ವಿಧಾನ ಪರಿಷತ್ ಚುನಾವಣೆಗೆ ದಿನಾಂಕ, ಸಿಎಂಗೆ ಧರ್ಮಸಂಕಟ?
ಬೆಂಗಳೂರು, ಜನವರಿ.27: ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿದ್ದ ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆಯ ದಿನಾಂಕ ಪ್ರಕಟಗೊಂಡಿದೆ. ಫೆಬ್ರವರಿ.17ರಂದು ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ಜನವರಿ.30ರಂದು ವಿಧಾನ ಪರಿಷತ್ ಉಪಚುನಾವಣೆ ಅಧಿಸೂಚನೆ ಹೊರ ಬೀಳಲಿದೆ. ಇನ್ನು, ಫೆಬ್ರವರಿ.06 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಲಿದೆ ಎಂದು ಚುನಾವಣಾ ಆಯೋಗವು ಘೋಷಿಸಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ.
ಬಿಜೆಪಿಯಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ತಲೆನೋವಾಗಿದೆ. ಈಗಾಗಲೇ ಡಿಸಿಎಂ ಸ್ಥಾನದಲ್ಲಿ ಇರುವ ಲಕ್ಷ್ಮಣ್ ಸವದಿಯನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.

ಕೊಟ್ಟ ಮಾತು ತಪ್ಪುತ್ತಾರಾ ಮುಖ್ಯಮಂತ್ರಿ?
ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ ಇಬ್ಬರು ಶಾಸಕರು ಸೋತು ಮನೆಯಲ್ಲಿ ಕೂರುವಂತೆ ಆಗಿದೆ. ಇತ್ತೀಚಿಗಷ್ಟೇ ಸೋತ ಅಭ್ಯರ್ಥಿಗಳಿಗೆ ಮಂತ್ರಿ ಸ್ಥಾನವಿಲ್ಲ ಎಂಬ ಹೇಳಿಕೆ ಬಿಜೆಪಿಗೆ ಜಂಪ್ ಆದವರ ಎದೆಯಲ್ಲಿ ಢವಢವವನ್ನು ಹೆಚ್ಚಿಸಿದೆ. ಹುಣಸೂರು ಮಾಜಿ ಶಾಸಕ ಹೆಚ್.ವಿಶ್ವನಾಥ್, ಹೊಸಕೋಟೆ ಮಾಜಿ ಶಾಸಕ ಎಂಟಿಬಿ ನಾಗರಾಜ್ ಹಾಗೂ ರಾಣಿಬೆನ್ನೂರಿನ ಮಾಜಿ ಶಾಸಕ ಆರ್.ಶಂಕರ್ ಕಂಗಾಲಾಗಿದ್ದಾರೆ. ಈ ಮೂವರ ಪೈಕಿ ಒಬ್ಬರಿಗೆ ವಿಧಾನ ಪರಿಷತ್ ಅಭ್ಯರ್ಥಿಯನ್ನಾಗಿ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಹೈಕಮಾಂಡ್ ಲೆಕ್ಕಾಚಾರವು ಇದಕ್ಕೆ ತದ್ವಿರುದ್ಧವಾಗಿದ್ದು, ಸಿಎಂಗೆ ಧರ್ಮಸಂಕಟ ಎದುರಾಗಿದೆ.
ರಿಜ್ವಾನ್ ಅರ್ಷದ್ ರಾಜೀನಾಮೆ ಹಿನ್ನೆಲೆ ತೆರವು:
ಇತ್ತೀಚಿಗಷ್ಟೇ ಶಿವಾಜಿನಗರ ವಿಧಾನಸಭೆಗೆ ಉಪ ಚುನಾವಣೆ ನಡೆದಿದ್ದು, ಕಾಂಗ್ರೆಸ್ ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ರಿಜ್ವಾನ್ ಅರ್ಷದ್ ರನ್ನು ಕಣಕ್ಕೆ ಇಳಿಸಿತ್ತು. ಈ ಉಪ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಿದ್ದ ಎಮ್.ಸರವಣ 36, 369 ಮತ ಪಡೆದಿದ್ದರೆ, ರಿಜ್ವಾನ್ ಹರ್ಷದ್ 49, 890 ಮತ ಪಡೆದು ವಿಧಾನಸಭೆಯನ್ನು ಪ್ರವೇಶಿಸಿದರು. ನಂತರದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.












Click it and Unblock the Notifications