ಸಚಿವ ಯು.ಟಿ.ಖಾದರ್ ಮಾನವೀಯತೆಗೆ ಸಲಾಂ
ಬೆಂಗಳೂರು, ನ.6 : ಆಟೋ ಪಲ್ಟಿಯಾಗಿ ಗಾಯಗೊಂಡಿದ್ದ ಚಾಲಕನನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಮ್ಮ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಗಾಯಗೊಂಡ ಚಾಲಕ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬುಧವಾರ ರಾತ್ರಿ ಸಚಿವ ಯು.ಟಿ.ಖಾದರ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮರಳುತ್ತಿದ್ದರು. ಈ ಸಮಯದಲ್ಲಿ ಯಲಹಂಕ ಸಮೀಪ ಸಂಚಾರ ದಟ್ಟಣೆ ಉಂಟಾಗಿತ್ತು. ಏಕೆ ಎಂದು ವಿಚಾರಿಸಿದಾಗ ಆಟೋ ಪಲ್ಪಿಯಾಗಿ ಚಾಲಕ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ. [ಖಾದರ್ ಉಳಿದವರಿಗೆ ಮಾದರಿಯಾಗಲಿ]

ತಕ್ಷಣ ಸ್ಥಳಕ್ಕೆ ಧಾವಿಸಿದ ಸಚಿವರು ಆಟೋ ಚಾಲಕನಾದ ಕಾಡುಗೊಂಡನಹಳ್ಳಿ ನಿವಾಸಿ ಸ್ಟಾಲಿನ್ ಅವರನ್ನು ತಮ್ಮ ಕಾರಿನಲ್ಲಿಯೇ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿ, ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಿದರು. ಆಟೋ ಚಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಆಟೋದಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದರು : ಸಚಿವ ಯು.ಟಿ.ಖಾದರ್ ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ದಂಪತಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿ, ಅವರು ಆಟೋದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು.
ಬೆಂಗಳೂರಿನ ಮೇಕ್ರಿ ಸರ್ಕಲ್ ವಾಹನವೊಂದು ಡಿಕ್ಕಿ ಹೊಡೆದು ದಂಪತಿಗಳು ಗಾಯಗೊಂಡಿದ್ದರು. ಮಾರ್ಗದಲ್ಲಿ ಸಾಗುತ್ತಿದ್ದ ಸಚಿವ ಖಾದರ್, ತಮ್ಮ ಕಾರಿನಲ್ಲಿ ಇಬ್ಬರನ್ನು ಆಸ್ಪತ್ರೆಗೆ ಕಳುಹಿಸಿ, ಅವರು ಆಟೋ ಏರಿ ಕಾರ್ಯಕ್ರಮಕ್ಕೆ ಹೋಗಿದ್ದರು. ಸಚಿವರ ಮಾನವೀಯತೆಗೆ ನಮ್ಮ ಸಲಾಂ.












Click it and Unblock the Notifications