ಶುಕ್ರವಾರವೂ ಮೊಹಮ್ಮದ್ ನಲಪಾಡ್ಗೆ ಜಾಮೀನು ಸಿಕ್ಕಿಲ್ಲ
ಬೆಂಗಳೂರು, ಫೆಬ್ರವರಿ 23 : ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ಫೆ.24ಕ್ಕೆ ಮುಂದೂಡಿದೆ. ಆದ್ದರಿಂದ, ಮೊಹಮ್ಮದ್ ನಲಪಾಡ್ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ.
ಬೆಂಗಳೂರಿನ 63ನೇ ಸೆಷನ್ಸ್ ಕೋರ್ಟ್ನಲ್ಲಿ ಶುಕ್ರವಾರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು.
ಮೊಹಮ್ಮದ್ ನಲಪಾಡ್ ಪರ ವಕೀಲ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದರು. ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ನ್ಯಾಯಾಲಯದಲ್ಲಿ ನಡೆದದ್ದೇನು?
* ಮೊಹಮ್ಮದ್ ನಲಪಾಡ್ ಪರ ವಾದ ಮಂಡನೆ ಮಾಡಿದ ಟಾಮಿ ಸೆಬಾಸ್ಟಿಯನ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ಹಿಂದೆ ಬೇರೆಯವರ ಕೈವಾಡವಿದೆ, ವಿಶೇಷ ಅಭಿಯೋಜಕರಾಗಿ ಶ್ಯಾಮ್ ಸುಂದರ್ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
* ಇದೊಂದು ಸೂಕ್ಷ್ಮ ಪ್ರಕರಣ ಸರ್ಕಾರಿ ಅಭಿಯೋಜಕರು ವಾದ ಮಂಡನೆ ಮಾಡಬೇಕು. ವಿಶೇಷ ಸರ್ಕಾರಿ ಅಭಿಯೋಜಕರ ವಾದ ಮಂಡನೆ ಅಗತ್ಯವಿಲ್ಲ ಎಂದು ವಾದಿಸಿದರು.
* ನೂತನ ಎಸ್ಪಿಪಿ ಶ್ಯಾಮ್ ಸುಂದರ್ ಅವರು ಕೇಸ್ ಡೈರಿಯ ಜೊತೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಹೆಚ್ಚಿನ ಆಕ್ಷೇಪಣೆ ಸಲ್ಲಿಕೆ ಮಾಡಲು ಕಾಲಾವಕಾಶ ನೀಡುವಂತೆ ಕೋರಿದರು.
* ಅಲಂಪಾಷ ಎನ್ನುವವರು ಅರ್ಜಿ ಸಲ್ಲಿಸಿ ಪ್ರತಿವಾದಿಯನ್ನಾಗಿ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆದರೆ, ಸೆಬಾಸ್ಟಿಯನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದರು.
ಮೊಹಮ್ಮದ್ ನಲಪಾಡ್ ಪರ ವಕೀಲರ ವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿತು. ಫೆ.26ರಂದು ಹೆಚ್ಚಿನ ಆಕ್ಷೇಪಣೆಯನ್ನು ಸಲ್ಲಿಸಬೇಕು ಎಂದು ಕೋರ್ಟ್ ಸೂಚನೆ ನೀಡಿತು.
ಫೆ.24ರ ಶನಿವಾರ ಅಲಂ ಪಾಷ ಅವರನ್ನು ಪ್ರತಿವಾದಿಯನ್ನಾಗಿ ಮಾಡಬಹುದೇ? ಎಂಬ ಬಗ್ಗೆ ನ್ಯಾಯಾಲಯ ಆದೇಶ ನೀಡಲಿದೆ. ಫೆ.26ರ ಸೋಮವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.
ಮೊಹಮ್ಮದ್ ನಲಪಾಡ್ ಮತ್ತು ಇತರ ಆರೋಪಿಗಳನ್ನು ಕೋರ್ಟ್ ಮಾರ್ಚ್ 7ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.












Click it and Unblock the Notifications