ಬೆಂಬಲ ಬದಲಿಸಿದ ಕೊಳ್ಳೆಗಾಲ ಶಾಸಕ ಎನ್.ಮಹೇಶ್
ಬೆಂಗಳೂರು, ಫೆಬ್ರವರಿ 08: ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಬದಲಾದ ತಮ್ಮ ಬೆಂಬಲದ ನಿರ್ಣಯವನ್ನು ಬಹಿರಂಗವಾಗಿ ಘೋಷಿಸಿದ್ದಾರೆ.
ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಹಾಗೂ ಬೆಂಬಲ ಅವಶ್ಯಕವಿದ್ದ ಸಂದರ್ಭದಲ್ಲಿ ಸರ್ಕಾರಕ್ಕೆ ಕೈಕೊಟ್ಟಿದ್ದ ಎನ್.ಮಹೇಶ್ ಈಗ ತಮ್ಮ ಬೆಂಬಲವನ್ನು ಬಹಿರಂಗವಾಗಿ ಘೊಷಿಸಿದ್ದಾರೆ.
ಬಿಎಸ್ಪಿ ಪಕ್ಷದಿಂದ ಉಚ್ಛಾಟಿತವಾಗಿರುವ ಮಹೇಶ್, 'ನಾನು ಈಗ ಸ್ವತಂತ್ರ್ಯನಾಗಿದ್ದು, ನನ್ನ ಬೆಂಬಲ ಬಿಜೆಪಿ ಸರ್ಕಾರಕ್ಕೆ' ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಡಿಯೂರಪ್ಪ ಅವರು ತಮ್ಮ ಸರ್ಕಾರಕ್ಕೆ ಬೆಂಬಲ ಕೇಳಿದ್ದರು. ಈಗ ನನ್ನ ನಿರ್ಧಾರ ಸ್ಪಷ್ಟವಿದೆ, ನನ್ನ ಬೆಂಬಲ ಬಿಜೆಪಿ ಸರ್ಕಾರಕ್ಕೆ' ಎಂದು ಘೋಷಿಸಿದ್ದಾರೆ.
ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಎಸ್ಪಿ ಶಾಸಕರಾಗಿದ್ದ ಎನ್.ಮಹೇಶ್ ಅವರು ಸದನಕ್ಕೆ ಗೈರಾಗಿ ಚುನಾವಣೆಯಲ್ಲಿ ಬೆಂಬಲ ನೀಡಿದ್ದ ಜೆಡಿಎಸ್ ಪಕ್ಷಕ್ಕೆ ಕೈಕೊಟ್ಟಿದ್ದರು. ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಆಗ ಹಿಂಬಾಗಿಲಿನಿಂದ ನೀಡಿದ್ದ ಬೆಂಬಲವನ್ನು ಈಗ ಅಧಿಕೃತಗೊಳಿಸಿದ್ದಾರೆ.
'ನಿಮ್ಮ ಕಷ್ಟಕ್ಕೆ ನನ್ನನ್ನು ಬಳಸಿಕೊಳ್ಳಿ, ಹಾಗೆಯೇ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಿ ಎಂದು ಯಡಿಯೂರಪ್ಪ ಬಳಿ ಕೇಳಿದ್ದೇನೆ, ನನ್ನ ಕ್ಷೇತ್ರಕ್ಕೆ ಬಹು ಕಾಲದಿಂದಲೂ ಅನ್ಯಾಯವಾಗಿದೆ, ಸಿಎಂ ನನಗೆ ಯಾವುದೇ ಭರವಸೆ ನೀಡಿಲ್ಲ ಆದರೆ ಬೇರೆಯರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ' ಎಂದು ಮಹೇಶ್ ಹೇಳಿದರು.
ಸಿದ್ದರಾಮಯ್ಯ ಬಗ್ಗೆಯೂ ಮಾತನಾಡಿದ ಎನ್.ಮಹೇಶ್, 'ಗೆದ್ದವರನ್ನು ಅನರ್ಹರು ಎನ್ನುವ ಸಿದ್ದರಾಮಯ್ಯ ಮಾತು ಸರಿಯಲ್ಲ, ಚುನಾವಣೆಗಳನ್ನು ಹೇಗೆ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅನರ್ಹರನ್ನು ಚುನಾವಣೆಗೆ ಸ್ಪರ್ಧಿಸಿ ಅರ್ಹರಾಗಿ ಎಂದು ಸುಪ್ರೀಂ ಹೇಳಿದೆ, ಅಂತೆಯೇ ಅವರು ಸ್ಪರ್ಧಿಸಿ ಅರ್ಹರಾಗಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.