ಕರ್ನಾಟಕ ಕಠಿಣ ನಿರ್ಬಂಧ ಜನವರಿ 31ರವರೆಗೆ ಮುಂದುವರಿಕೆ
ಬೆಂಗಳೂರು, ಜನವರಿ 11: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಕರ್ನಾಟಕ ಸರ್ಕಾರವು ಮಂಗಳವಾರ ರಾತ್ರಿ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ವಿಧಿಸಿದೆ. ರಾಜ್ಯದಾದ್ಯಂತ ಎಲ್ಲಾ ರೀತಿಯ ರ್ಯಾಲಿಗಳು, ಧರಣಿಗಳು ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿದೆ. ಇನ್ನು ನಿರ್ಬಂಧಗಳು ಜನವರಿ 31ರವರೆಗೆ ಮುಂದುವರಿಕೆ ಆಗಲಿದೆ.
ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ರಾಜ್ಯ ಸರ್ಕಾರ, ಮದುವೆ ಕಾರ್ಯಕ್ರಮಗಳನ್ನು 200 ಕ್ಕಿಂತ ಹೆಚ್ಚು ಜನರು ತೆರೆದ ಜಾಗದಲ್ಲಿ ಮತ್ತು 100 ಜನರೊಂದಿಗೆ ಮುಚ್ಚಿದ ಸ್ಥಳಗಳಲ್ಲಿ ನಡೆಸಲು ಅವಕಾಶ ನೀಡಿದೆ. ಮಹಾರಾಷ್ಟ್ರ, ಕೇರಳ ಮತ್ತು ಗೋವಾ ಗಡಿಗಳಲ್ಲಿ ಕಣ್ಗಾವಲು ತೀವ್ರಗೊಳಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ಹೆಚ್ಚುವರಿ ಕ್ರಮಗಳನ್ನು ವಿಧಿಸಬಹುದು ಎಂದು ರಾಜ್ಯ ಸರ್ಕಾರವು ಸೇರಿಸಿದೆ.
ಕಡಿಮೆ ಪಾಸಿಟಿವಿಟಿ ಇರುವ ಪ್ರದೇಶದಲ್ಲಿ ನಿರ್ಬಂಧಗಳನ್ನು ಸಡಿಲಿಸುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಳ್ಳಿಹಾಕಿದ ಒಂದು ದಿನದ ನಂತರ ಈ ಬೆಳವಣಿಗೆಯು ಬಂದಿದೆ. ಬದಲಿಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಬಸವರಾಜ ಬೊಮ್ಮಾಯಿ ಒತ್ತಿ ಹೇಳಿದ್ದಾರೆ.

"ನಾನು ಹೇಳಿದ್ದು ಕೋವಿಡ್ ಹರಡುವಿಕೆಯ ಆಧಾರದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು. ಈಗ ನೀವು ನೋಡುತ್ತಿದ್ದೀರಿ, ನಿನ್ನೆ ರಾಜ್ಯದಲ್ಲಿ 12,000 ಪ್ರಕರಣಗಳು ಕಂಡು ಬಂದಿದ್ದು, ಈ ಪೈಕಿ ಸುಮಾರು 9,000 ಬೆಂಗಳೂರಿನಲ್ಲಿಯೇ ದಾಖಲಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.6.8, ಬೆಂಗಳೂರಿನಲ್ಲಿ ಶೇ.10 ಆಗಿದೆ. ಇಡೀ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ," ಎಂದು ಸೋಮವಾರ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಜನವರಿ 4 ರಂದು ವಾರಾಂತ್ಯದಲ್ಲಿ ಕರ್ಫ್ಯೂ ವಿಧಿಸಿದೆ ಮತ್ತು ಜನವರಿ 19 ರವರೆಗೆ ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಿದೆ. ರಾತ್ರಿ ಕರ್ಫ್ಯೂ ಅನ್ನು ಇನ್ನೂ ಎರಡು ವಾರಗಳವರೆಗೆ ಮುಂದುವರಿಸಲು ನಿರ್ಧರಿಸಿದೆ. ಎಲ್ಲಾ ರ್ಯಾಲಿ, ಧರಣಿಗಳು, ಪ್ರತಿಭಟನೆಗಳು ಇತ್ಯಾದಿಗಳನ್ನು ನಿಷೇಧಿಸಲಾಗಿದೆ.
ಇನ್ನು ದೇವಸ್ಥಾನಗಳಿಗೂ ಭಕ್ತರ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ದೇವಸ್ಥಾನಗಳು, ಮಂದಿರ, ಮಸೀದಿ ಮತ್ತು ಚರ್ಚ್ಗಳಲ್ಲಿ ಪೂಜೆ ಪುನಸ್ಕಾರ, ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ. ಅಲ್ಲಿನ ಸೇವೆಗಳು ಎಂದಿನಂತೆ ನಡೆಯುತ್ತವೆ. ಆದರೆ, ಭಕ್ತರ ಪ್ರವೇಶಕ್ಕೆ ಮಾತ್ರ ಮಿತಿ ಇರಬೇಕು ಎಂದು ಸಚಿವ ಆರ್. ಅಶೋಕ್ ಹೇಳಿದರು.
ಕರ್ನಾಟಕ ಕೊರೊನಾ ಪ್ರಕರಣ
ಕರ್ನಾಟಕದಲ್ಲಿ ಮಂಗಳವಾರ 14,000 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹಾಗೂ ಐದು ಸಾವುಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 30,78,129 ಕ್ಕೆ ಏರಿಕೆ ಸಾವಿನ ಸಂಖ್ಯೆಯು 38,379 ಕ್ಕೆ ತಲುಪಿದೆ. ಡಿಸೆಂಬರ್ ಕೊನೆಯ ವಾರದಿಂದ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆ ಕಾಣುತ್ತಿದೆ. ರಾಜ್ಯದಲ್ಲಿ ಇಂದು 14,473 ದೈನಂದಿನ ಪ್ರಕರಣಗಳು ವರದಿಯಾಗಿದೆ. ಸೋಮವಾರ 11,698 ಕೋವಿಡ್ ಪ್ರಕರಣಗಳು ವರದಿ ಆಗಿದ್ದವು. ಮಂಗಳವಾರದ ಹೊಸ ಪ್ರಕರಣಗಳಲ್ಲಿ 10,800 ಬೆಂಗಳೂರು ನಗರದಲ್ಲಿ ದಾಖಲಾಗಿದೆ. 840 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 3 ಸಾವುಗಳು ಸಂಭವಿಸಿದೆ. ರಾಜ್ಯಾದ್ಯಂತ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 73,260 ಆಗಿದೆ. ಬೆಂಗಳೂರು ನಗರ ಹೊರತುಪಡಿಸಿ, ದಕ್ಷಿಣ ಕನ್ನಡದಲ್ಲಿ 583 ಹೊಸ ಪ್ರಕರಣಗಳು ದಾಖಲಾಗಿದ್ದು, ಮೈಸೂರು 562, ತುಮಕೂರು 332, ಮಂಡ್ಯ 263, ಉಡುಪಿ 250 ಪ್ರಕರಣಗಳು ದಾಖಲು ಆಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಈಗ ಒಟ್ಟು 13,19,340 ಪಾಸಿಟಿವ್ ಪ್ರಕರಣಗಳಿದ್ದು, ಮೈಸೂರು 1,82,201 ಮತ್ತು ತುಮಕೂರಿನಲ್ಲಿ 1,22,251 ಪಾಸಿಟಿವ್ ಪ್ರಕರಣಗಳಿವೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications