ರಾಜೀನಾಮೆ ವದಂತಿ ತಳ್ಳಿಹಾಕಿದ ರಮೇಶ್ ಜಾರಕಿಹೊಳಿ
ಬೆಂಗಳೂರು, ನವೆಂಬರ್ 19: ಕಳೆದ ನಾಲ್ಕು ಸಂಪುಟ ಸಭೆಗೆ ಗೈರು ಹಾಜರಾಗಿದ್ದ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರು, ಇಂದು ಸಚಿವ ಸಂಪುಟಗೆ ಹಾಜರಾಗಿದ್ದರು. ಆದರೆ, ಸಭೆ ಮುಕ್ತಾಯಕ್ಕೂ ಮುನ್ನವೇ ಹೊರ ಬರುತ್ತಿದ್ದಂತೆ ಟಿವಿ ಮಾಧ್ಯಮಗಳಲ್ಲಿ. ಸಚಿವ ರಮೇಶ್ ಅವರು ರಾಜೀನಾಮೆ ನೀಡಿದ್ದಾರೆ, ಬಿಜೆಪಿಯಿಂದ ಆಹ್ವಾನ ಬಂದಿದೆ ಎಂಬ ಬ್ರೇಕಿಂಗ್ ನ್ಯೂಸ್ ಹರಿದಾಡತೊಡಗಿತು. ಆದರೆ, ಇದೆಲ್ಲವನ್ನು ರಮೇಶ್ ಅವರು ತಳ್ಳಿ ಹಾಕಿದ್ದಾರೆ.
'ನಾನ್ಯಾಕೆ ರಾಜೀನಾಮೆ ನೀಡಲಿ, ಕಬ್ಬು ಬೆಳೆಗಾರರ ಸಮಸ್ಯೆ ಕುರಿತಂತೆ ಸರ್ಕಾರ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ನಾನು ಬದ್ಧನಾಗಿದ್ದೇನೆ' ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಅವರ ಮದುವೆಗೆ ರಮೇಶ್ ಜಾರಕಿಹೊಳಿ ಹೋಗಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಜತೆ ಓಡಾಡಿಕೊಂಡು, ಮಾತುಕತೆ ನಡೆಸುತ್ತಿದ್ದ ಚಿತ್ರ, ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿವೆ.

ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ರಮೇಶ್ ಅವರಿಗೆ ಆಫರ್ ನೀಡಿದ್ದು, ನವೆಂಬರ್ 20ರೊಳಗೆ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ, ಇದೆಲ್ಲವನ್ನು ರಮೇಶ್ ಅಲ್ಲಗೆಳೆದಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಕಾರ್ಯಕ್ರಮಗಳಿಗೆ ಗೈರು, ಜಿಲ್ಲಾಮಟ್ಟದ ಸಭೆ, ಕ್ಯಾಬಿನೆಟ್ ಸಭೆ, ರೈತರಿಗೆ ಬೆಂಬಲ ಬೆಲೆ , ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಮೊತ್ತ ಪಾವತಿ, ಬರಪೀಡಿತ ಪ್ರದೇಶಕ್ಕೆ ಅನುದಾನ ಒದಗಿಸದಿರುವುದು ಇವೆಲ್ಲವು ರಮೇಶ್ ಅವರು ಕಾಂಗ್ರೆಸ್ ತೊರೆಯುತ್ತಾರೆ ಎಂಬ ಗಾಳಿಸುದ್ದಿಗೆ ಪುಷ್ಟಿ ನೀಡಿತ್ತು.












Click it and Unblock the Notifications