KRS: ದಸಾರಾಗೆ ವಿಜೃಂಭಣೆಯ 'ಕಾವೇರಿ ಆರತಿ': ಅನುಷ್ಠಾನ ಸಮಿತಿ ರಚನೆ, ₹90 ಕೋಟಿ ಅನುದಾನ
ಬೆಂಗಳೂರು, ಏಪ್ರಿಲ್ 25: ಬೆಂಗಳೂರಿನಲ್ಲಿ ಇತ್ತೀಚೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಮಾಡಿದ್ದ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಕೃಷ್ಣ ರಾಜ ಸಾಗರ (KRS) ನಲ್ಲಿ ವಿಜೃಂಭಣೆಯ ಕಾವೇರಿ ಆರತಿಗೆ ಸಿದ್ಧತೆ ನಡೆಸಿದೆ. ಕೃಷ್ಣ ರಾಜಸಾಗರದಲ್ಲಿ ಕಾವೇರಿ ಆರತಿ ನಡೆಸಲು ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ರಚಿಸಿರುವ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನ ಸಮಿತಿ ಯನ್ನು ರಚಿಸಿದೆ. ಅಗತ್ಯ ಅನುದಾನ ಸಹ ಒದಗಿಸಿದೆ.
ಕರ್ನಾಟಕ ಸರ್ಕಾರ ಕೆಆರ್ಎಸ್ನಲ್ಲಿ ವಿಜೃಂಭಣೆಯ ಕಾವೇರಿ ಆರತಿಗೆ ಮುನ್ನಡಿ ಬರೆದಿದ್ದು, ಅನುಷ್ಠಾನ ಸಮಿತಿ ರಚನೆ ಮಾಡಿ 92 ಕೋಟಿ ರೂಪಾಯಿಗಳ ಅನುದಾನ ನೀಡಿದೆ. ಈ ಮೂಲಕ ಸರ್ಕಾರ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ವಿಶ್ವವಿಖ್ಯಾತ ದಸರಾ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುವ ನಿಟ್ಟಿನಲ್ಲಿ ರಾಜ್ಯದ ಜೀವನದಿ ಕಾವೇರಿ ಮಾತೆಗೆ ನಮನ ಹಾಗೂ ಪೂಜೆ ಸಲ್ಲಿಸಲು 'ಕಾವೇರಿ ಆರತಿ'ಯನ್ನು ಆಯೋಜಿಸಲಾಗುತ್ತದೆ.
'ಕಾವೇರಿ ಆರತಿ' ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ನೀಡಿರುವ ಶಿಫಾರಸ್ಸುಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಹಂಪಿಯಲ್ಲಿ ತುಂಗಾ ಆರತಿ, ಬೆಂಗಳೂರು ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇವುಗಳ ಪ್ರಮುಖ ಪಾತ್ರವಹಿಸಿದ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (BWSSB) ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಅವರ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ರಚಿಸಲಾಗಿದೆ.
ಕರ್ನಾಟಕದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳ ಜನರ ಜೀವನದಿ ಆಗಿರುವ ಕಾವೇರಿ ಮಾತೆಗೆ ನಮನ ಹಾಗೂ ಪೂಜೆ ಸಲ್ಲಿಸುವಂತಹ 'ಕಾವೇರಿ ಆರತಿ' ಕಾರ್ಯಕ್ರಮದ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹತ್ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಕಾವೇರಿ ಮಾತೆಗೆ ನಮನ ಸಲ್ಲಿಸುವಂತಹ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಕನಸಿನ ಯೋಜನೆಯನ್ನು ವಿಜ್ರಂಭಣೆಯಿಂದ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯ ನಿರ್ವಹಿಸಲಿದೆ. ಅತ್ಯಂತ ವಿಜ್ರಂಭಣೆಯಿಂದ ಈ ಕಾರ್ಯಕ್ರಮವನ್ನು ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗುವುದು ಎಂದು ಡಾ.ರಾಮ್ ಪ್ರಸಾತ್ ಮನೋಹರ್ ಗುರುವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ..












Click it and Unblock the Notifications