ಪುಟ್ಟಮಗುವನ್ನು ಮುದ್ದೆಕೋಲಿನಿಂದ ಚಚ್ಚಿ ಕೊಂದ ಪಾಪಿ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪ್ರಹಾಲಿಕಾ (5)ಕೊಲೆಯಾದ ಬಾಲಕಿ. ಕೊಲೆ ಮಾಡಿದ ಮಲತಂದೆ ಭಾಸ್ಕರ್ ನಾಯ್ಡು (30) ಎಂಬಾತನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅರುಣಾಬಾಯಿ ಮೊದಲು ರಾಮುಲು ನಾಯ್ಡು ಎಂಬುವರನ್ನು ವಿವಾಹವಾಗಿದ್ದರು. ಈ ದಂಪತಿಗೆ ರಾಗಿಣಿ ಮತ್ತು ಪ್ರವಳಿಕಾ ಎಂಬ ಇಬ್ಬರು ಮಕ್ಕಳಿದ್ದರು. ರಾಮುಲು ಅವರ ಪತಿ ಮೂರು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಬಳಿಕ ಅರುಣಾ ದೂರದ ಸಂಬಂಧಿ ಭಾಸ್ಕರ್ ಪರಿಚಯವಾಗಿ ಪತಿ ಪತ್ನಿಯಂತೆ ಬೆಂಗಳೂರಿನಲ್ಲಿ ವಾಸವಿದ್ದರು.
ಮಕ್ಕಳನ್ನು ಅಂಧ್ರ ಪ್ರದೇಶದಲ್ಲಿರುವ ತಾಯಿ ಮನೆಯಲ್ಲಿ ಬಿಟ್ಟು ಬಂದಿದ್ದ ಅರುಣಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು ಭಾಸ್ಕರ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.
ನಾವು ಬೆಂಗಳೂರಿನಲ್ಲಿ ತಾಯಿಯ ಜೊತೆ ಇರುತ್ತೇವೆ. ಅಲ್ಲೇ ಓದುತ್ತೇವೆ ಎಂದು ಹಠ ಹಿಡಿಯುತ್ತಿದ್ದ ಮೊಮ್ಮಕ್ಕಳನ್ನು 15 ದಿನದ ಹಿಂದೆಯಷ್ಟೇ ಅಜ್ಜಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಈ ಮಕ್ಕಳ ಬಂದ ಬಳಿಕ ಅವರ ಮೇಲೆ ಇಲ್ಲಸಲ್ಲದ ಕ್ಯಾತೆ ತೆಗೆದು ಅವರ ಮೇಲೆ ಭಾಸ್ಕರ್ ಥಳಿಸುತ್ತಿದ್ದ. ಯಾರಿಗೋ ಜನಿಸಿದ ಮಕ್ಕಳನ್ನು ನಾನೇಕೆ ಓದಿಸಬೇಕು ಎಂದು ಹೇಳಿ ಪತ್ನಿಯ ಜೊತೆ ಜಗಳವಾಡುತ್ತಿದ್ದ.
ಆರೋಪಿ ಶನಿವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ರಾಗಿಣಿ ಜೊತೆ ಮನೆಯಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಸ್ನಾನದ ಕೊಠಡಿಯಲ್ಲಿದ್ದ ಸೀಮೆಎಣ್ಣೆಯನ್ನು ಪ್ರವಳಿಕಾ ಚೆಲ್ಲಿದ್ದಾಳೆ. ಇದನ್ನೇ ನೆಪವಾಗಿಸಿದ ಭಾಸ್ಕರ್ ಪ್ರವಳಿಕಾ ತಲೆಗೆ ಮುದ್ದೆ ಮಾಡುವ ಕೋಲಿನಿಂದ ಹೊಡೆದಿದ್ದಾನೆ.
ಕೆಲಸ ಮುಗಿಸಿ ರಾತ್ರಿ 9 ಗಂಟೆ ಸುಮಾರಿಗೆ ಅರುಣಾ ಬಂದಿದ್ದಾರೆ. ರಕ್ತದ ಮಡುವಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರವಳಿಕಾ ಏನಾಯಿತು ಎಂದು ಪತಿಯನ್ನು ವಿಚಾರಿಸಿದಾಗ ''ಅಕ್ಕ ತಂಗಿ ಜಗಳವಾಡುತ್ತಿದ್ದರು. ಈ ವೇಳೆ ರಾಗಿಣಿ ಈಕೆಯನ್ನು ಕೆಳಗೆ ತಳ್ಳಿದ್ದಾಳೆ'' ಎಂದು ಹೇಳಿದ್ದಾನೆ.
ಕೂಡಲೇ ಅವರು ಸಮೀಪದ ಚೇತನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರ ಸೂಚನೆ ಬಳಿಕ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಈ ಸಂದರ್ಭಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರವಳಿಕಾ ಮೇಲೆ ಗಾಯದ ಗುರುತಾಗಿರುವ ಹಿನ್ನಲೆಯಲ್ಲಿ ಪೊಲೀಸರಿಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಪ್ರಕರಣ ಪ್ರಕರಣ ಬೆಳಕಿಗೆ ಬಂದಿದೆ.