'ಸಚಿವ ಅಶ್ವಥ್ ನಾರಾಯಣ ಮಲ್ಲೇಶ್ವರಂನ ಗುಳುಂ ನಾರಾಯಣ'
ಬೆಂಗಳೂರು, ಮೇ 4: ಗುತ್ತಿಗೆದಾರರಿಂದ ಕಮಿಷನ್ ಮತ್ತು ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಆರೋಪ, ಪ್ರತ್ಯಾರೋಪ ತಾರಕಕ್ಕೇರುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೂಡಾ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಿಎಸ್ಐ ನೇಮಕಾತಿ ವಿಚಾರದಲ್ಲಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಅವರ ಪಾತ್ರವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಇನ್ನು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಅವರೂ ಸಚಿವರ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದಾರೆ.
"ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಈ ದೇಶದ ಶ್ರೀಮಂತ ಎನ್ಜಿಓ, ಆ ಸಂಸ್ಥೆಗೆ ಹಣ ಎಲ್ಲಿಂದ ಬರುತ್ತದೆ. ಇಂತಹ ಭ್ರಷ್ಟಾಚಾರದ ಹಣದಿಂದಲೇ ಆರ್ಎಸ್ಎಸ್ ಬೆಳೆಯುತ್ತಿರುವುದು. ಪ್ರತಿಯೊಬ್ಬ ಸಚಿವರ ಬಳಿಯೂ ಆರ್ಎಸ್ಎಸ್ ಕಡೆಯವರು ಇರುತ್ತಾರೆ"ಎನ್ನುವ ಗಂಭೀರ ಆರೋಪವನ್ನು ಹರಿಪ್ರಸಾದ್ ಮಾಡಿದರು.

ಪಕ್ಷದ ವತಿಯಿಂದ ಮಲ್ಲೇಶ್ವರದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಭಾಗವಹಿಸಿ ಮಾತನಾಡಿದ ಅವರು, "ಬಿಜೆಪಿಯು ಜನಪರ ಕೆಲಸ ಮಾಡಲು ಆಡಳಿತ ನಡೆಸುತ್ತಿಲ್ಲ. ಸಿಕ್ಕಸಿಕ್ಕಲೆಲ್ಲಾ ನಲವತ್ತು ಪರ್ಸೆಂಟ್ ಕಮಿಷನ್ ಪಡೆಯಲು ಮಾತ್ರ ಸರಕಾರ ಜೀವಂತವಾಗಿದೆ" ಎಂದು ಆರೋಪಿಸಿದರು.
"ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳಿಗೆ ನಲವತ್ತು ಪರ್ಸೆಂಟ್ ಕಮಿಷನ್ ಸಚಿವ ಅಶ್ವಥ್ ನಾರಾಯಣ ಅವರಿಗೆ ಹೋಗಬೇಕು. ಮಲ್ಲೇಶ್ವರದ ಬಹುತೇಕ ಗುತ್ತಿಗೆದಾರರು ಸಚಿವರ ಸಂಬಂಧಿಗಳೇ ಇದ್ದಾರೆ. ಈಗ ಪಿಎಸ್ಐ ನೇಮಕಾತಿಯಲ್ಲಿ ಸಚಿವರ ಸಹೋದರನೇ ಭಾಗಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ" ಎಂದು ಹರಿಪ್ರಸಾದ್ ಸಚಿವರ ವಿರುದ್ದ ಕಿಡಿಕಾರಿದರು.

"ಮಲ್ಲೇಶ್ವರದಲ್ಲಿ ಸಚಿವರು ಗುಳುಂ ನಾರಾಯಣ ಎಂದೇ ಕುಖ್ಯಾತಿ ಪಡೆದಿದ್ದಾರೆ. ನಿನ್ನೆ ಕೇಂದ್ರ ಗೃಹ ಸಚಿವರು ಕರ್ನಾಟಕಕ್ಕೆ ಬಂದಿದ್ದರು. ಅವರು ಬಂದಿದ್ದು 40% ಕಮಿಷನ್ ಹಾಗೂ ಅಕ್ರಮ ಪಿಎಸ್ಐ ನೇಮಕಾತಿಯಲ್ಲಿ ಪಾಲು ತೆಗೆದುಕೊಳ್ಳಲು. ಶಾ ಆಗಮನದಿಂದ ರಾಜ್ಯದ ಜನರಿಗೆ ನಯಾಪೈಸೆ ಪ್ರಯೋಜನವಾಗಿದೆಯಾ?" ಎಂದು ಪ್ರಶ್ನಿಸಿದರು.












Click it and Unblock the Notifications