ಶ್ರೀರಾಮುಲಿಗೆ ಚೆಕ್ ಬೌನ್ಸ್ ಪ್ರಕರಣದಿಂದ ಮುಕ್ತಿ
ಬೆಂಗಳೂರು, ನವೆಂಬರ್ 09: ಬಳ್ಳಾರಿಯ ಸಂಸದ ಬಿ ಶ್ರೀರಾಮುಲು ಅವರಿಗೆ ಚೆಕ್ ಬೌನ್ಸ್ ಪ್ರಕರಣದಿಂದ ಮುಕ್ತಿ ಸಿಕ್ಕಿದೆ. 13ನೇ ಎಸಿಎಂಎಂ ನ್ಯಾಯಾಲಯವು ಈ ಪ್ರಕರಣದಿಂದ ಶ್ರೀರಾಮುಲು ಅವರನ್ನು ಖುಲಾಸೆಗೊಳಿಸಿದೆ.
2013ರಲ್ಲಿ ಮೈಸೂರಿನ ಎಲ್.ಸೋಮಣ್ಣ ಎಂಬುವರು ಶ್ರೀರಾಮುಲು ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ, ಆರೋಪ ಸಾಬೀತುಪಡಿಸಲು ಸರಿಯಾದ ಸಾಕ್ಷಿ ಆಧಾರಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ, ಪ್ರಕರಣದಿಂದ ಶ್ರೀರಾಮುಲು ಅವರನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ.

ಏನಿದು ಪ್ರಕರಣ: 'ಬಿಎಸ್ಆರ್ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಶ್ರೀರಾಮುಲು ಅವರು ನನ್ನಿಂದ 2.96 ಕೋಟಿ ರು ಸಾಲ ಪಡೆದಿದ್ದರು. ಸಾಲ ತೀರಿಸಲು ಚೆಕ್ ನೀಡಿದ್ದರು. ಆದರೆ, ಬ್ಯಾಂಕಿನಲ್ಲಿ ಚೆಕ್ ಕ್ಲಿಯರ್ ಆಗದೆ ಚೆಕ್ ಬೌನ್ಸ್ ಆಗಿತ್ತು' ಎಂದು ಮೈಸೂರು ಎಲ್ ಸೋಮಣ್ಣ ಆರೋಪ ಹೊರೆಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ಬಳಿಕ ಈಗ ತೀರ್ಪು ಹೊರ ಬಂದಿದ್ದು, ಶ್ರೀರಾಮುಲು ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ಇನ್ನೊಂದು ಪ್ರಕರಣದಲ್ಲಿ ಶ್ರೀರಾಮುಲು: ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ, ಬಳ್ಳಾರಿ ಹೊರವಲಯದ ಬೆಳಗಲಿ ಪ್ರದೇಶದಲ್ಲಿ 27.25 ಎಕರೆ ಭೂಮಿ ಖರೀದಿಸಿದ್ದರು. ತಮ್ಮ ಪ್ರಭಾವ ಮತ್ತು ನಕಲಿ ದಾಖಲೆ ಉಪಯೋಗಿಸಿಕೊಂಡು, ರಾಮುಲು ಭೂಮಿ ಖರೀದಿಸಿದ್ದಾರೆ ಎಂಬುದು ಆರೋಪಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications