Industry: ಎಚ್ಡಿ ಕುಮಾರಸ್ವಾಮಿ, ಎಂಬಿ ಪಾಟೀಲ್ ಭೇಟಿಗೆ ಮಹೂರ್ತ, ಹೆಚ್ಚಾಯ್ತು ಕುತೂಹಲ
ಬೆಂಗಳೂರು, ಜೂನ್ 18: ಕರ್ನಾಟಕದ ಕೈಗಾರಿಕೆ ವಲಯಕ್ಕೆ ಮತ್ತಷ್ಟು ಚೈತನ್ಯ ಬಂದಿದೆ ಎನ್ನಬಹುದು. ಕಾರಣ ಒಂದು ಕಡೆ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ನೇತೃತ್ವದಲ್ಲಿ ಸಾಕಷ್ಟು ಕಂಪನಿಗಳು ಹೂಡಿಕೆಗೆ ಮುಂದಾಗಿವೆ. ಇದರ ಬೆನ್ನಲ್ಲೆ ಕೇಂದ್ರದಲ್ಲಿ ಕರ್ನಾಟಕದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿಯವರು ಭಾರೀ ಕೈಗಾರಿಕೆ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದೀಗ ಈ ಇಬ್ಬರು ಕೈಗಾರಿಕಾ ಸಚಿವರುಗಳ ಭೇಟಿಗೆ ಮುಹೋತ್ಸವ ಫಿಕ್ಸ್ ಆಗಿದೆ.
ಹೌದು, ಕರ್ನಾಟಕದವರೇ ಆದ ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿ ಭಾರೀ ಕೈಗಾರಿಕಾ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಸೆಮಿಕಂಡಕ್ಟರ್ ಉದ್ಯಮಕ್ಕೆ ಹೂಡಿಕೆ ಆಕರ್ಷಣೆ ಮತ್ತು ಮುಂದಿನ ಬೆಳವಣಿಗೆ ಕುರಿತು ಚರ್ಚಿಸಲು ಸದ್ಯದಲ್ಲೇ ಅವರನ್ನು ಭೇಟಿ ಮಾಡಲಾಗುವುದು ಸೋಮವಾರ ಎಂದು ರಾಜ್ಯ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.

ಅಮೆರಿಕಾ ಕಂಪನಿಗೆ ಶೇ.50 ಪ್ರೋತ್ಸಾಹಧನ
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತಿನಲ್ಲಿ ನೆಲೆಯೂರಲಿರುವ ಅಮೆರಿಕದ ಮೈಕ್ರಾನ್ ಸೆಮಿಕಂಡಕ್ಟರ್ ಕಂಪನಿಗೆ ಕೇಂದ್ರ ಸರ್ಕಾರ ಶೇಕಡಾ 50 ಮತ್ತು ಅಲ್ಲಿನ ರಾಜ್ಯ ಸರ್ಕಾರ ಶೇ 20ರಷ್ಟು ಪ್ರೋತ್ಸಾಹಧನ ನೀಡುತ್ತಿವೆ.
ನಮಗೂ ಇದೇ ಮಾದರಿಯ ಉತ್ತೇಜನ ಬೇಕಾಗಿದೆ. ಈ ಸಂಬಂಧ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬಂಡವಾಳ ಆಕರ್ಷಣೆ ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಸೆಮಿಕಂಡಕ್ಟರ್ ಕ್ಷೇತ್ರವು ಆಧುನಿಕ ಜಗತ್ತಿನಲ್ಲಿ ಪ್ರಮುಖ ಉದ್ಯಮವಾಗಿದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸಮಾನ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

ಕುಮಾರಸ್ವಾಮಿ ಬೆಂಬಲಿಸಿದ್ದ ಎಂಬಿ ಪಾಟೀಲ್
ಇತ್ತೀಚೆಗೆ ಗುಜರಾತ್ನಲ್ಲಿ ಕೈಗಾರಿಕೆಗೆ ಅತ್ಯಧಿಕ ಷೇರು ನೀಡಲು ಸಿದ್ಧವಾಗಿರುವ ಕೇಂದ್ರ ಸರ್ಕಾರದ ನಿಲುವನ್ನು ಎಚ್ಡಿ ಕುಮಾರಸ್ವಾಮಿ ಆರೋಗ್ಯಕರ ರೀತಿಯಲ್ಲಿ ಆಕ್ಷೇಪಿಸಿದ್ದರು. ಅಂದರೆ ಒಂದು ರಾಜ್ಯಕ್ಕೆ ಭಾರೀ ಮಟ್ಟದಲ್ಲಿ ಕೈಗಾರಿಕೆಗೆ ಪ್ರೋತ್ಸಾಹ ನೀಡುವಂತೆ ಎಲ್ಲ ರಾಜ್ಯಗಳಿಗೂ ನೀಡಬೇಕು ಎಂದಿದ್ದರು.
ಅವರ ಈ ಮಾತನ್ನು ಬೆಂಬಲಿಸಿದ್ದ ರಾಜ್ಯ ಸಚಿವ ಎಂಬಿ ಪಾಟೀಲ್ ಅವರು, ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ನೀತಿಯನ್ನು ಎಲ್ಲ ರಾಜ್ಯಗಳಲ್ಲೂ ಜಾರಿಗೆ ತರಲಿ ಎಂದು ಹೇಳಿದ್ದರು. ಈ ವಿಚಾರವಾಗಿ ಕುಮಾರಸ್ವಾಮಿಯವರನ್ನು ಅವರು ಬೆಂಬಲಿಸಿದ್ದರು. ಇದೀಗ ಕುಮಾರಸ್ವಾಮಿಯವರನ್ನು ಶೀಘ್ರವೇ ಭೇಟಿ ಮಾಡುವುದಾಗಿ ಹೇಳಿದ್ದಾರೆ. ಇದು ಕುತೂಹಲ ಹೆಚ್ಚಾಗುವಂತೆ ಮಾಡಿದೆ.












Click it and Unblock the Notifications