ಇನ್ನು ಬಿಬಿಎಂಪಿ ಪೌರಕಾರ್ಮಿಕರಿಗೂ ಮಧ್ಯಾಹ್ನದ ಬಿಸಿಯೂಟ
ಬೆಂಗಳೂರು, ಜನವರಿ 23: ಬೃಹತ್ ಬೆಂಗಳೂರು ಮಹನಾಗರ ಪಾಲಿಕೆ (ಬಿಬಿಎಂಪಿ) ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಮಹತ್ವದ ಯೋಜನೆ ಆರಂಭಿಸಿದೆ. ಇಂದು ಬೊಮ್ಮನಹಳ್ಳಿ ವಲಯದಲ್ಲಿ ಬಿಸಿಯೂಟ ಯೋಜನೆಗೆ ಮೇಯರ್ ಜಿ. ಪದ್ಮಾವತಿ ಚಾಲನೆ ನೀಡಿದರು.
ಒಟ್ಟು 32 ಸಾವಿರ ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡುವ ಯೋಜನೆ ಇದಾಗಿದ್ದು ಬೊಮ್ಮನಹಳ್ಳಿಯಿಂದ ಇದನ್ನು ಆರಂಭಿಸಲಾಗಿದೆ. ಬೊಮ್ಮನಹಳ್ಳಿಯ ಒಟ್ಟು 9 ವಾರ್ಡುಗಳ 1496 ಕಾರ್ಮಿಕರಿಗೆ ಇಲ್ಲಿ ಊಟ ನೀಡಲಾಗುತ್ತದೆ.[ಬೆಂಗಳೂರಲ್ಲಿ ಇನ್ಮುಂದೆ ನಾಯಿಗೂ ಲೈಸೆನ್ಸ್ ಬೇಕು!]

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್, " ಕರ್ನಾಟಕ ಸರಕಾರವು ಬಡವರನ್ನು ಹಸಿವು ಮುಕ್ತ ಮಾಡಲು ಈ ಯೋಜನೆ ಜಾರಿಗೆ ತಂದಿದೆ. ನಗರದ ಎಲ್ಲಾ 32 ಸಾವಿರ ಪೌರ ಕಾರ್ಮಿಕರಿಗೂ ಊಟ ನೀಡಲು ಸರಕಾರ ಪಾಲಿಕೆಗೆ ಅನುದಾನ ಬಿಡುಗಡೆ ಮಾಡಿದೆ," ಎಂದರು.

"ಸರಕಾರವು ಪೌರ ಕಾರ್ಮಿಕರಿಗೆ 5,200 ರೂಪಾಯಿ ಸಂಬಳ ಹೆಚ್ಚು ಮಾಡಿದೆ. ಇದರಲ್ಲಿ 12,200 ರೂಪಾಯಿ ಕಾರ್ಮಿಕರ ಕೈಗೆ ದಕ್ಕಲಿದೆ. ಜತೆಗೆ ಪಿಂಚಣಿ, ಆರೋಗ್ಯ ಸೌಲಭ್ಯವೂ ಇದೆ. ಸರಕಾರ ಇಷ್ಟು ಸವಲತ್ತು ಕೊಡುವಾಗ ಪೌರಕಾರ್ಮಿಕರೂ ಚೆನ್ನಾಗಿ ಕೆಲಸ ಮಾಡಬೇಕು. ಮೈಕ್ರೊಪ್ಲಾನ್ ಯೋಜನೆ ಮೂಲಕ ಕೆಲಸ ಮಾಡಿ. ನಿಮಗೆ ಕೊಟ್ಟಿರುವ ಅರ್ಧ ಕಿಲೋ ಮೀಟರ್ ಜಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದರಿಂದ ಬಿಬಿಎಂಪಿಗೂ ಒಳ್ಳೆಯ ಹೆಸರು ಬರುತ್ತೆ," ಎಂದು ನೆರೆದಿದ್ದ ಪೌರ ಕಾರ್ಮಿಕರಿಗೆ ಪದ್ಮಾವತಿ ಕರೆ ನೀಡಿದರು. ಮುಂದಿನ ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಲಾಗುವುದು. ಗುತ್ತಿಗೆದಾರರು ಕಡ್ಡಾಯವಾಗಿ ಪೌರಕಾರ್ಮಿಕರಿಗೆ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಲೇಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ರೆಡ್ಡಿ, ಸ್ಥಳೀಯ 8 ಕಾರ್ಪೊರೇಟರುಗಳು ಭಾಗಿಯಾಗಿದ್ದರು.












Click it and Unblock the Notifications