ಸಿದ್ದು ಸರ್ಕಾರದ ವಿರುದ್ಧ ಲೋಕಾಯುಕ್ತರ ಅತೃಪ್ತಿ!
ಬೆಂಗಳೂರು, ಜ.10 : ರಾಜ್ಯಪಾಲರ ನಂತರ ಲೋಕಾಯುಕ್ತರು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 94 ಮಂದಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡದ ಸರ್ಕಾರದ ವಿರುದ್ಧ ಲೋಕಾಯುಕ್ತ ಭಾಸ್ಕರ್ ರಾವ್ ಕಿಡಿಕಾರದ್ದು, ಈ ಬಗ್ಗೆ ರಾಜ್ಯಪಾಲರಿಗೆ ವರದಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಲೋಕಾಯುಕ್ತ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್, ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪಗಳಡಿ 94 ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆಯಲಾಗಿದೆ. ಆದರೆ, ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಸರ್ಕಾರದ ಅಸಹಕಾರದ ಧೋರಣೆ ಕುರಿತು ರಾಜ್ಯಪಾಲರಿಗೆ ವರದಿ ನೀಡಲು ನಿರ್ಧರಿಸಲಾಗಿದೆ ಎಂದರು.

ಭ್ರಷ್ಟಾಚಾರ ಆರೋಪಗಳಡಿ 94 ವಿವಿಧ ದರ್ಜೆ ಸರ್ಕಾರಿ ನೌಕರರ ವಿರುದ್ಧ ಸರ್ಕಾರದಿಂದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮೂರು ತಿಂಗಳಿನಿಂದ 19 ಪ್ರಕರಣಗಳು, ಆರು ತಿಂಗಳಿನಿಂದ 28 ಪ್ರಕರಣಗಳು ಒಂದು ವರ್ಷದಿಂದ 23 ಪ್ರಕರಣಗಳು ಬಾಕಿ ಇದ್ದು, ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದರು.
ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರ 3 ತಿಂಗಳೊಳಗೆ ವಿಚಾರಣೆ ಕೈಗೊಳ್ಳಲು ಅನುಮತಿ ನೀಡಬೇಕು. ಸರ್ಕಾರಕ್ಕೆ 4 ತಿಂಗಳವರೆಗೆ ಸಮಯಾವಕಾಶ ಪಡೆಯಲು ಅವಕಾಶವಿದೆ. ಆದರೆ, 94 ಪ್ರಕರಣಗಳಲ್ಲಿ ಎರಡು ಬಾರಿ ಪತ್ರ ಬರೆದಿದ್ದರೂ ಸರ್ಕಾರದ ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ ಎಂದು ಲೋಕಾಯುಕ್ತರು ಹೇಳಿದರು.
ಸರ್ಕಾರ ನಿಗದಿತ ಅವಧಿಯೊಳಗೆ ಅನುಮತಿ ಕೊಡದಿದ್ದರೆ ಸರ್ಕಾರದ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಲೋಕಾಯುಕ್ತರಿಗೆ ಇಲ್ಲ. ಸರ್ಕಾರದ ಈ ರೀತಿಯ ನಿರ್ಲಕ್ಷ್ಯ ಧೋರಣೆ ಬಗ್ಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ಪತ್ರ ಬರೆಯಲಾಗುವುದು. ಅವರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಸೂಚಿಸುವಂತೆ ಮನವಿ ಮಾಡಲಾಗುವುದು ಎಂದರು.
ದೂರುಗಳು ವಿಲೇವಾರಿಯಾಗಿವೆ : ಲೋಕಾಯುಕ್ತರಾಗಿ ಅಧಿಕಾರವಹಿಸಿಕೊಂಡ ನಂತರ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ವೈ.ಭಾಸ್ಕರ್ ರಾವ್ ಹೇಳಿದರು. 2013ರ ಪ್ರಾರಂಭದಲ್ಲಿ ಒಟ್ಟು 13, 619 ದೂರುಗಳು ಬಾಖಿ ಉಳಿದಿದ್ದವು. 4, 335 ದೂರು ದಾಖಲಾಗಿದ್ದು, ಇಲ್ಲಿವರೆಗೆ ಒಟ್ಟು 11,010 ದೂರುಗಳು ಇತ್ಯರ್ಥವಾಗಿವೆ. ಇನ್ನು 6,944 ದೂರುಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.












Click it and Unblock the Notifications