Karnataka Elections: ಬೊಮ್ಮನಹಳ್ಳಿಯಲ್ಲಿ ಪ್ರೊಡ್ಯೂಸರ್ ಉಮಾಪತಿ ಗೌಡ ಫುಲ್ ಆಕ್ಟಿವ್- ಖಚಿತವಾಯಿತೇ ಕಾಂಗ್ರೆಸ್ ಟಿಕೆಟ್?
ಬೆಂಗಳೂರು, ಮಾರ್ಚ್ 31: ಬೆಂಗಳೂರಿನ ( Bengaluru ) ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಬೊಮ್ಮನಹಳ್ಳಿ ( Bommanahalli ) ಕ್ಷೇತ್ರವೂ ಒಂದು. ಈ ಕ್ಷೇತ್ರವು 2008 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಆವಾಗಿನಿಂದ ಇಲ್ಲಿವರೆಗೂ ನಡೆದಿರುವ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸತೀಶ್ ರೆಡ್ಡಿ ಅವರು ಬಿಜೆಪಿಯಿಂದ ( BJP ) ಆಯ್ಕೆಯಾಗಿದ್ದಾರೆ. ಇದೀಗ ಅವರನ್ನು ಸೋಲಿಸಲು ಕಾಂಗ್ರೆಸ್ ( Congress ) ಪಕ್ಷವು ಶತಾಯಗತಾಯ ಪ್ರಯತ್ನ ನಡೆಸಿದೆ.
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಕ್ಕಲಿಗ, ರೆಡ್ಡಿ ( ತೆಲುಗು ಭಾಷಿಗ ), ಮುಸ್ಲಿಂ ಹಾಗೂ ಎಸ್ಇ ಸಮುದಾಯದ ಮತಗಳು ದೊಡ್ಡ ಸಂಖ್ಯೆಯಲ್ಲಿವೆ. 2019ರ ಲೋಕಸಭಾ ಚುಣಾವಣೆ ಪ್ರಕಾರ, 4,25,672 ಮತದಾರರು ಇಲ್ಲಿದ್ದಾರೆ. ಈ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ.

ಇದರ ವ್ಯಾಪ್ತಿಯಲ್ಲಿ ಎಂಟು ಬಿಬಿಎಂಪಿ ವಾರ್ಡ್ಗಳು ಬರುತ್ತವೆ. ಬೊಮ್ಮನಹಳ್ಳಿ, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಹೊಂಗಸಂದ್ರ, ಮಂಗಮ್ಮನಪಾಳ್ಯ, ಅರಕೆರೆ, ಎಚ್ಎಸ್ಆರ್ ಲೇಔಟ್ ಹಾಗೂ ಜರಗನಹಳ್ಳಿ ವಾರ್ಡ್ಗಳು ಈ ಕ್ಷೇತ್ರದಲ್ಲಿವೆ.
4 ನೇ ಬಾರಿ ಸತೀಶ್ ರೆಡ್ಡಿ ಪ್ರಯತ್ನ
ಕರ್ನಾಟಕ ವಿಧಾನಸಭೆಗೆ ನಾಲ್ಕನೇ ಬಾರಿ ಆಯ್ಕೆಯಾಗಲು ಶಾಸಕ ಸತೀಶ್ ರೆಡ್ಡಿ ಕಸರತ್ತು ನಡೆಸಿದ್ದಾರೆ. ಬೇಗೂರು ಜಿಲ್ಲಿ ಪಂಚಾಯ್ತಿ, ಬೊಮ್ಮನಹಳ್ಳಿ ನಗರಸಭಾ ಅಧ್ಯಕ್ಷರಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ರೆಡ್ಡಿ ಅವರು 2008 ರಲ್ಲಿ ಬೊಮ್ಮಾನಹಳ್ಳಿಯಿಂದ ಸ್ಪರ್ಧಿಸಿ ಜಯಗಳಿಸಿದರು. ಆ ನಂತರದ 2013 ಹಾಗೂ 2018ರ ಚುನಾವಣೆಗಳಲ್ಲೂ ಗೆಲುವು ಸಾಧಿಸಿದರು. ಈ ಬಾರಿಯೂ ಜಯಗಳಿಸಲು ಸತೀಶ್ ರೆಡ್ಡಿ ಕಸರತ್ತು ನಡೆಸಿದ್ದಾರೆ. ಬಿಜೆಪಿಯಿಂದ ಅವರಿಗೆ ಟಿಕೆಟ್ ಸಿಗುವುದೂ ಬಹುತೇಕ ಖಚಿತವಾಗಿದೆ.

ಸತೀಶ್ ರೆಡ್ಡಿ ಕಟ್ಟಿ ಹಾಕಲು ಕಾಂಗ್ರೆಸ್ ತಂತ್ರ
ಈ ಬಾರಿ ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯಲೇ ಬೇಕೆಂದು ಪಣ ತೊಟ್ಟಂತಿರುವ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ. ಅಳೆದೂ ತೂಗಿ ಗೆಲುವು ಸಾಧಿಸುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದೆ. ಬೊಮ್ಮನಹಳ್ಳಿಯ ಬಲಿಷ್ಠ ಶಾಸಕ ಸತೀಶ್ ರೆಡ್ಡಿ ವಿರುದ್ಧವೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಆಲೋಚಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡರನ್ನು ಬೊಮ್ಮನಹಳ್ಳಿಯಿಂದ ನಿಲ್ಲಿಸಲು ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆದ ಉಮಾಪತಿ ಗೌಡ
ಶ್ರೀಮಂತ ಉದ್ಯಮಿ ಆಗಿರುವ ಉಮಾಪತಿ ಶ್ರೀನಿವಾಸ್ ಗೌಡ ಅವರು ಕುಟುಂಬದ ವ್ಯವಹಾರಗಳ ಜೊತೆ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರವನ್ನು ನಿರ್ಮಿಸಿ ಯಶಸ್ಸು ಕಂಡಿದ್ದಾರೆ. ಇದೀಗ ರಾಜಕೀಯ ಕ್ಷೇತ್ರದಲ್ಲೂ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ಅವರು ಕ್ಷೇತ್ರದಲ್ಲಿ ಸಾಕಷ್ಟು ಓಡಾಡಿಕೊಂಡಿದ್ದಾರೆ.

2018ರಲ್ಲೇ ರಾಜಕೀಯಕ್ಕೆ ಪ್ರವೇಶ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ ಆಗಿದ್ದ ಉಮಾಪತಿ ಗೌಡ ಅವರಿಗೆ ಟಿಕೆಟ್ ತಪ್ಪಿತ್ತು. ಟಿಕೆಟ್ಗಾಗಿ ಹಲವು ಪ್ರಯತ್ನ ಮಾಡಿದ್ದರೂ, ಟಿಕೆಟ್ ಪಡೆಯಲು ಸಫಲಾಗಿರಲಿಲ್ಲ. ಕೊನೆಯ ಹಂತದವರೆಗೂ ಉಮಾಪತಿ ಗೌಡರಿಗೆ ಟಿಕೆಟ್ ಸಿಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಅವರಿಗೆ ಟಿಕೆಟ್ ಕೈತಪ್ಪಿ ಸುಷ್ಮಾ ರಾಜಗೋಪಾಲ ರೆಡ್ಡಿ ಅವರಿಗೆ ಟಿಕೆಟ್ ಲಭಿಸಿತ್ತು. ಬಿಜೆಪಿಯ ಸತೀಶ್ ರೆಡ್ಡಿ ವಿರುದ್ಧ ಸುಷ್ಮಾ ರಾಜಗೋಪಾಲ ರೆಡ್ಡಿ ಅವರು ಸೋಲು ಕಂಡಿದ್ದರು. ಸುಷ್ಮಾ ಅವರಿಗೆ ಟಿಕೆಟ್ ಸಿಗುವಂತೆ ಮಾಡಿದ್ದು ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಓಡಾಡಿದ್ದವು.












Click it and Unblock the Notifications