ಬೆಂ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಅಂತರದಿಂದ ಗೆಲುವು ಖಚಿತ: ಆರ್ ಅಶೋಕ
ಬೆಂಗಳೂರು ಮಾರ್ಚ್ 17 2019: ಜಾತಿ ಸಮೀಕರಣದಲ್ಲಿ ಸಿದ್ದ ಹಸ್ತರಾಗಿದ್ದ ಅನಂತಕುಮಾರ್ ಇಲ್ಲದ ಮೊದಲ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿಯ ಚುನಾವಣೆ ತುಂಬಾ ಪ್ರಾಮುಖ್ಯತೆ ಪಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25 ಕ್ಕೂ ಹೆಚ್ಚು ಸ್ಥಾನ ಪಡೆಯಲಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯ ಯಶಸ್ಸಿಗಾಗಿ ತೇಜಸ್ವಿನಿ ಅನಂತ ಕುಮಾರ್ ಇಂದು ಸುತ್ತೂರು ಶ್ರೀ ಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿ ಆರ್ ಅಶೋಕ್ ಮಾತನಾಡಿ, ಚುನಾವಣಾ ತಯಾರಿ ತುಂಬಾ ಚೆನ್ನಾಗಿದೆ. ಈ ಬಾರಿಯ ಚುನಾವಣೆ ದೇಶಕ್ಕೆ ಅಷ್ಟೇ ಅಲ್ಲ, ಇಡೀ ಜಗತ್ತಿನ ಗಮನ ಸೆಳೆದಿರುವಂತಹದ್ದು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಆಶಯ ನಮ್ಮದು. ಅನಂತಕುಮಾರ್ ಅವರು ಪ್ರತಿ ಬಾರಿ ಚುನಾವಣಾ ಸಂಧರ್ಭದಲ್ಲಿ ಗುರು ಹಿರಿಯರನ್ನು ಭೇಟಿ ಆಗಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಇದೆ ಪರಂಪರೆಯ ನ್ನು ನಾವು ಮುಂದುವರೆಸಿದ್ದೇವೆ. ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಅನಂತರದಿಂದ ಗೆಲುವು ಸಾಧಿಸಲಿದ್ದೇವೆ ಎಂದರು.

ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ನಂತರ ಮಾತನಾಡಿದ ತೇಜಸ್ವಿನಿ
ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ನಂತರ ಮಾತನಾಡಿದ ತೇಜಸ್ವಿನಿ ಅನಂತ ಕುಮಾರ್, ಸುತ್ತೂರು ಶ್ರೀಗಳು ಜೊತೆಯಲ್ಲಿ ಅನಂತ ಕುಮಾರ್ ಅವರು ಉತ್ತಮ ಭಾಂಧವ್ಯ ಹೊಂದಿದ್ದರು. ನನ್ನ ಮಕ್ಕಳು ಕೂಡಾ ಜೆ ಎಸ್ ಎಸ್ ವಿದ್ಯಾಸಂಸ್ಥೆ ಗಳಲ್ಲಿ ವಿಧ್ಯಾಭ್ಯಾಸ ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಗೆಲವು ಸಾಧಿಸಲು ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದರು. ತ್ಯಾಗರಾಜ ನಗರದ ಸುತ್ತೂರು ಸದನದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಶಾಸಕ ವಿ ಸೋಮಣ್ಣ ಸಾಥ್ ನೀಡಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು ನವೆಂಬರ್ 12 ರಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು. 1996 ರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿ ಸತತ ಆರು ಬಾರಿ ಗೆದ್ದ ಅನಂತ್ ಕುಮಾರ್ ಈ ಭಾಗದ ಜನರಿಗೆ ಅಚ್ಚುಮೆಚ್ಚಿನ ನಾಯಕ ಎನ್ನಿಸಿದ್ದರು. ಮಧ್ಯಮ ವರ್ಗದ ಹಿಂದು ಮತಗಳೇ ಹೆಚ್ಚಿರುವ ಬೆಂಗಳೂರು ದಕ್ಷಿಣ ಭಾಗದಲ್ಲಿ ಅನಂತ್ ಕುಮಾರ್ ಅವರ ದಾಖಲೆಯನ್ನು ಬಿಜೆಪಿ ಉಳಿಸಿಕೊಂಡು ಹೋಗುತ್ತದೆಯೇ, ಅಥವಾ ಈ ದಾಖಲೆಯನ್ನು ಕಾಂಗ್ರೆಸ್ ಮುರಿಯುತ್ತದೆಯೇ ಎಂಬುದನ್ನು ಲೋಕಸಭಾ ಚುನಾವಣೆಯಲ್ಲಿ ಕಾದು ನೋಡಬೇಕಿದೆ.

ಅನಂತ್ ಅವರ ಕೊಡುಗೆಯನ್ನು ಸ್ಮರಿಸಿದ ತೇಜಸ್ವಿನಿ
'ಅನಂತ್ ಕುಮಾರ್ ಅವರು ಬೆಂಗಳೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಅವರು ನೀಡಿರುವ ಕೊಡುಗೆ ದೊಡ್ಡದು' ಎಂದರು. ನನ್ನ ಮೇಲೆ ನಂಬಿಕೆ ಇಟ್ಟು ಬೆಂಗಳೂರು ದಕ್ಷಿಣಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧಳಾಗಿರುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಕೃತಜ್ಞತೆಗಳು' ಎಂದು ತಮ್ಮ ಹೆಸರನ್ನು ಅಭ್ಯರ್ಥಿಯಾಗಿ ಶಿಫಾರಸು ಮಾಡಿದ ಬಳಿಕ ಹೇಳಿದರು. ಆರ್.ಅಶೋಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿ.ಸೋಮಣ್ಣ, ಉದಯ್ ಗರುಡಾಚಾರ್ ಸೇರಿದಂತೆ ವಿವಿಧ ನಾಯಕರು ಪಾಲ್ಗೊಂಡು, ತೇಜಸ್ವಿನಿಯನ್ನು ಅಭ್ಯರ್ಥಿಯಾಗಿ ಶಿಫಾರಸು ಮಾಡಿದ್ದಾರೆ. ಬಿಜೆಪಿ ತನ್ನ ಅಧಿಕೃತ ಪಟ್ಟಿಯನ್ನು ಮಾರ್ಚ್ 18ರಂದು ಪ್ರಕಟಿಸುವ ಸಾಧ್ಯತೆಯಿದೆ.

2014ರ ಲೋಕಸಭೆ ಫಲಿತಾಂಶ
2014ರಲ್ಲಿ ಬಿಜೆಪಿಯ ಅನಂತಕುಮಾರ್ 6,33,816 ಮತಗಳು
ಕಾಂಗ್ರೆಸ್ಸಿನ ನಂದನ್ ನಿಲೇಕಣಿ : 4,05,241 ಮತಗಳು
ಜೆಡಿಎಸ್ ನ ರುತ್ ಮನೋರಮ : 25,677 ಮತಗಳು
ಎಎಪಿಯ ನೀನಾ ನಾಯ್ಕ್ : 21,403 ಮತಗಳು
ಬಿಟಿಎಂ ಲೇಔಟ್, ಬಸವನಗುಡಿ, ಬೊಮ್ಮನಹಳ್ಳಿ, ಚಿಕ್ಕಪೇಟೆ, ಗೋವಿಂದರಾಜನಗರ, ಜಯನಗರ, ಪದ್ಮನಾಭನಗರ, ವಿಜಯನಗರ ವಿಧಾನಸಭಾ ಕ್ಷೇತ್ರಗಳನ್ನು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಹೊಂದಿದೆ.












Click it and Unblock the Notifications