ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಂತೆ ಸಿಎಂಗೆ ರಾಜೀವ್ ಚಂದ್ರಶೇಖರ್ ಮನವಿ
ಬೆಂಗಳೂರು, ಆಗಸ್ಟ್ 21: ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಪತ್ರ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬುದು ಇತ್ತೀಚಿಗಿನ ಪತ್ರಿಕಾ ವರದಿಗಳ ಮೇಲೆ ಕಣ್ಣಾಡಿಸಿದರೆ ತಿಳಿಯುತ್ತದೆ, ಮುಖ್ಯಮಂತ್ರಿಗಳು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮುಜಾಫರ್ ನಗರ, ಉತ್ತರ ಪ್ರದೇಶದ ಡೋರಿಯಾದ ನಿರಾಶ್ರಿತರ ಶಿಬಿರಗಳಲ್ಲಿ ಮಕ್ಕಳ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳು ದೇಶದೆಲ್ಲೆಡೆ ಆತಂಕ ಸೃಷ್ಠಿಸಿದೆ. ಕೇಂದ್ರವು ಈಗಾಗಲೇ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದ್ದು, ನಿರಾಶ್ರಿತರ ಶಿಬಿರ ಹಾಗೂ ಮಕ್ಕಳ ಕೇಂದ್ರಗಳ ತಪಾಸಣೆ ನಡೆಸಿ ವರದಿ ಕೊಡುವಂತೆ ಹೇಳಿರುವುದನ್ನು ಅವರು ನೆನಪಿಸಿದ್ದಾರೆ.

ರಾಜ್ಯದಲ್ಲಿನ ಎಲ್ಲಾ ಶಿಶುಪಾಲನಾ ಸಂಸ್ಥೆಗಳು, ನಿರಾಶ್ರಿತರ ಶಿಬಿರಗಳು, ಇನ್ನಿತರೆ ಸೇವಾ ಸಂಸ್ಥೆಗಳ ತಪಾಸಣೆ ನಡೆಸಿ ಎಲ್ಲವೂ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿವೆ, ಎಲ್ಲ ಸಂಸ್ಥೆಗಳು ಜೆಜೆ ಆಕ್ಟ್ ಅಡಿಯಲ್ಲಿ ನೊಂದಣಿ ಆಗಿವೆಯೇ ಎಂದು ರಾಜ್ಯ ಸರ್ಕಾರವು ಪರಿಶೀಲನೆ ನಡೆಸಬೇಕು ಎಂದು ರಾಜೀವ್ ಚಂದ್ರಶೇಖರ್ ಅವರು ಮನವಿ ಸಲ್ಲಿಸಿದ್ದಾರೆ.












Click it and Unblock the Notifications