ತೇಜಸ್ವೀ ಸೂರ್ಯ ಆಗ್ರಹ
ಬೆಂಗಳೂರು, ಮಾರ್ಚ್ 27: ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಇಂದು ನಗರದ ಕೆ ಆರ್ ಮಾರುಕಟ್ಟೆ ಗೆ ಭೇಟಿ ನೀಡಿ ಕರೋನಾ ವೈರಸ್ ಸಂಬಂಧಿಸಿದಂತೆ ಮಾರುಕಟ್ಟೆಯಲ್ಲಿ ಕೈಗೊಂಡಿರುವ ಮುಂಜಾಗೃತಾ ಕ್ರಮಗಳನ್ನು ಪರಿಶೀಲಿಸಿದರು.
ಪ್ರತಿ ನಿತ್ಯ ಈ ಮಾರುಕಟ್ಟೆಗೆ ಸಾವಿರಾರು ಜನರು ಆಗಮಿಸುವುದರಿಂದ ನೂಕುನುಗ್ಗಲು ಉಂಟಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುವ ದೃಷ್ಟಿಯಿಂದ ಸದರಿ ಮರುಕಟ್ಟೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ ಕಾರ್ಯನಿರ್ವಹಿಸಲು ಆದೇಶಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ರೊಂದಿಗೆ ಪರಿಶೀಲನೆ ನಡೆಸಿದ ಸಂಸದರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಮಾರುಕಟ್ಟೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ತೆಗೆದುಕೊಂಡಿರುವ ಕ್ರಮಗಳು ಪರಿಣಾಮಕಾರಿಯಾಗಿ ಇಲ್ಲದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದೇ ಕಾರಣಕ್ಕೋಸ್ಕರ ಮೂರು ಭಾಗಗಳಾಗಿ ವಿಂಗಡಿಸಿ ಎಂದು ಸಲಹೆ ನೀಡಿದ್ದಾರೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ (ಬೆಳಿಗ್ಗೆ 5 ರಿಂದ 10 ರವರೆಗೆ) ಜೆಪಿ ನಗರದ ಸಾರಕ್ಕಿ ಮಾರುಕಟ್ಟೆಯನ್ನು ಜರಗನಹಳ್ಳಿ ಮೈದಾನಕ್ಕೆ ಮತ್ತು ಮೈಸೂರು ರಸ್ತೆಯ ಫ್ಲೈ ಓವರ್ ಕೆಳಗಡೆ ಮಸೀದಿಯ ಹತ್ತಿರ ಸ್ಥಳಾಂತರಗೊಳಿಸಲು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ 'ಬೆಂಗಳೂರು ಸೌತ್ ಕರೋನಾ ವೈರಸ್ ಟಾಸ್ಕ್ ಫೋರ್ಸ್' ನ ಕಾರ್ಯ ವೈಖರಿಯ ಬಗ್ಗೆ ತಿಳಿಸಿರುವ ತೇಜಸ್ವೀ ಸೂರ್ಯ ಅವರು, ಸಹಾಯವಾಣಿ 99464 99464 ಗೆ ಕರೆ ಮಾಡಿ ಹಿರಿಯ ನಾಗರಿಕರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಆಸ್ಪತ್ರೆಗೆ ಸಂಬಂಧಿಸಿದಂತೆ, ಗರ್ಭಿಣಿಯರಿಗೆ ತುರ್ತು ಸೇವೆ ಒದಗಿಸಲು, ದಿನನಿತ್ಯದ ಬಳಿಕ ಸಾಮಾನುಗಳ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದ್ದರೆ ಸಹಾಯವಾಣಿ ಯನ್ನು ಸಂಪರ್ಕಿಸಿ ಸಹಾಯ ಪಡೆಯುವಂತೆ ಜನತೆಯಲ್ಲಿ ಮನವಿ ಮಾಡಿದರು.












Click it and Unblock the Notifications