ಸಾಮಾಜಿಕ ಜಾಲ ತಾಣಗಳಲ್ಲೂ ಕಾಂಗ್ರೆಸ್ ಪ್ರಚಾರ
ಬೆಂಗಳೂರು, ಅ.10 : ಸಾಮಾಜಿಕ ಜಾಲ ತಾಣಗಳಲ್ಲಿ ಯುಪಿಎ ಸರ್ಕಾರವನ್ನು ಮನ ಬಂದಂತೆ ಹಣಿಯುತ್ತಿರುವ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರವನ್ನು ಕಾಂಗ್ರೆಸ್ ರೂಪಿಸಿದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸಂವಹನ ವಿಭಾಗ ಉದ್ಘಾಟಿಸಲಾಗಿದೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಸೂಚನೆ ಹಿನ್ನೆಲೆಯಲ್ಲಿ ಆರಂಭಗೊಂಡಿರುವ ಕಾಂಗ್ರೆಸ್ ಸಂವಹನ ವಿಭಾಗ ಹಾಗೂ ತರಬೇತಿ ಕಾರ್ಯಾಗಾರವನ್ನು ಸಂಸದರಾದ ಪ್ರಿಯಾ ದತ್ತ, ಸಂಸದ ಭೂಪೇಂದ್ರ ರೂಡಾ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಗುರುವಾರ ಉದ್ಘಾಟಿಸಿದರು.

ಕೇಂದ್ರ ಗೃಹಖಾತೆ ಮಾಜಿ ರಾಜ್ಯ ಸಚಿವ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಈ ವಿಭಾಗದ ಅಧ್ಯಕ್ಷರಾಗಿದ್ದಾರೆ. ಸಾಮಾಜಿಕ ಜಾಲತಾಣ ಘಟಕಕ್ಕೆ ಸಂಸದ ಭೂಪೇಂದ್ರ ರೂಡಾ, ಸಂಶೋಧನಾ ಘಟಕಕ್ಕೆ ಸಂದೀಪ್ ದೀಕ್ಷಿತ್ ಮುಖ್ಯಸ್ಥರಾಗಿದ್ದಾರೆ.
ಒಟ್ಟು 14 ರಾಜ್ಯಗಳಲ್ಲಿ ಸಂವಹನ ವಿಭಾಗದ ಉದ್ಘಾಟನೆ ಹಾಗೂ ಕಾರ್ಯಾಗಾರವನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ನಡೆಸಿದೆ. ಸದ್ಯ, ಕರ್ನಾಟಕ ಸಂವಹನ ಘಟಕ ಆರಂಭಿಸಿರುವ 15ನೇ ರಾಜ್ಯವಾಗಿದೆ. ಲೋಕಸಭೆಯ ಚುನಾವಣಾ ಪ್ರಚಾರವನ್ನು ಈ ಘಟಕ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಲಿದೆ.
ಉದ್ದೇಶವೇನು : ಟ್ವೀಟರ್, ಫೇಸ್ಬುಕ್ಗಳಲ್ಲಿ ಯುಪಿಎ ಸರ್ಕಾರ, ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಮನಬಂದಂತೆ ಟೀಕಿಸಲಾಗುತ್ತಿದೆ. ಬಿಜೆಪಿ ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಯಾತ್ಮಕವಾಗಿ ಪ್ರಚಾರ ನಡೆಸುತ್ತಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪರ ಪ್ರಚಾರ ಹಾಗೂ ಬಿಜೆಪಿ ಅಪಪ್ರಚಾರಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಂವಹನ ವಿಭಾಗ ಆರಂಭಿಸಿದೆ. ಫೇಸ್ಬುಕ್, ಟ್ವೀಟರ್ ಮೂಲಕ ಅಪಪ್ರಚಾರಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಸೂಚನೆ ನೀಡಲಾಗಿದೆ.
ಆಡಳಿತಾತ್ಮಕ ವಿಚಾರಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡುವ ಸಂದರ್ಭದಲ್ಲಿ ವಕ್ತಾರರಲ್ಲಿ ಹೊಂದಾಣಿಕೆ ಇರಬೇಕು ಎಂದು ಕಾಂಗ್ರೆಸ್ ಸೂಚನೆ ನೀಡಿದೆ. ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳನ್ನು ಹೇಗೆ ಪ್ರಚಾರಕ್ಕೆ ಬಳಸಿಕೊಳ್ಳುತ್ತದೆ ಎಂದು ಕಾದು ನೋಡಬೇಕು.












Click it and Unblock the Notifications