ಸುದ್ದಿಗೋಷ್ಠಿಗೆ ಕರೆದ ಡಿಸಿಎಂ, ಕ್ಯಾಮೆರಾ ಆನ್ ಮಾಡದೇ ಪ್ರತಿಭಟಿಸಿದ ಪತ್ರಕರ್ತರು
ಬೆಂಗಳೂರು, ಅಕ್ಟೋಬರ್ 11: ವಿಧಾನಸೌಧ ಕಲಾಪ ವರದಿ ಮಾಡದಂತೆ ನಿಷೇಧ ಹೇರಿದ ಸರ್ಕಾರದ ಸುದ್ದಿಗೋಷ್ಠಿಗಳನ್ನು ಪತ್ರಕರ್ತರು ಬಹಿಷ್ಕರಿಸುವ ಮೂಲಕ 'ಪಾಠ' ಕಲಿಸಲು ಮುಂದಾಗಿದ್ದಾರೆ.
ಇಂದು ಕಲಾಪ ನಡುವೆಯು ವೇಳೆ ಬಿಡುವಿನ ಸಮಯದಲ್ಲಿ ಸುದ್ದಿಯೊಂದನ್ನು ನೀಡಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪತ್ರಕರ್ತರನ್ನು ಸುದ್ದಗೋಷ್ಠಿಗೆ ಕರೆದಿದ್ದಾರೆ. ಆಹ್ವಾನದಂತೆ ಮಾಧ್ಯಮದವರೂ ಹೋಗಿದ್ದಾರೆ ಆದರೆ ಅಲ್ಲಿಗೆ ಹೋಗಿ ಕ್ಯಾಮೆರಾ ಸಹ ಆನ್ ಮಾಡದೆ ಡಿಸಿಎಂ ಮುಂದೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಗೋವಿಂದ ಕಾರಜೋಳ ಅವರು 'ಸುದ್ದಿಗೋಷ್ಠಿ ಶುರು ಮಾಡೋಣ' ಎಂದಾಗ, 'ನೀವು ದೂರದರ್ಶನಕ್ಕೆ ಮಾತ್ರವೇ ಅವಕಾಶ ಕೊಡುವುದಲ್ಲವೇ ಅವರಿಗೆ ಮಾತ್ರವೇ ಸಂದರ್ಶನ ನೀಡಿ' ಎಂದು ಮಾಧ್ಯಮದವರು ಹೇಳಿದ್ದಾರೆ. ಇದರಿಂದ ಪಾಪ ಡಿಸಿಎಂ ಕಾರಜೋಳ ಅವರು ಮುಜುಗರಕ್ಕೆ ಸಿಲುಕಿದ್ದಾರೆ.

ಡಿಸಿಎಂ ಅವರು ಕೇಳಿದರೂ ಸಹ ಯಾವೊಬ್ಬ ಮಾಧ್ಯಮದವರೂ ಸಹ ಕ್ಯಾಮೆರಾ ಆನ್ ಮಾಡಲಿಲ್ಲ, ವಾಹಿನಿಯ ಲೋಗೋ ಇಡದೆ, ಡಿಸಿಎಂ ಅವರು ದೂರದರ್ಶನಕ್ಕೆ ನೀಡಿದ ಬೈಟ್ ನೋಡುತ್ತಾ ನಿಂತು ನಂತರ ಅಲ್ಲಿಂದ ವಾಪಸ್ಸಾಗಿದ್ದಾರೆ.
ಚಂದನ ವಾಹಿನಿ ಹೊರತುಪಡಿಸಿ ಕಲಾಪವನ್ನು ಯಾವ ಮಾಧ್ಯಮದವರೂ ಪ್ರಸಾರ ಮಾಡದಂತೆ ಸರ್ಕಾರ ನಿಷೇಧ ಹೇರಿದೆ. ಪತ್ರಿಕೆಗಳ ಛಾಯಾಚಿತ್ರಕಾರರಿಗೂ ಅವಕಾಶ ನಿರಾಕರಿಸಲಾಗಿದೆ. ಇದು ಮಾಧ್ಯಮಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಇಂದು ಪ್ರತಿಭಟನೆ ಸಹ ಮಾಡಲಾಗಿದೆ.












Click it and Unblock the Notifications