ಕೆಆರ್ ಪುರಂ ಉತ್ಸವದಲ್ಲಿ ಸಿದ್ದಗಂಗಾ ಶ್ರೀಗಳ 111 ಅಡಿ ಕಟೌಟ್
ಬೆಂಗಳೂರು, ಫೆಬ್ರವರಿ 20: ಸಿಲಿಕಾನ್ ಸಿಟಿ ಬೆಂಗಳೂರು ನಗರ ಇದೇ ಮೊದಲ ಬಾರಿಗೆ ಅತ್ಯದ್ಭುತವಾದ ಸಾಂಸ್ಕೃತಿಕ ಉತ್ಸವಕ್ಕೆ ಸಾಕ್ಷಿಯಾಗಲಿದೆ. ಫೆಬ್ರವರಿ 24 ರಿಂದ ಮಾರ್ಚ್ 10 ರವರೆಗೆ ಕೆ.ಆರ್.ಪುರ ಉತ್ಸವ ನಡೆಯಲಿದೆ. ಒಟ್ಟು 15 ದಿನಗಳ ಕಾಲ ನಡೆಯಲಿರುವ ಈ ಸಾಂಸ್ಕೃತಿಕ ಉತ್ಸವ ಹಲವಾರು ಅಚ್ಚರಿಗಳು, ಮನೋರಂಜನೆ, ಮಾರ್ಗದರ್ಶಿ ಉಪನ್ಯಾಸಗಳು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಒದಗಿಸಿಕೊಡಲಿದೆ.
ಬರೋಬ್ಬರಿ 15 ದಿನಗಳ ಕಾಲ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಇದಾಗಿದ್ದು, ಸಮಾಜ ಸೇವಕರಾದ ಕೆ.ಎನ್.ಪ್ರಕಾಶ್ ಅಧ್ಯಕ್ಷತೆಯ ವಲ್ರ್ಡ್ ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್ ನೇತೃತ್ವದಲ್ಲಿ ವೀರ್ಗ್ರೂಪ್ ಸಂಸ್ಥೆಯ ಉಸ್ತುವಾರಿಯಲ್ಲಿ ಈ ಉತ್ಸವ ನಡೆಯುತ್ತಿದೆ.
ಈ ಉತ್ಸವದ ಹಿಂದಿನ ಉದ್ದೇಶ ಸಮಾಜಸೇವೆಯಾಗಿದೆ. ಇದರಿಂದ ಸಂಗ್ರಹವಾಗುವ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುತ್ತದೆ. ಗುದ್ದಲಿ ಪೂಜೆಯ ನಂತರ ಈ ಮಹತ್ವದ ಉತ್ಸವದ ಬಗ್ಗೆ ಮಾಹಿತಿ ನೀಡಿದ ವಲ್ರ್ಡ್ ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್ನ ಅಧ್ಯಕ್ಷರಾದ ಕೆ.ಎನ್.ಪ್ರಕಾಶ್ ಅವರು, ಇದು ಕೇವಲ ಕೆ.ಆರ್.ಪುರ ಉತ್ಸವವಲ್ಲ. ಇದು ಇಡೀ ಬೆಂಗಳೂರಿನ ಉತ್ಸವವಾಗಿದೆ. ಸತತ 15 ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ದಿಗ್ಗಜರು ವೇದಿಕೆಯನ್ನು ಅಲಂಕರಿಸಲಿದ್ದಾರೆ ಎಂದು ತಿಳಿಸಿದರು.

ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಬೃಹತ್ ಕಟೌಟ್
ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಬೃಹತ್ ಕಟೌಟ್ಗೆ ಹೈಡ್ರಾಲಿಕ್ ಕ್ರೇನ್ ಮೂಲಕ ಪುಷ್ಪಾರ್ಚನೆ ನಡೆಸಲಾಗುತ್ತದೆ. ನಾವು ಜನರಿಗೆ ಮನೋರಂಜನೆ ನೀಡುವುದಷ್ಟಕ್ಕೆ ಈ ಕಾರ್ಯಕ್ರಮವನ್ನು ಸೀಮಿತಗೊಳಿಸಿಲ್ಲ. ಬದಲಾಗಿ ಮನೋರಂಜನೆಯ ಜೊತೆ ಮಾನವತೆಯ ಸಾರ್ಥಕತೆ ಎಂಬ ಟ್ಯಾಗ್ಲೈನ್ನೊಂದಿಗೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರಕಟಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮ ದತ್ತು ತೆಗೆದುಕೊಳ್ಳುವ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.

ಕಿಂದರಿಜೋಗಿಗಳಿರುವ ಗ್ರಾಮಗಳ ದತ್ತು ಸ್ವೀಕಾರ
ಈ ಗ್ರಾಮದಲ್ಲಿ ತುಂಡುಬಟ್ಟೆಗಳಲ್ಲಿ ಹೆಣೆದ ಜೋಪಡಿಗಳಲ್ಲಿ 180 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿನ ಜನಸಂಖ್ಯೆ ಸುಮಾರು 3 ಸಾವಿರದಷ್ಟಿದೆ. ಕಿಂದರಿಜೋಗಿ ಎಂದು ಕರೆಯಲ್ಪಡುವ ಈ ಜನಾಂಗ ಮೂಲತಃ ಜಾನಪದ ಕಲಾವಿದರನ್ನು ಹೊಂದಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಕುಟುಂಬಗಳಿವು. ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಗೆ ಕುಡಿಯುವ ನೀರು, ವಿದ್ಯುತ್, ಮಕ್ಕಳಿಗೆ ಶಿಕ್ಷಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ನಿರ್ಧಾರ ಮಾಡಿದ್ದೇವೆ ಎಂದರು. ಇದಲ್ಲದೇ, ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಸ್ವಾಮೀಜಿಯವರ 111 ಅಡಿ ಎತ್ತರದ ಕಟೌಟ್ಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ ಮತ್ತು ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ 111 ವಿದ್ಯಾರ್ಥಿಗಳ ಶೈಕ್ಷಣಿಕ ಖರ್ಚು ಮತ್ತು ಅವರ ಇತರೆ ಖರ್ಚುಗಳನ್ನು ವೀರ್ ಗ್ರೂಪ್ ಭರಿಸಲಿದೆ ಎಂದು ತಿಳಿಸಿದರು.

ಒಂದೇ ವೇದಿಕೆಯಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ
ಈ ಸಾಂಸ್ಕೃತಿಕ ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ರಂಗದ ದಿಗ್ಗಜ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸಂಗೀತ ಮಾಂತ್ರಿಕ ಹಂಸಲೇಖ ಅವರು 32 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೆಬ್ರವರಿ 24 ರಂದು ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ರವಿಹಂಸ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಇಬ್ಬರೂ ಸಂಗೀತ ರಸಸಂಜೆಯನ್ನು ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಅವರು, "ವರ್ಲ್ಡ್ ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್ ಮತ್ತು ವೀರ್ ಗ್ರೂಪ್ ಸಂಸ್ಥೆಗಳು ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದು ಸ್ತುತ್ಯಾರ್ಹವಾಗಿದೆ. ನಮ್ಮ ಸಿದ್ದಗಂಗಾ ಮಠದ 111 ಮಕ್ಕಳ ವಿದ್ಯಾಭ್ಯಾಸದ ಎಲ್ಲಾ ಖರ್ಚುಗಳನ್ನು ಈ ಸಂಸ್ಥೆಗಳೇ ವಹಿಸಿಕೊಳ್ಳುತ್ತಿರುವುದು ಆದರ್ಶಪ್ರಾಯವಾಗಿದೆ'' ಎಂದು ಬಣ್ಣಿಸಿದರು.
"ಇದೇ ರೀತಿ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮ ದತ್ತು ತೆಗೆದುಕೊಂಡು ಅಲ್ಲಿನ ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಮುಂದಾಗಿರುವುದು ವಲ್ರ್ಡ್ ಹೆಲ್ತ್ ಅಂಡ್ ಪಾವರ್ಟಿ ಟ್ರಸ್ಟ್ ನ ಸಮಾಜಮುಖಿ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ'' ಎಂದು ಶ್ಲಾಘಿಸಿದರು.

ಕೆ.ಆರ್.ಪುರ ಉತ್ಸವದ ಕಾರ್ಯಕ್ರಮಗಳ ಪಟ್ಟಿ
ಫೆಬ್ರವರಿ 24 ರಂದು ಸಂಜೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸಂಗೀತಬ್ರಹ್ಮ ಹಂಸಲೇಖ ಅವರಿಬ್ಬರು ಪ್ರೇಮಲೋಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಫೆಬ್ರವರಿ 25 ರಂದು ಸಂಜೆ 6 ಗಂಟೆಗೆ ಕುಚ್ಚಿಕು ಗೆಳೆಯರಾದ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ನಟನೆಯ ಚಿತ್ರಗಳ ಹಾಡುಗಳ ನೃತ್ಯ ಇರಲಿದೆ.
ಇನ್ನು ಫೆಬ್ರವರಿ 26 ರಂದು ಸಂಜೆ 6 ಗಂಟೆಗೆ ಸೇರಲಿರುವ ಸಾವಿರಾರು ಪ್ರೇಕ್ಷಕರು ನಗೆಗಡಲಲ್ಲಿ ತೇಲಲಿದ್ದಾರೆ. ಕಾಮಿಡಿ ಕಲಿಗಳು ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ಶಿವಕುಮಾರ್ ನೇತೃತ್ವದ ಕಾಮಿಡಿ ಕಿಲಾಡಿಗಳ ತಂಡ ಇಡೀ ರಾತ್ರಿ ನಗೆಬುಗ್ಗೆಯನ್ನು ಉಕ್ಕಿಸಲಿದೆ.
ಫೆಬ್ರವರಿ 27 ರಂದು ಸಂಜೆ 6 ಕ್ಕೆ ಹಲವಾರು ಗಾಯಕರು ಕನ್ನಡ ಗಾನ ಕೋಗಿಲೆ ಹೆಸರಿನಲ್ಲಿ ಸಂಗೀತ ರಸಸಂಜೆ ನಡೆಸಿಕೊಡಲಿದ್ದಾರೆ.
ಇನ್ನು ಫೆಬ್ರವರಿ 28 ರಂದು ಸಂಜೆ 6 ಗಂಟೆಗೆ ದೇಸೀ ಬೀಟ್ಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ ತಿಂಗಳ ಕಾರ್ಯಕ್ರಮದಲ್ಲಿ ಮನರಂಜನೆ
ಮಾರ್ಚ್ 1 ರಂದು ಸಂಜೆ 6 ಕ್ಕೆ ತಬಲಾ ನಾಣಿ ನೇತೃತ್ವದ ತಂಡ ನಗೆ ನಗಾರಿಯನ್ನು ಬಾರಿಸಲಿದೆ.
ಮಾರ್ಚ್ 2 ರಂದು ಸಂಜೆ 6 ಗಂಟೆಯಿಂದ ಖ್ಯಾತ ಹಿನ್ನೆಲೆ ಗಾಯಕ, ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರು ನನ್ನ ಹಾಡು ನನ್ನದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮಾರ್ಚ್ 3 ರಂದು ಸಂಜೆ ಕನ್ನಡ rapper ಚಂದನ್ಶೆಟ್ಟಿ ಅವರಿಂದ ಕಾರ್ಯಕ್ರಮ ಇರಲಿದೆ.
ಮಾರ್ಚ್ 4 ರಂದು ಸಂಜೆ ಶಿವರಾತ್ರಿ ಅಂಗವಾಗಿ ವಿವಿಧ ಜಾನಪದ ಕಲಾವಿದರಿಂದ ನೆಲಸೊಗಡು ಶಿವ ಜನಪದ ಕಾರ್ಯಕ್ರಮ ಇರಲಿದೆ.
ಮಾರ್ಚ್ 5 ರಂದು ಪ್ರಾಣೇಶ್ ನೇತೃತ್ವದ ತಂಡದಿಂದ ನಗೆಹಬ್ಬ ಕಾರ್ಯಕ್ರಮ ಇರಲಿದೆ.
ಮಾರ್ಚ್ 6 ರಂದು ಸಂಜೆ 6 ಗಂಟೆಗೆ ಸಮರ ಕಲಾ ಪ್ರದರ್ಶನ ಇರಲಿದೆ.
ಮಾರ್ಚ್ 7 ರಂದು ಸಂಜೆ 6 ಗಂಟೆಗೆ ವಿವಿಧ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮಾರ್ಚ್ 8 ರಂದು ಸಂಜೆ 6 ಗಂಟೆಗೆ ಮಹಿಳೆಯರ ದಿನದ ಅಂಗವಾಗಿ ಮಹಿಳಾ ಕಲಾವಿದರಿಂದಲೇ ವಿವಿಧ ಬಗೆಯ ಸಾಂಸ್ಕೃತಿಕ ಸಮಾರಂಭ ಇರಲಿದೆ.
ಮಾರ್ಚ್ 9 ರಂದು ಸಂಜೆ 6 ಗಂಟೆಗೆ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರಿಂದ ನಾನೇ ರಾಜಕುಮಾರ ಕಾರ್ಯಕ್ರಮ ಆಯೋಜನೆಗೊಂಡಿದೆ.
ಮಾರ್ಚ್ 10 ರಂದು ಸಂಜೆ 6 ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ರಸಸಂಜೆ ಇರಲಿದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications