ಬೆಂಗಳೂರು; ಅಂತರರಾಜ್ಯ ಕಾರ್ಮಿಕರ ಪ್ರತಿಭಟನೆ, ಪೊಲೀಸರಿಗೆ ಕಲ್ಲೇಟು
ಬೆಂಗಳೂರು, ಮೇ 05 : ಬೆಂಗಳೂರು ನಗರದಲ್ಲಿ ಅಂತರರಾಜ್ಯ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಂದಾಯ ಸಚಿವರು, ಪೊಲೀಸ್ ಆಯುಕ್ತರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು.
ನೂರಾರು ವಲಸೆ ಕಾರ್ಮಿಕರು ಸೋಮವಾರ ರಾತ್ರಿ ಮಾದಾವರ ಬಳಿ ಪ್ರತಿಭಟನೆ ನಡೆಸಿದರು. ಕಾರ್ಮಿಕರನ್ನು ಸಮಾಧಾನ ಪಡಿಸಲು ಹೋದ ಪೀಣ್ಯ ಠಾಣೆಯ ಇನ್ಸ್ಪೆಕ್ಟರ್ ಮೇಲೆ ಕಲ್ಲು ತೂರಾಟ ನಡೆಸಿದರು, ಇದರಿಂದ ಅವರ ಹಣೆಗೆ ಗಾಯವಾಯಿತು.
ತಮ್ಮನ್ನು ತವರು ರಾಜ್ಯಕ್ಕೆ ವಾಪಸ್ ಕಳಿಸಲು ತಕ್ಷಣ ರೈಲುಗಳ ವ್ಯವಸ್ಥೆ ಮಾಡಬೇಕು ಎಂದು ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಬಿಐಇಸಿ ಬಳಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು.

ಕಂದಾಯ ಸಚಿವ ಆರ್. ಅಶೋಕ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಸ್ಥಳಕ್ಕೆ ಆಗಮಿಸಿದರು. ಕಾರ್ಮಿಕರ ಜೊತೆ ಮಾತುಕತೆ ನಡೆಸಿ, ತವರು ರಾಜ್ಯಕ್ಕೆ ಕಳಿಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಸೋಮವಾರ ಬೆಳಗ್ಗೆ ಎಲ್ಲರೂ ತವರು ರಾಜ್ಯಕ್ಕೆ ಮರಳಲು ಫ್ರೀಡಂ ಪಾರ್ಕ್ಗೆ ಬಂದಿದ್ದರು. ಬಿಬಿಎಂಪಿ ಅವರನ್ನು ಬಿಐಇಸಿ ಬಳಿ ಕರೆದುಕೊಂಡು ಹೋಗಿತ್ತು. ವಿಶೇಷ ರೈಲು ಬರುವುದು ತಡವಾದ ಕಾರಣ ಕಾರ್ಮಿಕರು ರಾತ್ರಿಯಾದರೂ ಹೊರಡಲು ಸಾಧ್ಯವಾಗಿಲ್ಲ.
ಕಳೆದ ವಾರ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ತವರು ರಾಜ್ಯಕ್ಕೆ ಮರಳಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಕರ್ನಾಟಕದಿಂದ ಇದುವರೆಗೂ 3 ರೈಲಿನಲ್ಲಿ ಉತ್ತರ ಭಾರತ ಕಡೆಯ ಕಾರ್ಮಿಕರನ್ನು ವಾಪಸ್ ಕಳಿಸಲಾಗಿದೆ.
ಕರ್ನಾಟಕದಲ್ಲಿನ ಕಾರ್ಮಿಕರ ಸಂಚಾರಕ್ಕಾಗಿ ಕೆಎಸ್ಆರ್ಟಿಸಿ ಬಸ್ ಓಡಿಸಲಾಗುತ್ತಿದೆ. ಆದರೆ, ಬೇರೆ ರಾಜ್ಯಗಳ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನ ಮೂಲಕ ಕಳುಹಿಸಿಕೊಡಲಾಗುತ್ತಿದೆ.












Click it and Unblock the Notifications